Bible Languages

Indian Language Bible Word Collections

Bible Versions

Books

Isaiah Chapters

Isaiah 10 Verses

Bible Versions

Books

Isaiah Chapters

Isaiah 10 Verses

1 ಕೆಟ್ಟ ನಿಯಮವನ್ನು ಬರೆಯುವ ನ್ಯಾಯಶಾಸ್ತ್ರಿಗಳನ್ನು ನೋಡಿರಿ. ಆ ನ್ಯಾಯಶಾಸ್ತ್ರಿಗಳು ಜನರಿಗೆ ಕಷ್ಟವಾಗಿರುವ ನಿಯಮಗಳನ್ನೇ ಮಾಡುತ್ತಾರೆ.
2 ಅವರು ಬಡವರಿಗೆ ನ್ಯಾಯವಂತರಾಗಿರುವುದಿಲ್ಲ. ಅವರು ಬಡಜನರ ಹಕ್ಕನ್ನು ತೆಗೆದುಬಿಡುವರು. ಜನರು ವಿಧವೆಯರಿಂದಲೂ ಅನಾಥರಿಂದಲೂ ಹಣ ಕಿತ್ತುಕೊಳ್ಳುವಂತೆ ಮಾಡುವರು.
3 ನ್ಯಾಯಶಾಸ್ತ್ರಿಗಳೇ, ನಿಮ್ಮ ಕಾರ್ಯಗಳಿಗೆ ನೀವೇ ಉತ್ತರ ಕೊಡಬೇಕು. ಆಗ ನೀವು ಏನು ಮಾಡುವಿರಿ? ದೂರದೇಶದಿಂದ ನಿಮ್ಮ ನಾಶನವು ಬರುತ್ತಲಿದೆ. ಸಹಾಯಕ್ಕಾಗಿ ಎಲ್ಲಿಗೆ ಓಡುವಿರಿ? ನಿಮ್ಮ ಐಶ್ವರ್ಯವೂ ನಿಮ್ಮ ಧನರಾಶಿಯೂ ನಿಮ್ಮನ್ನು ರಕ್ಷಿಸಲಾರವು.
4 ನೀವು ಕೈದಿಗಳಂತೆ ತಲೆತಗ್ಗಿಸುವಿರಿ, ಸತ್ತಹೆಣಗಳಂತೆ ನೆಲದ ಮೇಲೆ ಬೀಳುವಿರಿ. ಆದರೆ ಅದರಿಂದ ನಿಮಗೆ ಪ್ರಯೋಜನವಾಗದು. ದೇವರು ನಿಮ್ಮ ಮೇಲೆ ಬಹಳವಾಗಿ ಕೋಪಗೊಂಡಿದ್ದಾನೆ. ನಿಮ್ಮನ್ನು ಇನ್ನೂ ಶಿಕ್ಷಿಸಲು ಸಿದ್ಧನಾಗಿದ್ದಾನೆ.
5 ದೇವರು ಹೀಗೆ ಹೇಳುವನು: “ನಾನು ಕೋಪಗೊಂಡಾಗ ಬೆತ್ತವನ್ನು ಹೇಗೆ ಉಪಯೋಗಿಸುವೆನೋ ಹಾಗೆಯೇ ಇಸ್ರೇಲನ್ನು ಶಿಕ್ಷಿಸಲು ಅಶ್ಶೂರವನ್ನು ಉಪಯೋಗಿಸುವೆನು.
6 ದುಷ್ಟಕಾರ್ಯಗಳನ್ನು ಮಾಡುವವರ ವಿರುದ್ಧವಾಗಿ ಯುದ್ಧಮಾಡಲು ನಾನು ಅಶ್ಶೂರವನ್ನು ಕಳುಹಿಸುವೆನು. ನಾನು ಅವರ ಮೇಲೆ ಕೋಪಗೊಂಡಿರುವೆನು. ಅಶ್ಶೂರಕ್ಕೆ ಅವರ ಮೇಲೆ ಯುದ್ಧ ಮಾಡುವಂತೆ ಆಜ್ಞಾಪಿಸುವೆನು. ಅಶ್ಶೂರವು ಅವರನ್ನು ಸೋಲಿಸಿ ಅವರ ಐಶ್ವರ್ಯವನ್ನೆಲ್ಲಾ ಸೂರೆಮಾಡುವದು. ಇಸ್ರೇಲು ಅಶ್ಶೂರದವರಿಗೆ ಬೀದಿಯ ಧೂಳಿನಂತಾಗುವದು.
7 “ಆದರೆ ನಾನು ಅಶ್ಶೂರವನ್ನು ಉಪಯೋಗಿಸುತ್ತೇನೆಂದು ಅದಕ್ಕೆ ತಿಳಿಯದು. ಅಶ್ಶೂರಕ್ಕೆ ತಾನು ನನ್ನ ಕೈಯಲ್ಲಿರುವ ಒಂದು ಸಾಧನವೆಂದು ಗೊತ್ತಿರದು. ಅನೇಕಾನೇಕ ಜನಾಂಗಗನ್ನು ನಾಶಮಾಡಲು ಅಶ್ಶೂರವು ಬಯಸುತ್ತದೆ ಮತ್ತು ಅದಕ್ಕಾಗಿ ಯೋಜನೆಗಳನ್ನು ಮಾಡುತ್ತದೆ.
8 ಅಶ್ಶೂರವು ಹೀಗೆ ಹೇಳುತ್ತದೆ: ‘ನನ್ನ ನಾಯಕರೆಲ್ಲಾ ರಾಜರಂತಿರುತ್ತಾರೆ.
9 ಕಲ್ನೋ ನಗರವು ಕರ್ಕೆಮೀಷ್ ಹಾಗೆ ಇರುವದು. ಹಮಾತ್ ನಗರವು ಅರ್ಪದ್ ನಗರದಂತಿರುವದು. ಸಮಾರ್ಯಪಟ್ಟಣವು ದಮಸ್ಕದಂತಿರುವದು.
10 ನಾನು ಆ ದುಷ್ಟರಾಜ್ಯಗಳನ್ನು ಸೋಲಿಸಿಬಿಟ್ಟೆನು, ಈಗ ನಾನು ಅವುಗಳನ್ನು ಆಳುತ್ತಿದ್ದೇನೆ. ಆ ಜನರು ಪೂಜಿಸುವ ವಿಗ್ರಹಗಳು ಜೆರುಸಲೇಮ್ ಮತ್ತು ಸಮಾರ್ಯಗಳಲ್ಲಿರುವ ವಿಗ್ರಹಗಳಿಗಿಂತ ವಿಶೇಷವಾಗಿವೆ.
11 ನಾನು ಸಮಾರ್ಯವನ್ನೂ ಅದರ ವಿಗ್ರಹಗಳನ್ನೂ ನಾಶಮಾಡಿದೆ. ಈಗ ಜೆರುಸಲೇಮನ್ನೂ ಅದರ ಜನರು ಮಾಡಿರುವ ವಿಗ್ರಹಗಳನ್ನೂ ನಾನು ನಾಶ ಮಾಡುವೆನು.’’’
12 ಜೆರುಸಲೇಮಿಗೂ ಚೀಯೋನ್ ಪರ್ವತಕ್ಕೂ ಮಾಡಬೇಕೆಂದಿರುವ ಕಾರ್ಯಗಳನ್ನು ನನ್ನ ಒಡೆಯನು ಮಾಡಿ ತೀರಿಸುವನು. ಆ ಬಳಿಕ ಯೆಹೋವನು ಅಶ್ಶೂರವನ್ನು ಶಿಕ್ಷಿಸುವನು. ಅಶ್ಶೂರದ ಅರಸನು ಬಹಳವಾಗಿ ಉಬ್ಬಿಕೊಂಡಿರುತ್ತಾನೆ. ಅವನ ಗರ್ವವು ಅನೇಕ ದುಷ್ಟಕಾರ್ಯಗಳನ್ನು ನಡೆಸಿದೆ. ಅದಕ್ಕಾಗಿ ದೇವರು ಅವನನ್ನು ಶಿಕ್ಷಿಸುವನು.
13 ಅಶ್ಶೂರದ ಅರಸನು ಹೇಳುವುದೇನೆಂದರೆ, “ನಾನು ಜ್ಞಾನಿಯಾಗಿದ್ದೇನೆ, ನನ್ನ ಸ್ವಂತ ಜ್ಞಾನದಿಂದಲೂ ಸಾಮರ್ಥ್ಯದಿಂದಲೂ ನಾನು ಅನೇಕ ಮಹಾಕಾರ್ಯಗಳನ್ನು ನಡಿಸಿದ್ದೇನೆ. ಅನೇಕ ಜನಾಂಗಗಳನ್ನು ಸೋಲಿಸಿದ್ದೇನೆ; ಅವರ ಐಶ್ವರ್ಯಗಳನ್ನು ಸೂರೆಮಾಡಿದ್ದೇನೆ. ಅವರ ಜನರನ್ನು ನನ್ನ ಗುಲಾಮರನ್ನಾಗಿ ಮಾಡಿದ್ದೇನೆ. ನಾನು ಮಹಾ ವೀರನಾಗಿರುವೆ.
14 ಒಬ್ಬನು ಹಕ್ಕಿಯ ಗೂಡಿನಿಂದ ಮೊಟ್ಟೆಗಳನ್ನು ತೆಗೆಯುವಂತೆ ನಾನು ಅವರ ಐಶ್ವರ್ಯವನ್ನು ತೆಗೆದುಕೊಂಡಿರುವೆನು. ಹಕ್ಕಿಯು ತನ್ನ ಗೂಡಿಗೆ ಯಾವ ಭದ್ರತೆಯನ್ನೂ ಮಾಡದೆ ಅಹಾರಕ್ಕಾಗಿ ಹೋಗುವದು, ರೆಕ್ಕೆಯಾಡಿಸಿ, ಬಾಯಿದೆರೆದು, ಕೀಚುಗುಟ್ಟಿ ಮೊಟ್ಟೆಯನ್ನು ಶತ್ರುವಿನಿಂದ ರಕ್ಷಿಸಲು ಅದು ಗೂಡಿನಲ್ಲಿರದು, ಆದ್ದರಿಂದ ಅದರ ಮೊಟ್ಟೆಗಳು ತೆಗೆಯಲ್ಪಡುವವು. ಅದೇ ರೀತಿಯಲ್ಲಿ ನಾನು ಭೂಮಿಯ ಮೇಲಿನ ಜನರನ್ನು ಕೈದಿಗಳನ್ನಾಗಿ ಮಾಡುವಾಗ ನನ್ನನ್ನು ತಡೆಯುವವರು ಇಲ್ಲವೇ ಇಲ್ಲ.”
15 ಕೊಡಲಿಯು ಅದನ್ನು ಉಪಯೋಗಿಸುವವನಿಗಿಂತ ಉತ್ತಮವಲ್ಲ. ಗರಗಸವು ಅದನ್ನು ಉಪಯೋಗಿಸುವವನಿಗಿಂತ ಉತ್ತಮವಲ್ಲ. ಆದರೆ ಅಶ್ಶೂರವು ತಾನು ದೇವರಿಗಿಂತಲೂ ಶಕ್ತಿಶಾಲಿ, ಸಾಮರ್ಥ್ಯವುಳ್ಳವನು ಎಂದು ನೆನಸುತ್ತಾನೆ. ಬೆತ್ತವು, ತನ್ನನ್ನು ಎತ್ತಿಹಿಡಿದು ಬೇರೆಯವರನ್ನು ಶಿಕ್ಷಿಸುವವನಿಗಿಂತ ತಾನು ಬಲಿಷ್ಠನೂ ಪ್ರಮುಖನೂ ಎಂದು ಹೇಳುವಂತಿದೆ ಇದು.
16 ತಾನು ಮಹಾದೊಡ್ಡ ಜನವೆಂದು ಅಶ್ಶೂರವು ನೆನಸುತ್ತದೆ. ಆದರೆ ಸರ್ವಶಕ್ತನಾದ ಯೆಹೋವನು ಅಶ್ಶೂರದ ಮೇಲೆ ಭಯಂಕರವಾದ ವ್ಯಾಧಿಯನ್ನು ಬರಮಾಡುತ್ತಾನೆ. ಒಬ್ಬ ರೋಗಿ ತನ್ನ ಅಸ್ವಸ್ಥತೆಯಿಂದ ಹೇಗೆ ಕೃಶವಾಗುತ್ತಾನೋ ಹಾಗೆಯೇ ತನ್ನ ಶಕ್ತಿಯನ್ನೂ ಐಶ್ವರ್ಯವನ್ನೂ ಅಶ್ಶೂರವು ಕಳೆದುಕೊಂಡು ಬಲಹೀನನಾಗುವನು. ಅಶ್ಶೂರದ ಮಹಿಮಾಪ್ರಭಾವಗಳು ಇಲ್ಲದೆ ಹೋಗುವವು. ಬೆಂಕಿಯು ಸರ್ವವನ್ನು ಸುಟ್ಟು ನಾಶ ಮಾಡುವಂತೆ ಇರುವದು.
17 ಇಸ್ರೇಲಿನ ಬೆಳಕು ಬೆಂಕಿಯಂತಿದೆ. ಪರಿಶುದ್ಧ್ಧನಾಗಿರುವಾತನು ಬೆಂಕಿಯ ಜ್ವಾಲೆಯಂತಿದ್ದಾನೆ. ಮೊದಲು ಹಣಜಿ ಕಸಕಡ್ಡಿಗಳನ್ನು ಸುಡುವ ಬೆಂಕಿಯಂತೆ ಆತನಿರುವನು.
18 ಆಮೇಲೆ ಆ ಬೆಂಕಿಯು ದೊಡ್ಡದೊಡ್ಡ ಮರಗಳನ್ನು ಮತ್ತು ದ್ರಾಕ್ಷಿತೋಟಗಳನ್ನು ಸುಟ್ಟುಹಾಕುವದು. ಕೊನೆಗೆ ಜನರನ್ನು ಮೊದಲುಗೊಂಡು ಪ್ರತಿಯೊಂದೂ ನಾಶವಾಗುವುದು. ದೇವರು ಅಶ್ಶೂರವನ್ನು ನಾಶಮಾಡುವಾಗ ಹಾಗೆಯೇ ಆಗುವದು. ಅಶ್ಶೂರವು ಗೆದ್ದಲುಹುಳ ತಿಂದ ಮರದ ದಿಮ್ಮಿಯಂತಿರುವದು.
19 ಆಗ ಅಡವಿಯಲ್ಲಿ, ಒಂದು ಮಗು ಎಣಿಸಲು ಸಾಧ್ಯವಾಗುವಷ್ಟು ಮರಗಳಿರುವವು.
20 ಆಗ ಯಾಕೋಬನ ಮನೆತನದವರು, ಇಸ್ರೇಲರಲ್ಲಿ ಅಳಿದುಳಿದವರು, ತಮ್ಮನ್ನು ಹೊಡೆಯುವವರನ್ನು ಆಧಾರಮಾಡಿಕೊಳ್ಳದೆ ಇಸ್ರೇಲಿನ ಅತೀ ಪರಿಶುದ್ಧನಾದ ಯೆಹೋವನನ್ನೇ ಆಧಾರಮಾಡಿಕೊಳ್ಳುವರು.
21 ಯಾಕೋಬನ ಮನೆತನದಲ್ಲಿ ಅಳಿದುಳಿದವರು ಪರಾಕ್ರಮಿಯಾದ ದೇವರನ್ನು ಮತ್ತೆ ಅನುಸರಿಸತೊಡಗುವರು.
22 ನಿನ್ನ ಜನರು ಸಮುದ್ರದ ಮರಳಿನಂತೆ ಬಹಳವಿರುವರು. ಆದರೆ ಅವರಲ್ಲಿ ಕೆಲವರೇ ಉಳಿದು ಕರ್ತನ ಬಳಿಗೆ ಬರುವರು. ಆ ಜನರು ದೇವರ ಬಳಿಗೆ ಹಿಂತಿರುಗುವರು. ಅದಕ್ಕಿಂತ ಮೊದಲು ನಿನ್ನ ದೇಶವು ನಾಶವಾಗುವದು. ದೇಶವು ನಾಶವಾಗುವದೆಂದು ದೇವರು ಪ್ರಕಟಿಸಿದ್ದಾನೆ. ಆ ಬಳಿಕ ದೇವರ ಒಳ್ಳೆತನವು ಆ ದೇಶಕ್ಕೆ ಬರುವದು. ಅದು ದಡತುಂಬಿ ಹರಿಯುವ ನದಿಯೋಪಾದಿಯಲ್ಲಿರುವದು.
23 ಸರ್ವಶಕ್ತನೂ ಒಡೆಯನೂ ಆದ ಯೆಹೋವನು ಖಂಡಿತವಾಗಿಯೂ ಈ ದೇಶವನ್ನು ನಾಶ ಮಾಡುತ್ತಾನೆ.
24 ನನ್ನ ಒಡೆಯನೂ ಸರ್ವಶಕ್ತನೂ ಆದ ಯೆಹೋವನು ಹೇಳುವದೇನೆಂದರೆ: “ಚೀಯೋನಿನಲ್ಲಿ ವಾಸಿಸುವ ನನ್ನ ಜನರೇ, ಅಶ್ಶೂರಕ್ಕೆ ನೀವು ಭಯಪಡಬೇಡಿ. ಹಿಂದಿನ ಕಾಲದಲ್ಲಿ ಈಜಿಪ್ಟು ನಿಮ್ಮನ್ನು ಬಾಧಿಸಿದಂತೆ ಇವನೂ ನಿಮ್ಮನ್ನು ಬಾಧಿಸುವನು. ಅವನ ಬಾಧೆಯು ನಿಮ್ಮ ಬೆನ್ನಿನ ಮೇಲೆ ಬೆತ್ತದಿಂದ ಹೊಡೆದಂತೆ ಇರುವದು.
25 ಆದರೆ ಸ್ವಲ್ಪ ಸಮಯದ ನಂತರ ನನ್ನ ಸಿಟ್ಟು ತಣ್ಣಗಾಗುವದು. ಅಶ್ಶೂರವು ಸಾಕಷ್ಟು ನಿಮ್ಮನ್ನು ಶಿಕ್ಷಿಸಿದನೆಂದು ನಾನು ತೃಪ್ತಿಗೊಳ್ಳುವೆನು.”
26 ಆ ಬಳಿಕ ಸರ್ವಶಕ್ತನಾದ ಯೆಹೋವನು ಕೊರಡೆಯಿಂದ ಅಶ್ಶೂರವನ್ನು ಹೊಡೆಯುವನು. ಹಿಂದಿನ ಕಾಲದಲ್ಲಿ ಓರೇಬ್ ಬಂಡೆಯ ಮೇಲೆ ಮಿದ್ಯಾನ್ಯರನ್ನು ಯೆಹೋವನು ಹೇಗೆ ಸೋಲಿಸಿದನೋ ಹಾಗೆಯೇ ಅಶ್ಶೂರವನ್ನು ಸೋಲಿಸುವನು. ಹಿಂದಿನ ಕಾಲದಲ್ಲಿ ಯೆಹೋವನು ಈಜಿಪ್ಟನ್ನು ಶಿಕ್ಷಿಸಿದನು. ಆತನು ಕೋಲನ್ನೆತ್ತಿ ಸಮುದ್ರ ಮಾರ್ಗವಾಗಿ ತನ್ನ ಜನರನ್ನು ಈಜಿಪ್ಟಿನಿಂದ ಹೊರ ನಡಿಸಿದನು. ಅದೇ ರೀತಿಯಲ್ಲಿ ಅಶ್ಶೂರದಿಂದ ಯೆಹೋವನು ತನ್ನ ಜನರನ್ನು ರಕ್ಷಿಸಿ ಬಿಡಿಸುವನು.
27 ಅಶ್ಶೂರವು ನಿಮಗೆ ಸಂಕಟವನ್ನು ಉಂಟುಮಾಡುವದು. ಅದು ನಿಮಗೆ ನಿತ್ಯವೂ ಹೊರುವ ಭಾರವಾಗಿ ಪರಿಣಮಿಸುವದು. ನಿಮ್ಮ ಹೆಗಲಿನ ಮೇಲೆ ನೊಗವನ್ನು ಹಾಕುವದು. ಆದರೆ ಅದು ತೆಗೆದುಹಾಕಲ್ಪಡುವದು. ಅದು ನಿನ್ನ ದೇವರ ಶಕ್ತಿಯಿಂದ ಮುರಿಯಲ್ಪಡುವದು.
28 ಸೈನಿಕರು ಅಯ್ಯಾಥಿನ ಮೇಲೆ ಬಂದಿದ್ದಾರೆ; ಮಿಗ್ರೋನನ್ನು ಹಾದುಹೋಗಿದ್ದಾರೆ. ಮಿಕ್ಮಾಷಿನಲ್ಲಿ ತಮ್ಮ ಉಪಕರಣಗಳನ್ನಿಟ್ಟಿರುತ್ತಾರೆ.
29 ಸೈನಿಕರು ಮಾಬರ ಎಂಬ ಸ್ಥಳದಲ್ಲಿ ಕಣಿವೆಯನ್ನು ದಾಟುತ್ತಾರೆ. ಗೆಬ ಎಂಬಲ್ಲಿ ಮಲಗುವರು. ಆಗ ರಾಮಾವು ಭಯಪಡುವದು. ಸೌಲನ ಗಿಬೆಯದ ಜನರು ಪಲಾಯನ ಮಾಡುವರು.
30 ಬಾತ್‌ಗಲ್ಲೀಮ್‌ನವರೇ, ಚೀರಾಡಿರಿ! ಲಯೆಷವೇ, ಕಿವಿಗೊಡು. ಅನಾತೋತೇ, ನನಗೆ ಉತ್ತರಕೊಡು!
31 ಮದ್ಮೇನಾದ ಜನರು ಓಡಿಹೋಗುತ್ತಿದ್ದಾರೆ. ಗೇಬೀಮಿನ ಜನರು ಅವಿತುಕೊಂಡಿದ್ದಾರೆ.
32 ಈ ದಿವಸ ನೋಬಿನಲ್ಲಿ ಸೈನ್ಯವು ತಂಗುವದು. ಜೆರುಸಲೇಮಿನ ಪರ್ವತವಾಗಿರುವ ಚೀಯೋನ್ ಪರ್ವತಕ್ಕೆ ವಿರುದ್ಧವಾಗಿ ಯುದ್ಧಮಾಡಲು ಸೈನ್ಯವು ಸಿದ್ಧವಾಗುವುದು.
33 ನಮ್ಮ ಸರ್ವಶಕ್ತನೂ ಒಡೆಯನೂ ಆಗಿರುವ ಯೆಹೋವನು ಆ ದೊಡ್ಡ ಮರವನ್ನು (ಅಶ್ಶೂರವನ್ನು) ಕಡಿದು ಹಾಕುವದನ್ನು ನೋಡು! ತನ್ನ ಮಹಾಶಕ್ತಿಯಿಂದ ಆತನು ಮಹಾವೀರರೂ ದೊಡ್ಡಜನರೂ ಎನ್ನದೆ ಎಲ್ಲರನ್ನೂ ಕಡಿದುಹಾಕುವನು. ಇನ್ನುಮೇಲೆ ಅವರು ಮಹಾಜನರೆಂದು ಕರೆಯಲ್ಪಡರು.
34 ಯೆಹೋವನು ತನ್ನ ಕೊಡಲಿಯಿಂದ ಅಡವಿಯನ್ನು ಕಡಿದುಹಾಕುವನು. ಲೆಬನೋನಿನ ಉನ್ನತ ಮರಗಳು (ಪ್ರಮುಖರು) ಉರುಳಿಬೀಳುವವು.

Isaiah 10:1 Kannada Language Bible Words basic statistical display

COMING SOON ...

×

Alert

×