1
|
“ಸರ್ವಶಕ್ತನಾದ ದೇವರು ನ್ಯಾಯತೀರ್ಪಿಗೆ ಸಮಯವನ್ನು ಗೊತ್ತುಪಡಿಸದಿರುವುದೇಕೆ? ಆತನನ್ನು ಅರಿತವರಿಗೆ ಸಮಯವು ತಿಳಿಯದಿರುವುದೇಕೆ? |
2
|
“ಜಮೀನಿನ ಮೇರೆಯನ್ನು ಸರಿಸುವವರೂ ಇದ್ದಾರೆ. ದನಕುರಿಗಳನ್ನು ಅಪಹರಿಸಿಕೊಂಡು ಹೋಗುವವರೂ ಇದ್ದಾರೆ. |
3
|
ಅವರು ಅನಾಥರ ಕತ್ತೆಯನ್ನು ಹೊಡೆದುಕೊಂಡು ಹೋಗುವರು; ವಿಧವೆಯ ಹಸುವನ್ನು ಒತ್ತೆಯಿಟ್ಟುಕೊಳ್ಳುವರು; |
4
|
ನಿರ್ಗತಿಕರನ್ನು ಸ್ಥಳದಿಂದ ಸ್ಥಳಕ್ಕೆ ಅಲೆದಾಡಿಸುವರು. ಬಡವರು ಈ ದುಷ್ಟರಿಗೆ ಹೆದರಿ ಅಡಗಿಕೊಳ್ಳುವರು. |
5
|
“ಬಡವರು ಅಡವಿಯಲ್ಲಿನ ಕಾಡುಕತ್ತೆಗಳೋ ಎಂಬಂತೆ ತಮ್ಮ ಆಹಾರಕ್ಕಾಗಿ ದಿನವೆಲ್ಲಾ ದುಡಿಯುವರು; ಕೂಳೆಬಿಟ್ಟ ಹೊಲಗಳೇ ಅವರ ಮಕ್ಕಳಿಗೆ ಆಹಾರವನ್ನು ಒದಗಿಸುತ್ತವೆ. |
6
|
“ಬಡವರು ರಾತ್ರಿಯವರೆಗೂ ಹೊಲಗಳಲ್ಲಿ ಬೆಳೆ ಕೊಯ್ಯುವರು; ದುಷ್ಟರ ದ್ರಾಕ್ಷಿತೋಟದಲ್ಲಿ ಅಳಿದುಳಿದ ದ್ರಾಕ್ಷಿಗಳನ್ನು ಆರಿಸಿಕೊಳ್ಳುವರು. |
7
|
ಅವರು ರಾತ್ರಿಯ ಚಳಿಯಲ್ಲಿಯೂ ಹೊದಿಕೆಯಿಲ್ಲದೆ ಮಲಗುವರು; ಹಾಕಿಕೊಳ್ಳಲು ಅವರಲ್ಲಿ ಬಟ್ಟೆಯೂ ಇಲ್ಲ. |
8
|
ಅವರು ಬೆಟ್ಟಗಳಲ್ಲಿ ಮಳೆಯಿಂದ ನೆನೆದು ಹೋಗಿದ್ದಾರೆ. ಚಳಿಯಿಂದ ರಕ್ಷಿಸಿಕೊಳ್ಳಲು ಏನೂ ಇಲ್ಲದೆ ವಿಶಾಲವಾದ ಬಂಡೆಯ ಮರೆಗಳನ್ನು ಆಶ್ರಯಿಸಿಕೊಳ್ಳುವರು. |
9
|
ದುಷ್ಟರು ತಂದೆಯಿಲ್ಲದ ಮಗುವನ್ನು ಅದರ ತಾಯಿಯಿಂದ ಕಿತ್ತುಕೊಳ್ಳುವರು. ಬಡವರ ಮಗುವನ್ನು ಸಾಲಕ್ಕೆ ಒತ್ತೆಯಾಗಿಟ್ಟುಕೊಳ್ಳುವರು. |
10
|
ಬಡವರು ಬಟ್ಟೆಗಳಿಲ್ಲದೆ ಬೆತ್ತಲೆಯಾಗಿ ದುಡಿಯುವರು. ಅವರು ಹಸಿವೆಯಿಂದಲೇ ದುಷ್ಟರ ಸಿವುಡುಗಳನ್ನು ಹೊರುವರು. |
11
|
ಬಡವರು ಆಲೀವ್ ಎಣ್ಣೆಯ ಗಾಣವಾಡಿಸುವರು; ದಾಹದಿಂದಲೇ ದ್ರಾಕ್ಷಿ ಅಲೆಯಲ್ಲಿ ತುಳಿದು ರಸ ತೆಗೆಯುವರು. |
12
|
ಸಾಯುತ್ತಿರುವ ಜನರ ನರಳಾಟವು ಪಟ್ಟಣದಲ್ಲಿ ಕೇಳಿ ಬರುತ್ತಿದೆ. ಗಾಯಗೊಂಡಿರುವವರು ಸಹಾಯಕ್ಕಾಗಿ ಮೊರೆಯಿಡುತ್ತಿದ್ದಾರೆ. ಆದರೆ ದೇವರು ಕೇಳಿಸಿಕೊಳ್ಳುವುದಿಲ್ಲ. |
13
|
“ಬೆಳಕಿಗೆ ವಿರೋಧವಾಗಿ ದಂಗೆ ಎದ್ದಿರುವ ಜನರಿದ್ದಾರೆ. ಅವರಿಗೆ ಹಗಲಿನ ಮಾರ್ಗಗಳ ಪರಿಚಯವಿಲ್ಲ. ಅವರು ಅದರ ಮಾರ್ಗಗಳಲ್ಲಿ ಇರುವುದಿಲ್ಲ. |
14
|
ಕೊಲೆಗಾರನು ಮುಂಜಾನೆಯಲ್ಲಿ ಎದ್ದು ದಿಕ್ಕಿಲ್ಲದ ಬಡವರನ್ನು ಕೊಲ್ಲುವನು; ರಾತ್ರಿಯಲ್ಲಿ ಕಳವು ಮಾಡುವನು. |
15
|
ವ್ಯಭಿಚಾರಿಯು ರಾತ್ರಿಗಾಗಿಯೇ ಕಾಯುತ್ತಿರುತ್ತಾನೆ. ‘ಯಾರ ಕಣ್ಣಿಗೂ ಬೀಳಬಾರದು’ ಎಂದು ಮುಖಕ್ಕೆ ಮುಸುಕು ಹಾಕಿಕೊಳ್ಳುವನು. |
16
|
ದುಷ್ಟರು ರಾತ್ರಿಯ ಕತ್ತಲಲ್ಲಿ ಮನೆಗಳಿಗೆ ಕನ್ನ ಕೊರೆಯುವರು; ಹಗಲಲ್ಲಿ ತಮ್ಮ ಮನೆಗಳಲ್ಲಿ ಅಡಗಿಕೊಂಡಿದ್ದು ಬೆಳಕಿಗೆ ಮರೆಯಾಗಿರುವರು. |
17
|
ಆ ದುಷ್ಟರಿಗೆ ಕತ್ತಲೆಯು ಮುಂಜಾನೆಯಂತಿರುವುದು. ಕಾರ್ಗತ್ತಲೆಯ ಭೀಕರತೆಗಳು ಅವರ ಸ್ನೇಹಿತರಾಗಿವೆ. |
18
|
“ನೀವು ಹೇಳುವುದೇನಂದರೆ, ಪ್ರವಾಹವು ವಸ್ತುಗಳನ್ನು ಕೊಚ್ಚಿಕೊಂಡು ಹೋಗುವಂತೆ ನಾಶನವು ದುಷ್ಟನನ್ನು ಕೊಚ್ಚಿಕೊಂಡು ಹೋಗುವುದು. ಅವರ ಜಮೀನು ಶಾಪಗ್ರಸ್ತವಾಗಿದೆ. ಆದ್ದರಿಂದ ಅವರು ದ್ರಾಕ್ಷಿಹಣ್ಣುಗಳನ್ನು ತಮ್ಮ ತೋಟಗಳಿಂದ ಸಂಗ್ರಹಿಸಲಾರರು. |
19
|
ಬರಗಾಲವೂ ಬಿಸಿಲೂ ಹಿಮದ ನೀರನ್ನು ಹೀರುವಂತೆ ಪಾತಾಳವು ದುಷ್ಟರನ್ನು ಎಳೆದುಕೊಳ್ಳುವುದು. |
20
|
ಸತ್ತುಹೋದ ದುಷ್ಟನನ್ನು ಅವನ ತಾಯಿಯೂ ಮರೆತು ಬಿಡುವಳು. ದುಷ್ಟನ ದೇಹವನ್ನು ಹುಳಗಳು ತಿಂದುಬಿಡುತ್ತವೆ. ಅವನನ್ನು ಇನ್ನೆಂದಿಗೂ ಜ್ಞಾಪಿಸಿಕೊಳ್ಳುವುದಿಲ್ಲ. ದುಷ್ಟನು ಬಿದ್ದುಹೋದ ಮರದಂತೆ ನಾಶವಾಗುವನು. |
21
|
ದುಷ್ಟರು ಬಂಜೆಯರಿಗೆ ಕೇಡು ಮಾಡುವರು; ವಿಧವೆಯರಿಗೆ ಕರುಣೆ ತೋರರು. |
22
|
ಆದರೆ ದೇವರು ತನ್ನ ಶಕ್ತಿಯಿಂದ ಬಲಿಷ್ಠರನ್ನು ನಾಶಮಾಡುವನು; ದುಷ್ಟರು ಜೀವನದಲ್ಲಿ ಬೇರೂರಿಕೊಂಡಿದ್ದರೂ ತಮ್ಮ ಭವಿಷ್ಯತ್ತನ್ನು ತಿಳಿಯದವರಾಗಿದ್ದಾರೆ. |
23
|
ತಾವು ಸುರಕ್ಷಿತವಾಗಿದ್ದೇವೆಂದು ದುಷ್ಟರು ಹೇಳುವುದು ಕೇವಲ ಅಲ್ಪ ಕಾಲದವರಗೆಷ್ಟೇ. ಯಾಕಂದರೆ ದೇವರು ಅವರನ್ನು ಗಮನಿಸುತ್ತಲೇ ಇರುವನು. |
24
|
ದುಷ್ಟರು ಸ್ವಲ್ಪಕಾಲ ಅಭಿವೃದ್ಧಿಗೊಂಡರೂ ಸುಗ್ಗಿಯ ತೆನೆಗಳಂತೆ ಕೊಯ್ಯಲ್ಪಟ್ಟು ಎಲ್ಲರಂತೆ ಇಲ್ಲವಾಗುವರು.’ |
25
|
“ಇದು ನಿಜವಲ್ಲದಿದ್ದರೆ, ನಾನು ಸುಳ್ಳುಹೇಳಿರುವುದಾಗಿ ಯಾರು ನಿರೂಪಿಸಬಲ್ಲರು? ನನ್ನ ಮಾತುಗಳು ತಪ್ಪಾದವುಗಳೆಂದು ಯಾರು ತೋರಿಸಬಲ್ಲರು?” |
Job 24:7 Kannada Language Bible Words basic statistical display
COMING SOON ...