1
|
“ಯುವತಿಯನ್ನು ಕಾಮದಾಶೆಯಿಂದ ನೋಡುವುದಿಲ್ಲವೆಂದು ನನ್ನ ಕಣ್ಣುಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇನೆ. |
2
|
ಸರ್ವಶಕ್ತನಾದ ದೇವರು ಜನರಿಗೆ ಏನು ಮಾಡುವನು? ದೇವರು ತನ್ನ ಉನ್ನತವಾದ ಪರಲೋಕದಿಂದ ಜನರಿಗೆ ಹೇಗೆ ಪ್ರತಿಫಲವನ್ನು ಕೊಡುವನು? |
3
|
ಆತನು ದುಷ್ಟರಿಗೆ ತೊಂದರೆಯನ್ನೂ ನಾಶನವನ್ನೂ ತಪ್ಪಿತಸ್ಥರಿಗೆ ವಿಪತ್ತನ್ನೂ ಕಳುಹಿಸುವನು. |
4
|
ನಾನು ಮಾಡುವ ಪ್ರತಿಯೊಂದು ದೇವರಿಗೆ ಗೊತ್ತು ಮತ್ತು ನಾನಿಡುವ ಪ್ರತಿಯೊಂದು ಹೆಜ್ಜೆಯನ್ನೂ ಆತನು ಗಮನಿಸುವನು. |
5
|
“ನಾನು ಸುಳ್ಳು ಹೇಳಲಿಲ್ಲ; ಜನರಿಗೆ ಮೋಸ ಮಾಡಲು ಪ್ರಯತ್ನಿಸಲೂ ಇಲ್ಲ. |
6
|
ದೇವರು ನ್ಯಾಯವಾದ ಅಳತೆಮಾನಗಳಿಂದ ನನ್ನನ್ನು ತೂಗಿದರೆ, ನಾನು ನಿರಪರಾಧಿಯೆಂದು ಆತನಿಗೆ ಗೊತ್ತಾಗುವುದು. |
7
|
ನಾನು ನೀತಿಮಾರ್ಗವನ್ನು ಬಿಟ್ಟು ಹೋಗಿದ್ದರೆ, ನನ್ನ ಕಣ್ಣುಗಳು ನನ್ನ ಹೃದಯವನ್ನು ಕೆಟ್ಟದ್ದಕ್ಕೆ ನಡೆಸಿದ್ದರೆ, ನನ್ನ ಕೈಗಳು ಪಾಪದಿಂದ ಕೊಳಕಾಗಿದ್ದರೆ, |
8
|
ನಾನು ಬಿತ್ತಿ ಬೆಳೆಸಿದ ಬೆಳೆಗಳನ್ನು ಬೇರೆಯವರು ತಿನ್ನಲಿ; ನಾನು ಬೆಳೆಸಿದ ಸಸಿಗಳು ಕೀಳಲ್ಪಡಲಿ. |
9
|
“ಒಂದುವೇಳೆ ನಾನು ಪರಸ್ತ್ರೀಯಲ್ಲಿ ಮರುಳುಗೊಂಡಿದ್ದರೆ, ನನ್ನ ನೆರೆಯವನ ಹೆಂಡತಿಯೊಂದಿಗೆ ವ್ಯಭಿಚಾರ ಮಾಡಲು ಅವನ ಮನೆಯ ಬಾಗಿಲಲ್ಲಿ ಕಾದುಕೊಂಡಿದ್ದರೆ, |
10
|
ನನ್ನ ಹೆಂಡತಿಯು ಬೇರೊಬ್ಬನಿಗೆ ಸೇವಕಿಯಾಗಲಿ; ಬೇರೆಯವರು ಆಕೆಯೊಂದಿಗೆ ಮಲಗಿಕೊಳ್ಳಲಿ. |
11
|
ಯಾಕಂದರೆ ವ್ಯಭಿಚಾರ ಅವಮಾನಕರ. ಆ ಪಾಪಕ್ಕೆ ದಂಡನೆಯಾಗಲೇಬೇಕು. |
12
|
ವ್ಯಭಿಚಾರವು ಸುಟ್ಟುನಾಶಮಾಡುವ ಬೆಂಕಿಯಂತಿದೆ. ನಾನು ಹೊಂದಿರುವ ಪ್ರತಿಯೊಂದನ್ನು ಅದು ನಾಶಮಾಡಿ ಬಿಡುತ್ತಿತ್ತು. |
13
|
“ನನ್ನ ಸೇವಕ ಸೇವಕಿಯರು ನನಗೆ ವಿರೋಧವಾಗಿ ದೂರನ್ನು ಹೊಂದಿದ್ದಾಗ ನಾನು ಅವರಿಗೆ ನ್ಯಾಯವನ್ನು ದೊರಕಿಸಿಲ್ಲದಿದ್ದರೆ |
14
|
ದೇವರು ನನ್ನನ್ನು ಮುಖಾಮುಖಿಯಾಗಿ ಸಂಧಿಸುವಾಗ ನಾನೇನು ಮಾಡಲಿ? ನಾನು ಮಾಡಿದ್ದಕ್ಕೆ ವಿವರಣೆ ಕೊಡುವಂತೆ ದೇವರು ನನ್ನನ್ನು ಕರೆಯುವಾಗ ನಾನೇನು ಉತ್ತರಕೊಡಲಿ? |
15
|
ದೇವರು ನನ್ನನ್ನು ನನ್ನ ತಾಯಿಯ ಗರ್ಭದಲ್ಲಿ ನಿರ್ಮಿಸಿದನು. ದೇವರು ನನ್ನ ಸೇವಕಸೇವಕಿಯರನ್ನೂ ನಿರ್ಮಿಸಿದನು. ದೇವರು ನಮ್ಮೆಲ್ಲರನ್ನು ನಮ್ಮ ತಾಯಂದಿರ ಗರ್ಭಗಳಲ್ಲಿ ರೂಪಿಸಿದನು. |
16
|
“ಬಡಜನರಿಗೆ ಸಹಾಯಮಾಡಲು ನಾನೆಂದೂ ನಿರಾಕರಿಸಲಿಲ್ಲ; ವಿಧವೆಯರಿಗೆ ಬೇಕಾದದ್ದನ್ನೆಲ್ಲ ನಾನು ಒದಗಿಸಿಕೊಟ್ಟೆನು. |
17
|
ನಾನು ಸ್ವಾರ್ಥದಿಂದ ನನ್ನ ಆಹಾರವನ್ನು ಎಂದೂ ಇಟ್ಟುಕೊಳ್ಳಲಿಲ್ಲ. ಅನಾಥರು ಹಸಿವೆಯಿಂದಿರಲು ನಾನೆಂದೂ ಅವಕಾಶಕೊಟ್ಟಿಲ್ಲ. |
18
|
ನಾನು ನನ್ನ ಜೀವಮಾನವೆಲ್ಲಾ, ಅನಾಥರಿಗೆ ತಂದೆಯಂತಿದ್ದೆನು; ವಿಧವೆಯರನ್ನು ಪರಿಪಾಲಿಸಿದೆನು. |
19
|
ಬಟ್ಟೆಯಿಲ್ಲದೆ ಸಂಕಟಪಡುತ್ತಿರುವವರನ್ನೂ ಮೇಲಂಗಿಯಿಲ್ಲದ ಬಡವರನ್ನೂ ನಾನು ಕಂಡಾಗಲೆಲ್ಲಾ |
20
|
ಅವರಿಗೆ ಬಟ್ಟೆಗಳನ್ನು ಕೊಟ್ಟೆನು. ನನ್ನ ಕುರಿಗಳ ಉಣ್ಣೆಯಿಂದ ಅವರ ಮೈಯನ್ನು ಬೆಚ್ಚಗೆ ಮಾಡಿದೆನು. ಅವರು ನನ್ನನ್ನು ಪೂರ್ಣಹೃದಯದಿಂದ ಆಶೀರ್ವದಿಸಿದರು. |
21
|
ನನಗೆ ನ್ಯಾಯಸ್ಥಾನದಲ್ಲಿ ಬೆಂಬಲವಿದ್ದರೂ ಅನಾಥರನ್ನು ಕಂಡು ನಾನೆಂದೂ ಅವರ ಮೇಲೆ ಕೈ ಮಾಡಲಿಲ್ಲ. |
22
|
ನಾನು ಹಾಗೆ ಮಾಡಿದ್ದರೆ, ನನ್ನ ತೋಳು ಕೀಲು ತಪ್ಪಿ ಭುಜದಿಂದ ಮುರಿದುಬೀಳಲಿ. |
23
|
ನಾನು ಆ ಕೆಟ್ಟಕಾರ್ಯಗಳಲ್ಲಿ ಯಾವುದನ್ನೂ ಮಾಡಲಿಲ್ಲ. ಯಾಕಂದರೆ ನಾನು ದೇವರ ಶಿಕ್ಷೆಗೆ ಹೆದರಿಕೊಂಡಿದ್ದೆ. ಆತನ ವೈಭವದ ಎದುರಿನಲ್ಲಿ ನಿಂತುಕೊಳ್ಳಲು ನನಗಾಗಲಿಲ್ಲ. |
24
|
“ನಾನು ನನ್ನ ಐಶ್ವರ್ಯಗಳಲ್ಲಿ ಎಂದೂ ಭರವಸವಿಡಲಿಲ್ಲ. ನಾನು ಬಂಗಾರಕ್ಕೆ ‘ನೀನೇ ನನ್ನ ನಿರೀಕ್ಷೆ’ ಎಂದು ಹೇಳಲೇ ಇಲ್ಲ. |
25
|
ನನ್ನ ಐಶ್ವರ್ಯದಿಂದಲೂ ನಾನು ಗರ್ವಿಷ್ಠನಾಗಲಿಲ್ಲ. ನಾನು ಗಳಿಸಿದ ಅಪಾರ ಹಣವೂ ನನ್ನನ್ನು ಉಲ್ಲಾಸಪಡಿಸಲಿಲ್ಲ. |
26
|
ಪ್ರಕಾಶಮಾನವಾದ ಸೂರ್ಯನನ್ನಾಗಲಿ ಸುಂದರವಾದ ಚಂದ್ರನನ್ನಾಗಲಿ ನಾನೆಂದೂ ಪೂಜಿಸಲಿಲ್ಲ. |
27
|
ನಾನು ಮರುಳುಗೊಂಡು ನನ್ನ ಕೈಗೆ ಮುದ್ದಿಡುವುದರ ಮೂಲಕ ಸೂರ್ಯಚಂದ್ರರನ್ನು ಪೂಜಿಸಲಿಲ್ಲ. |
28
|
ನಾನು ಅವುಗಳಲ್ಲಿ ಯಾವುದನ್ನೇ ಮಾಡಿದ್ದರೂ ನನಗೆ ಶಿಕ್ಷೆಯಾಗುತ್ತಿತ್ತು. ಯಾಕಂದರೆ ಆಗ ನಾನು ಸರ್ವಶಕ್ತನಾದ ದೇವರಿಗೆ ಅಪನಂಬಿಗಸ್ತನಾಗುತ್ತಿದ್ದೆನು. |
29
|
ನನ್ನ ವೈರಿಗಳು ನಾಶವಾದಾಗ, ನಾನೆಂದೂ ಸಂತೋಷಪಡಲಿಲ್ಲ. ನನ್ನ ವೈರಿಗಳಿಗೆ ಕೇಡಾದಾಗ ನಾನೆಂದೂ ನಗಲಿಲ್ಲ. |
30
|
ನನ್ನ ವೈರಿಗಳನ್ನು ಶಪಿಸಿ, ಅವರಿಗೆ ಸಾವನ್ನು ಕೋರಲು ನಾನೆಂದೂ ನನ್ನ ಬಾಯಿಗೆ ಅವಕಾಶ ಕೊಡಲಿಲ್ಲ. |
31
|
ನಾನು ಅಪರಿಚಿತರಿಗೆ ಯಾವಾಗಲೂ ಊಟ ಕೊಟ್ಟದ್ದು ನನ್ನ ಮನೆಯಲ್ಲಿರುವ ಎಲ್ಲರಿಗೂ ಗೊತ್ತಿದೆ. |
32
|
ನಾನು ಅಪರಿಚಿತರನ್ನು ನನ್ನ ಮನೆಗೆ ಯಾವಾಗಲೂ ಆಹ್ವಾನಿಸುತ್ತಿದ್ದೆನು. ಆದ್ದರಿಂದ ರಾತ್ರಿಯಲ್ಲಿ ಅವರು ಬೀದಿಗಳಲ್ಲಿ ಮಲಗಿಕೊಳ್ಳಬೇಕಾಗಿರಲಿಲ್ಲ. |
33
|
ಬೇರೆಯವರು ತಮ್ಮ ಪಾಪಗಳನ್ನು ಮರೆಮಾಡಲು ಪ್ರಯತ್ನಿಸಬಹುದು. ಆದರೆ ನಾನು ನನ್ನ ಯಾವ ಪಾಪವನ್ನೂ ಮರೆಮಾಡಲಿಲ್ಲ. |
34
|
ಜನರ ಮಾತಿಗೆ ನಾನೆಂದೂ ಭಯಗೊಂಡಿರಲಿಲ್ಲ. ಯಾವ ಕುಟುಂಬದ ಅಸಮ್ಮತಿಗೂ ನಾನೆಂದೂ ಹೆದರಿಕೊಂಡಿರಲಿಲ್ಲ. ಅಂಥ ಯಾವ ಭಯವೂ ನನ್ನನ್ನು ಮೌನಗೊಳಿಸಿ ಮನೆಯೊಳಗಿರಿಸಲಿಲ್ಲ. ಯಾಕಂದರೆ ನನ್ನ ಮೇಲೆ ಜನರಿಗಿರುವ ದ್ವೇಷಕ್ಕೆ ನಾನು ಹೆದರಿಕೊಂಡಿರಲಿಲ್ಲ. |
35
|
“ಅಯ್ಯೋ, ನನಗೆ ಕಿವಿಗೊಡುವುದಕ್ಕೆ ಯಾರಾದರೊಬ್ಬರು ಇರಬೇಕಿತ್ತು! ನಾನು ಸತ್ಯವನ್ನೇ ಹೇಳಿದೆನೆಂಬುದಕ್ಕೆ ಇದೋ, ಇಲ್ಲಿದೆ ನನ್ನ ಸಹಿ! ಸರ್ವಶಕ್ತನಾದ ದೇವರು ನನಗೆ ಉತ್ತರಕೊಡಲಿ. ನನ್ನ ಮೇಲೆ ಅಪವಾದ ಹೊರಿಸುವವನು, ಆಪಾದನೆಯ ಪತ್ರವನ್ನು ಕೊಡಲಿ! |
36
|
ಖಂಡಿತವಾಗಿಯೂ ನಾನು ಆ ಪತ್ರವನ್ನು ನನ್ನ ಹೆಗಲ ಮೇಲೆ ಇಟ್ಟುಕೊಳ್ಳುವೆನು. ಅದನ್ನು ಕಿರೀಟವನ್ನಾಗಿ ಧರಿಸಿಕೊಳ್ಳುವೆನು. |
37
|
ನಾನು ಮಾಡಿರುವ ಪ್ರತಿಯೊಂದನ್ನು ದೇವರಿಗೆ ವಿವರಿಸುವೆನು. ನಾನು ಅಧಿಪತಿಯಂತೆ ತಲೆಯೆತ್ತಿಕೊಂಡು ಆತನ ಸಮೀಪಕ್ಕೆ ಬರುವೆನು. |
38
|
“ನನ್ನ ಹೊಲವನ್ನು ಬೇರೆಯವರಿಂದ ಕಿತ್ತುಕೊಳ್ಳಲಿಲ್ಲ; ಈ ವಿಷಯದಲ್ಲಿ ಯಾರೂ ನನ್ನ ಮೇಲೆ ಅಪವಾದ ಹೊರಿಸಲಾರರು. |
39
|
ರೈತರಿಗೆ ಬೆಳೆಯಲ್ಲಿ ಪಾಲುಕೊಟ್ಟೆನು; ಯಾರೊಬ್ಬರೂ ಹಸಿವೆಯಿಂದ ಇರಲು ಬಿಡಲಿಲ್ಲ. |
40
|
ಇವುಗಳಲ್ಲಿ ನಾನು ಯಾವುದನ್ನಾದರೂ ಮಾಡಿದ್ದರೆ, ಗೋಧಿ ಮತ್ತು ಬಾರ್ಲಿಗಳ ಬದಲಾಗಿ ನನ್ನ ಹೊಲಗಳಲ್ಲಿ ಮುಳ್ಳುಗಳೂ ಕಳೆಗಳೂ ಬೆಳೆಯಲಿ.” ಹೀಗೆ ಯೋಬನ ಮಾತುಗಳು ಮುಗಿದವು. |
Job 31:1 Kannada Language Bible Words basic statistical display
COMING SOON ...