1
|
ಬಳಿಕ ತೇಮಾನ್ ಪಟ್ಟಣದ ಎಲೀಫಜನು ಉತ್ತರಕೊಟ್ಟನು: |
2
|
“ಯಾವನೂ ದೇವರಿಗೆ ಸಹಾಯಮಾಡಲಾರನು. ಮಹಾ ಜ್ಞಾನಿಯು ಸಹ ದೇವರಿಗೆ ಉಪಯುಕ್ತನಾಗಲಾರನು. |
3
|
ನಿನ್ನ ನಡತೆಯು ಒಳ್ಳೆಯದಾಗಿದ್ದರೆ, ಅದರಿಂದ ದೇವರಿಗೆ ಸಹಾಯವಾಗುವುದೇ? ಇಲ್ಲ. ನೀನು ನೀತಿವಂತನಾಗಿದ್ದರೆ ಸರ್ವಶಕ್ತನಾದ ದೇವರಿಗೆ ಅದರಿಂದೇನಾದರೂ ಲಾಭವಾಗುವುದೇ? |
4
|
“ನಿನ್ನ ಆರಾಧನೆಯ ದೆಸೆಯಿಂದ ದೇವರು ನಿನ್ನ ಮೇಲೆ ಆರೋಪಹೊರಿಸಿ ದಂಡಿಸುವನೇ? ಇಲ್ಲ! |
5
|
ನಿನ್ನ ಪಾಪವು ಅತಿಯಾಯಿತು! ಯೋಬನೇ, ನೀನು ಪಾಪಮಾಡುವುದನ್ನು ನಿಲ್ಲಿಸಲೇ ಇಲ್ಲ. |
6
|
ಯೋಬನೇ, ನೀನು ನಿಷ್ಕಾರಣವಾಗಿ ನಿನ್ನ ಸಹೋದರರ ವಸ್ತುಗಳನ್ನು ಒತ್ತೆಯಿಟ್ಟುಕೊಂಡು ಸಾಲಕೊಟ್ಟಿರಬಹುದು. ಜನರ ಬಟ್ಟೆಗಳನ್ನು ತೆಗೆದುಕೊಂಡು ಅವರನ್ನು ಬೆತ್ತಲೆ ಮಾಡಿರಬಹುದು. |
7
|
ಆಯಾಸಗೊಂಡವರಿಗೆ ನೀರು ಕೊಡದೆ ಹಸಿದವರಿಗೆ ಊಟ ಕೊಡದೆ ಹೋಗಿರಬಹುದು. |
8
|
ಯೋಬನೇ, ಬಲಿಷ್ಠನಾಗಿದ್ದ ನಿನ್ನಲ್ಲಿ ಬೇಸಾಯಕ್ಕೆ ಬಹಳ ಭೂಮಿಯಿದೆ. ಅಲ್ಲದೆ ಜನರು ಸಹ ನಿನ್ನನ್ನು ಗೌರವಿಸುತ್ತಿದ್ದರು. |
9
|
ಆದರೆ ವಿಧವೆಯರಿಗೆ ದಾನಮಾಡದೆ ಅವರನ್ನು ನೀನು ಕಳುಹಿಸಿಬಿಟ್ಟಿರಬಹುದು. ಒಂದು ವೇಳೆ ನೀನು ಅನಾಥರಿಗೆ ಮೋಸಮಾಡಿರಬಹುದು. |
10
|
ಆದಕಾರಣ ನಿನ್ನ ಸುತ್ತಲೆಲ್ಲಾ ಉರುಲುಗಳಿವೆ; ಫಕ್ಕನೆ ಬರುವ ವಿಪತ್ತು ನಿನ್ನನ್ನು ಭಯಗೊಳಿಸುವುದು. |
11
|
ಆದಕಾರಣ ನಿನಗೆ ಏನೂ ಕಾಣಲಾಗದಷ್ಟು ಕತ್ತಲಾಗಿದೆ, ಪ್ರವಾಹದ ನೀರು ನಿನ್ನನ್ನು ಆವರಿಸಿಕೊಂಡಿದೆ. |
12
|
“ದೇವರು ಅತ್ಯುನ್ನತವಾದ ಪರಲೋಕದಲ್ಲಿ ವಾಸಿಸುತ್ತಾನೆ. ಆತನು ಅತ್ಯಂತ ಎತ್ತರದಲ್ಲಿರುವ ನಕ್ಷತ್ರಗಳನ್ನು ಬಗ್ಗಿ ನೋಡುವನು. ನಕ್ಷತ್ರಗಳು ಎಷ್ಟು ಎತ್ತರದಲ್ಲಿವೆ ಎಂಬುದನ್ನು ನೀನು ನೋಡಬಲ್ಲೆ. |
13
|
ನೀನಾದರೋ, ‘ದೇವರಿಗೆ ಗೊತ್ತಿರುವುದೇನು? ಕಾರ್ಮೋಡಗಳ ಆಚೆಯಿಂದ ನಮಗೆ ನ್ಯಾಯ ತೀರಿಸಬಲ್ಲನೇ? |
14
|
ದಟ್ಟವಾದ ಮೋಡಗಳು ಆತನನ್ನು ಮುಚ್ಚಿಕೊಂಡಿವೆ. ಆಕಾಶದ ಮೇಲ್ಗಡೆಯಲ್ಲಿ ನಡೆದಾಡುವ ಆತನು ನಮ್ಮನ್ನು ಕಾಣಲಾರನು’ ಎಂದು ಹೇಳುತ್ತಿರುವೆ. |
15
|
“ಯೋಬನೇ, ದುಷ್ಟರು ನಡೆಯುವ ಹಳೆದಾರಿಯ ಮೇಲೆ ನೀನು ನಡೆಯುತ್ತಲೇ ಇರುವಿಯೋ? |
16
|
ಆ ದುಷ್ಟರಿಗೆ ಅಕಾಲಮರಣವು ಬಂದಿತು. ಪ್ರವಾಹದಲ್ಲಿನ ಕಟ್ಟಡದಂತೆ ಅವರು ಕೊಚ್ಚಿಕೊಂಡು ಹೋದರು. |
17
|
ಅವರು ದೇವರಿಗೆ, ‘ನಮ್ಮಿಂದ ತೊಲಗಿಹೋಗು; ಸರ್ವಶಕ್ತನಾದ ದೇವರು ನಮಗೇನೂ ಮಾಡಲಾರನು!’ ಎಂದು ಹೇಳಿದ್ದರು. |
18
|
ಆದರೆ ದೇವರು ಅವರ ಮನೆಗಳನ್ನು ಐಶ್ವರ್ಯದಿಂದ ತುಂಬಿಸಿದನು. ಅಬ್ಬಾ! ದುಷ್ಟರ ಆಲೋಚನೆಯನ್ನು ನಾನು ಅನುಸರಿಸಲಾರೆ. |
19
|
ದುಷ್ಟರ ನಾಶನವನ್ನು ಕಂಡು ನೀತಿವಂತರು ಸಂತೋಷಪಡುವರು. ನಿರಪರಾಧಿಗಳು ದುಷ್ಟರನ್ನು ಕಂಡು ನಗುತ್ತಾ, |
20
|
‘ನಮ್ಮ ಶತ್ರುಗಳು ನಾಶವಾದರು! ಬೆಂಕಿಯು ಅವರ ಐಶ್ವರ್ಯವನ್ನು ಸುಟ್ಟುಹಾಕಿತು!’ ಎಂದು ಹೇಳುವರು. |
21
|
“ಯೋಬನೇ, ಈಗಲಾದರೊ ನಿನ್ನನ್ನು ದೇವರಿಗೆ ಒಪ್ಪಿಸಿಕೊಟ್ಟು ಆತನೊಂದಿಗೆ ಸಮಾಧಾನ ಮಾಡಿಕೊ, ಆಗ ನೀನು ಆಶೀರ್ವಾದವನ್ನು ಹೊಂದಿಕೊಂಡು ಅಭಿವೃದ್ಧಿಯಾಗುವೆ. |
22
|
ಆತನ ಉಪದೇಶವನ್ನು ಸ್ವೀಕರಿಸಿಕೋ. ಆತನ ವಾಕ್ಯಗಳನ್ನು ನಿನ್ನ ಹೃದಯದಲ್ಲಿಟ್ಟುಕೋ. |
23
|
ಯೋಬನೇ, ನೀನು ಸರ್ವಶಕ್ತನಾದ ದೇವರಿಗೆ ಅಭಿಮುಖನಾಗಿ ನಿನ್ನ ಮನೆಯಲ್ಲಿರುವ ಪಾಪವನ್ನು ನಿರ್ಮೂಲಮಾಡಿದರೆ, ಉದ್ಧಾರವಾಗುವೆ. |
24
|
ನೀನು ಚಿನ್ನವನ್ನು ಧೂಳೆಂದು ಪರಿಗಣಿಸಬೇಕು. ನೀನು ಓಫೀರ್ ದೇಶದ ಚಿನ್ನವನ್ನು ನದಿಗಳ ದಂಡೆಯ ಮೇಲಿರುವ ಕಲ್ಲುಗಳಂತೆ ಪರಿಗಣಿಸಬೇಕು. |
25
|
ಆಗ ಸರ್ವಶಕ್ತನಾದ ದೇವರು ನಿನ್ನ ಪಾಲಿಗೆ ಬಂಗಾರವಾಗಿಯೂ ಬೆಳ್ಳಿಯ ರಾಶಿಗಳಾಗಿಯೂ ಇರುವನು. |
26
|
ನೀನು ಸರ್ವಶಕ್ತನಾದ ದೇವರಲ್ಲಿ ಆನಂದಿಸುವೆ. ದೇವರ ಕಡೆಗೆ ಕಣ್ಣೆತ್ತಿ ನೋಡುವೆ. |
27
|
ನೀನು ಪ್ರಾರ್ಥಿಸುವೆ, ಆತನು ನಿನಗೆ ಕಿವಿಗೊಡುವನು; ಆತನಿಗೆ ನಿನ್ನ ಹರಕೆಗಳನ್ನು ಸಲ್ಲಿಸುವೆ. |
28
|
ನಿನ್ನ ಕಾರ್ಯಗಳೆಲ್ಲಾ ಜಯಪ್ರಧವಾಗುವುದು; ನಿನ್ನ ಭವಿಷ್ಯತ್ತು ಪ್ರಕಾಶಮಾನವಾಗುವುದು; |
29
|
ದೇವರು ಅಹಂಕಾರಿಗಳನ್ನು ನಾಚಿಕೆಗೀಡುಮಾಡುವನು, ದೀನರಿಗಾದರೋ ಸಹಾಯಮಾಡುವನು. |
30
|
ನಿರಪರಾಧಿಗಳನ್ನು ರಕ್ಷಿಸುವನು. ನೀನು ಪರಿಶುದ್ಧನಾಗಿರುವುದರಿಂದ ನಿನ್ನ ಪ್ರಾರ್ಥನೆಗೆ ಉತ್ತರವಾಗಿ ಆತನು ಅವರನ್ನು ಕ್ಷಮಿಸುವನು.” |
Job 22:5 Kannada Language Bible Words basic statistical display
COMING SOON ...