1
|
ಇದಾದನಂತರ, ಅಬ್ಷಾಲೋಮನು ತನಗಾಗಿ ರಥವನ್ನೂ ಕುದರೆಗಳನ್ನೂ ಪಡೆದನು. ಅವನು ರಥವನ್ನು ನಡೆಸುವಾಗ ಅವನ ಮುಂದೆ ಓಡಲು ಐವತ್ತು ಜನರಿದ್ದರು. |
2
|
ಅಬ್ಷಾಲೋಮನು ಹೊತ್ತಾರೆಯಲ್ಲಿಯೇ ಎದ್ದು ದ್ವಾರದ ಹತ್ತಿರದಲ್ಲಿ ನಿಂತುಕೊಳ್ಳುತ್ತಿದ್ದನು. ತೊಂದರೆಯಲ್ಲಿ ಸಿಕ್ಕಿಕೊಂಡಿರುವ ಯಾವನಾದರೂ ತೀರ್ಪಿಗಾಗಿ ರಾಜನಾದ ದಾವೀದನ ಬಳಿಗೆ ಹೋಗುತ್ತಿರುವುದನ್ನು ಅಬ್ಷಾಲೋಮನು ಕಂಡರೆ ಅವನನ್ನು ತನ್ನ ಬಳಿಗೆ ಕರೆಯುತ್ತಿದ್ದನು. ಅಬ್ಷಾಲೋಮನು, “ನೀನು ಯಾವ ನಗರದಿಂದ ಬಂದೆ?” ಎಂದು ಕೇಳುತ್ತಿದ್ದನು. ಆ ಮನುಷ್ಯನು, “ನಾನು ಇಸ್ರೇಲಿನ ಇಂಥ ಕುಲಕ್ಕೆ ಸೇರಿದವನು” ಎಂದು ಉತ್ತರಿಸುತ್ತಿದ್ದನು. |
3
|
ಆಗ ಅಬ್ಷಾಲೋಮನು ಆ ಮನುಷ್ಯನಿಗೆ, “ನೋಡು, ನಿನ್ನ ಬೇಡಿಕೆಗಳು ಸರಿಯಾಗಿವೆ. ಆದರೆ ರಾಜನಾದ ದಾವೀದನು ನಿನ್ನ ಮಾತುಗಳನ್ನು ಕೇಳುವುದಿಲ್ಲ” ಎಂದು ಹೇಳುತ್ತಿದ್ದನು. |
4
|
ಅಲ್ಲದೆ ಅಬ್ಷಾಲೋಮನು, “ಯಾರಾದರೂ ನನ್ನನ್ನು ಈ ದೇಶದಲ್ಲಿ ನ್ಯಾಯಾಧೀಶನನ್ನಾಗಿ ಮಾಡಿದ್ದರೆ ಒಳ್ಳೆಯದಾಗುತ್ತಿತ್ತು. ತೀರ್ಪಿಗಾಗಿ ತಮ್ಮ ತೊಂದರೆಗಳೊಂದಿಗೆ ಬರುವ ಪ್ರತಿಯೊಬ್ಬನಿಗೂ ಆಗ ನಾನು ಸಹಾಯ ಮಾಡಬಹುದಾಗಿತ್ತು. ಅವನ ತೊಂದರೆಗೆ ತೃಪ್ತಿಕರವಾದ ಪರಿಹಾರವನ್ನು ನೀಡಲು ನಾನು ಸಹಾಯ ಮಾಡಬಹುದಾಗಿತ್ತು” ಎಂದು ಹೇಳುತ್ತಿದ್ದನು. |
5
|
ಯಾವನಾದರೂ ಅಬ್ಷಾಲೋಮನ ಹತ್ತಿರಕ್ಕೆ ಬಂದು ಸಾಷ್ಟಾಂಗ ನಮಸ್ಕಾರಮಾಡಲು ಬಾಗಿದಾಗ, ಅಬ್ಷಾಲೋಮನು ಕೈಚಾಚಿ ಅವನನ್ನು ಅಪ್ಪಿಕೊಂಡು ಮುದ್ದಿಡುತ್ತಿದ್ದನು. |
6
|
ರಾಜನಾದ ದಾವೀದನ ಬಳಿಗೆ ತೀರ್ಪಿಗಾಗಿ ಬರುವ ಎಲ್ಲಾ ಇಸ್ರೇಲರಿಗೆ ಅಬ್ಷಾಲೋಮನು ಇದೇ ರೀತಿ ಮಾಡುತ್ತಿದ್ದನು. ಹೀಗೆ, ಅಬ್ಷಾಲೋಮನು ಇಸ್ರೇಲಿನ ಜನರೆಲ್ಲರ ಹೃದಯಗಳನ್ನು ಗೆದ್ದುಕೊಂಡನು. |
7
|
ನಾಲ್ಕು ವರ್ಷಗಳ ಬಳಿಕ ಅಬ್ಷಾಲೋಮನು ರಾಜನಾದ ದಾವೀದನಿಗೆ, “ನಾನು ಹೆಬ್ರೋನಿನಲ್ಲಿ ಯೆಹೋವನೊಂದಿಗೆ ಮಾಡಿದ ವಿಶೇಷ ಪ್ರಮಾಣವನ್ನು ಪೂರ್ಣಗೊಳಿಸುವುದಕ್ಕೆ ದಯವಿಟ್ಟು ಅನುಮತಿಕೊಡು. |
8
|
ನಾನು ಅರಾಮಿನ ಗೆಷೂರಿನಲ್ಲಿ ನೆಲೆಸಿದ್ದಾಗ, ‘ಯೆಹೋವನು ನನ್ನನ್ನು ಜೆರುಸಲೇಮಿಗೆ ಮತ್ತೆ ಕರೆಸಿಕೊಂಡರೆ, ನಾನು ಯೆಹೋವನ ಆರಾಧನೆ ಮಾಡುತ್ತೇನೆ, ಎಂಬ ವಿಶೇಷ ಪ್ರಮಾಣವನ್ನು ಮಾಡಿದ್ದೆನು” ಎಂದನು. |
9
|
“ಸಮಾಧಾನದಿಂದ ಹೋಗು” ಎಂದು ರಾಜನಾದ ದಾವೀದನು ಹೇಳಿದನು. ಅಬ್ಷಾಲೋಮನು ಹೆಬ್ರೋನಿಗೆ ಹೋದನು. |
10
|
ಆದರೆ ಅಬ್ಷಾಲೋಮನು ಇಸ್ರೇಲಿನ ಎಲ್ಲಾ ಕುಲಗಳಿಗೂ ಗೂಢಚಾರರನ್ನು ಕಳುಹಿಸಿದನು. ಈ ಗೂಢಚಾರರು ಜನರಿಗೆ, “ನೀವು ಕಹಳೆಯ ಧ್ವನಿಯನ್ನು ಕೇಳಿದಾಗ, ‘ಅಬ್ಷಾಲೋಮನು ಹೆಬ್ರೋನಿನಲ್ಲಿ ರಾಜನಾದ’ನೆಂದು ಹೇಳಿ” ಎಂಬುದಾಗಿ ತಿಳಿಸಿದರು. |
11
|
ಅಬ್ಷಾಲೋಮನು ತನ್ನೊಂದಿಗೆ ಬರಲು ಇನ್ನೂರು ಜನರನ್ನು ಆಹ್ವಾನಿಸಿದನು. ಆ ಜನರು ಜೆರುಸಲೇಮನ್ನು ಬಿಟ್ಟು ಅವನೊಂದಿಗೆ ಹೊರಟರು. ಆದರೆ ಅವನು ಯೋಚಿಸಿದ ಕಾರ್ಯವು ಅವರಿಗೆ ತಿಳಿದಿರಲಿಲ್ಲ. |
12
|
ಅಹೀತೋಫೆಲನೆಂಬವನು ದಾವೀದನ ಸಲಹೆಗಾರರಲ್ಲಿ ಒಬ್ಬನಾಗಿದ್ದನು. ಅಹೀತೋಫೆಲನು ಗೀಲೋವ ಎಂಬ ಪಟ್ಟಣದವನು. ಅಬ್ಷಾಲೋಮನು ಯಜ್ಞಗಳನ್ನು ಅರ್ಪಿಸುತ್ತಿರುವಾಗ ಅಹೀತೋಫೆಲನನ್ನು ಅವನ ಪಟ್ಟಣವಾದ ಗೀಲೋವದಿಂದ ಕರೆಯಿಸಿದನು. ಜನರು ಅಬ್ಷಾಲೋಮನನ್ನು ಕೂಡಿಕೊಳ್ಳುತ್ತಾ ಬಂದದ್ದರಿಂದ ಅವನು ಮಾಡಿದ ಒಳಸಂಚು ಸಫಲವಾಗತೊಡಗಿತು. |
13
|
ಒಬ್ಬನು ದಾವೀದನಿಗೆ ಸುದ್ದಿಯನ್ನು ಹೇಳಲು ಒಳಗೆ ಬಂದು, “ಇಸ್ರೇಲಿನ ಜನರು ಅಬ್ಷಾಲೋಮನನ್ನು ಹಿಂಬಾಲಿಸಲಾರಂಭಿಸಿದ್ದಾರೆ” ಎಂದು ಹೇಳಿದನು. |
14
|
ಆಗ ದಾವೀದನು ಜೆರುಸಲೇಮಿನಲ್ಲಿ ತನ್ನೊಂದಿಗಿದ್ದ ತನ್ನ ಸೇವಕರಿಗೆಲ್ಲ, “ನಾವು ತಪ್ಪಿಸಿಕೊಳ್ಳಲೇಬೇಕು! ನಾವು ತಪ್ಪಿಸಿಕೊಳ್ಳದಿದ್ದರೆ ಅಬ್ಷಾಲೋಮನು ನಮ್ಮನ್ನು ಹೋಗಗೊಡಿಸುವುದಿಲ್ಲ. ಅಬ್ಷಾಲೋಮನು ನಮ್ಮನ್ನು ಹಿಡಿಯುವುದಕ್ಕಿಂತ ಮೊದಲೇ ಇಲ್ಲಿಂದ ಹೋಗಿಬಿಡೋಣ. ಅವನು ನಮ್ಮೆಲ್ಲರನ್ನೂ ನಾಶಮಾಡುತ್ತಾನೆ; ಅವನು ಜೆರುಸಲೇಮಿನ ಜನರನ್ನು ಕೊಂದುಹಾಕುತ್ತಾನೆ” ಎಂದು ಹೇಳಿದನು. |
15
|
ರಾಜನ ಸೇವಕರು ರಾಜನಿಗೆ, “ನಿನ್ನ ನಿರ್ಧಾರದಂತೆ ನಾವು ಮಾಡುತ್ತೇವೆ” ಎಂದರು. |
16
|
ರಾಜನಾದ ದಾವೀದನು ತನ್ನ ಮನೆಯಲ್ಲಿದ್ದ ಎಲ್ಲಾ ಜನರೊಂದಿಗೆ ಹೊರಟನು. ಮನೆಯ ಉಸ್ತುವಾರಿಯನ್ನು ನೋಡಿಕೊಳ್ಳುವುದಕ್ಕಾಗಿ ರಾಜನು ತನ್ನ ಹತ್ತು ಮಂದಿ ಪತ್ನಿಯರನ್ನು ಅಲ್ಲಿಯೇ ಬಿಟ್ಟು, |
17
|
ತನ್ನ ಹಿಂಬಾಲಕರೊಂದಿಗೆ ಹೊರಟುಹೋದನು. ಅವನು ಕೊನೆಯ ಮನೆಯ ಹತ್ತಿರ ನಿಂತುಕೊಂಡನು. |
18
|
ಅವನ ಸೇವಕರೆಲ್ಲ ರಾಜನನ್ನು ದಾಟಿ ಮುಂದೆ ಹೋದರು. ಕೆರೇತ್ಯರು, ಪೆಲೇತ್ಯರು ಮತ್ತು ಗಿತ್ತೀಯರು (ಗತ್ನ ಆರುನೂರು ಜನರು) ರಾಜನನ್ನು ದಾಟಿಹೋದರು. |
19
|
ರಾಜನು ಗತ್ನ ಇತ್ತೈಯನಿಗೆ, “ನೀನು ಸಹ ನಮ್ಮೊಂದಿಗೆ ಏಕೆ ಬರುತ್ತಿರುವೆ? ಹಿಂದಿರುಗಿಹೋಗಿ, ಹೊಸ ರಾಜನೊಂದಿಗೆ ನೆಲೆಸು. ನೀನು ಹೊರದೇಶೀಯನು. ಇದು ನಿನ್ನ ಸ್ವದೇಶವಲ್ಲ. |
20
|
ನೀನು ನನ್ನ ಜೊತೆ ಸೇರಿಕೊಳ್ಳಲು ಬಂದದ್ದು ನಿನ್ನೆಯಷ್ಟೇ. ನೀನು ಈಗ ನನ್ನೊಂದಿಗೆ ಬೇರೆಬೇರೆ ಸ್ಥಳಗಳಲ್ಲಿ ಅಲೆಯಬೇಕೇ? ಇಲ್ಲ! ನಿನ್ನ ಸೋದರರನ್ನೂ ನಿನ್ನ ಜೊತೆಯಲ್ಲಿ ಕರೆದುಕೊಂಡು ಹಿಂತಿರುಗಿಹೋಗು. ದಯೆಯೂ ನಂಬಿಗಸ್ತಿಕೆಯೂ ನಿನ್ನಲ್ಲಿ ತೋರಿಬರಲಿ” ಎಂದನು. |
21
|
ಅದಕ್ಕೆ ಇತ್ತೈಯನು ರಾಜನಿಗೆ, “ಯೆಹೋವನಾಣೆ ಮತ್ತು ನಿನ್ನಾಣೆ, ನಾನಂತೂ ನಿನ್ನೊಂದಿಗೆ ಇರುತ್ತೇನೆ. ನನಗೆ ಜೀವ ಹೋದರೂ ಉಳಿದರೂ ನಿನ್ನೊಂದಿಗೆ ಇರುತ್ತೇನೆ” ಎಂದು ಹೇಳಿದನು. |
22
|
ದಾವೀದನು ಇತ್ತೈಯನಿಗೆ, “ಬಾ, ಕಿದ್ರೋನ್ ಹಳ್ಳವನ್ನು ದಾಟೋಣ” ಎಂದನು. ಗತ್ನ ಇತ್ತೈಯನೂ ಅವನ ಜನರೂ ಅವರ ಮಕ್ಕಳೆಲ್ಲರೂ ಕಿದ್ರೋನ್ ಹಳ್ಳವನ್ನು ದಾಟಿಹೋದರು. |
23
|
ಜನರೆಲ್ಲರೂ ಜೋರಾಗಿ ಅಳುತ್ತಿದ್ದರು. ರಾಜನಾದ ದಾವೀದನು ಕಿದ್ರೋನ್ ಹಳ್ಳವನ್ನು ದಾಟಿಹೋದನು. ನಂತರ ಜನರೆಲ್ಲರೂ ಅರಣ್ಯಕ್ಕೆ ಹೋದರು. |
24
|
ಚಾದೋಕನು ಮತ್ತು ಅವನೊಂದಿಗಿದ್ದ ಲೇವಿಯರೆಲ್ಲ ದೇವರ ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡಿದ್ದರು. ಅವರು ದೇವರ ಪವಿತ್ರ ಪೆಟ್ಟಿಗೆಯನ್ನು ಇಳಿಸಿದರು. ಜೆರುಸಲೇಮಿನಿಂದ ಜನರೆಲ್ಲರೂ ಹೊರಗೆ ಹೋಗುವವರೆಗೆ ಎಬ್ಯಾತಾರನು ಪ್ರಾರ್ಥನೆಗಳನ್ನು ಮಾಡಿದನು. |
25
|
ರಾಜನಾದ ದಾವೀದನು ಚಾದೋಕನಿಗೆ, “ದೇವರ ಪವಿತ್ರ ಪೆಟ್ಟಿಗೆಯನ್ನು ಜೆರುಸಲೇಮಿಗೆ ಮತ್ತೆ ತೆಗೆದುಕೊಂಡು ಹೋಗು. ಯೆಹೋವನು ನನಗೆ ದಯಾಪರನಾಗಿದ್ದರೆ, ನನ್ನನ್ನು ಮತ್ತೆ ಬರಮಾಡುತ್ತಾನೆ. ಜೆರುಸಲೇಮನ್ನು ಮತ್ತು ಆತನ ಆಲಯವನ್ನು ಮತ್ತೆ ನಾನು ನೋಡುವ ಹಾಗೆ ಯೆಹೋವನು ಮಾಡುತ್ತಾನೆ. |
26
|
ಆದರೆ ನನ್ನ ಮೇಲೆ ಯೆಹೋವನಿಗೆ ಇಷ್ಟವಿಲ್ಲವೆಂದು ತೋರಿದರೆ, ಆಗ ನನ್ನ ವಿರುದ್ಧವಾಗಿ ಆತನು ತನಗೆ ತೋಚಿದ್ದನ್ನು ಮಾಡಲಿ” ಎಂದನು. |
27
|
ರಾಜನು ಯಾಜಕನಾದ ಚಾದೋಕನಿಗೆ, “ನೀನೊಬ್ಬ ದೇವದರ್ಶಿ. ಸಮಾಧಾನದಿಂದ ನಗರಕ್ಕೆ ಹಿಂದಿರುಗು. ನಿನ್ನ ಮಗನಾದ ಅಹೀಮಾಚನನ್ನು ಮತ್ತು ಎಬ್ಯಾತಾರನ ಮಗನಾದ ಯೋನಾತಾನನನ್ನು ನಿನ್ನೊಂದಿಗೆ ಕರೆದುಕೊಂಡು ಹೋಗು. |
28
|
ಜನರು ಮರಳುಗಾಡಿಗೆ ದಾಟಿಹೋಗುವ ಸ್ಥಳದಲ್ಲಿ ನಾನು ಕಾದಿರುತ್ತೇನೆ. ನಾನು ನಿನ್ನಿಂದ ವರ್ತಮಾನ ಬರುವವರೆಗೆ ಅಲ್ಲಿ ಕಾದಿರುತ್ತೇನೆ” ಎಂದನು. |
29
|
ಆದ್ದರಿಂದ ಚಾದೋಕನು ಮತ್ತು ಎಬ್ಯಾತಾರನು ದೇವರ ಪವಿತ್ರ ಪೆಟ್ಟಿಗೆಯನ್ನು ಹೊತ್ತುಕೊಂಡು ಜೆರುಸಲೇಮಿಗೆ ಹಿಂದಿರುಗಿ, ಅಲ್ಲಿಯೇ ಉಳಿದುಕೊಂಡರು. |
30
|
ದಾವೀದನು ಆಲೀವ್ ಮರಗಳ ದಿಣ್ಣೆಯನ್ನೇರಿದನು. ಅವನು ಗೋಳಾಡುತ್ತಿದ್ದನು. ಅವನು ತಲೆಯ ಮೇಲೆ ಮುಸುಕೆಳೆದುಕೊಂಡು ಬರಿಗಾಲಿನಲ್ಲಿ ನಡೆದುಕೊಂಡು ಹೋದನು. ದಾವೀದನ ಜೊತೆಯಲ್ಲಿದ್ದ ಅವನ ಜನರೆಲ್ಲರೂ ತಲೆಯ ಮೇಲೆ ಮುಸುಕು ಹಾಕಿಕೊಂಡು ಗೋಳಾಡುತ್ತಾ ದಾವೀದನೊಂದಿಗೆ ಹೋದರು. |
31
|
ಒಬ್ಬನು ದಾವೀದನಿಗೆ, “ಅಬ್ಷಾಲೋಮನ ಜೊತೆಯಲ್ಲಿ ಉಪಾಯಗಳನ್ನು ಮಾಡಿದ ಜನರಲ್ಲಿ ಅಹೀತೋಫೆಲನೂ ಒಬ್ಬನು” ಎಂದು ಹೇಳಿದನು. ಅಗ ದಾವೀದನು, “ಯೆಹೋವನೇ, ಅಹೀತೋಫೆಲನ ಸಲಹೆಗಳನ್ನು ವಿಫಲಗೊಳಿಸು” ಎಂದು ಪ್ರಾರ್ಥಿಸಿದನು. |
32
|
ದಾವೀದನು ಬೆಟ್ಟದ ಮೇಲೆ ದೇವರನ್ನು ಆರಾಧಿಸಿದನು. ಆ ಸಮಯದಲ್ಲಿ ಅರ್ಕೀಯನಾದ ಹೂಷೈ ಎಂಬವನು ಅವನಲ್ಲಿಗೆ ಬಂದನು. ಹೂಷೈನ ಅಂಗಿಯು ಹರಿದಿತ್ತು. ಅವನ ತಲೆಯ ಮೇಲೆಲ್ಲಾ ಧೂಳಿತ್ತು. |
33
|
ದಾವೀದನು ಹೂಷೈಗೆ, “ನೀನು ನನ್ನೊಂದಿಗೆ ಬರುವುದಾದರೆ, ನೀನು ನನಗೆ ಭಾರವಾಗುವಿಯಷ್ಟೇ. |
34
|
ಆದರೆ ನೀನು ಜೆರುಸಲೇಮಿಗೆ ಹಿಂದಿರುಗಿ ಹೋದರೆ, ನೀನು ಅಹೀತೋಫೆಲನ ಸಲಹೆಗಳನ್ನು ನಿರರ್ಥಕಗೊಳಿಸುವೆ. ನೀನು ಅಬ್ಷಾಲೋಮನಿಗೆ, ‘ರಾಜನೇ, ನಾನು ನಿನ್ನ ಸೇವಕ. ನಾನು ನಿನ್ನ ತಂದೆಯ ಸೇವೆಯನ್ನು ಮಾಡಿದೆನು. ಆದರೆ ಈಗ ನಿನ್ನ ಸೇವೆಯನ್ನು ಮಾಡುತ್ತೇನೆ’ ಎಂದು ಹೇಳು. |
35
|
ಯಾಜಕರಾದ ಚಾದೋಕ್ ಮತ್ತು ಎಬ್ಯಾತಾರರು ನಿನ್ನೊಂದಿಗೆ ಇರುತ್ತಾರೆ. ರಾಜನ ಮನೆಯಲ್ಲಿ ಕೇಳಿಸಿಕೊಂಡಿದ್ದನ್ನೆಲ್ಲ ಅವರಿಗೆ ನೀನು ತಿಳಿಸಲೇಬೇಕು. |
36
|
ಚಾದೋಕನ ಮಗನಾದ ಅಹೀಮಾಚನ ಮತ್ತು ಎಬ್ಯಾತಾರನ ಮಗನಾದ ಯೋನಾತಾನನ ಮೂಲಕ ನೀನು ಕೇಳಿಸಿಕೊಂಡಿದ್ದನೆಲ್ಲ ನನಗೆ ತಿಳಿಸಬೇಕು” ಎಂದು ಹೇಳಿಕೊಟ್ಟನು. |
37
|
ದಾವೀದನ ಗೆಳೆಯನಾದ ಹೂಷೈ ನಗರಕ್ಕೆ ಹೋದನು. ಅಬ್ಷಾಲೋಮನು ಜೆರುಸಲೇಮಿಗೆ ಬಂದನು. |
2-Samuel 15:1 Kannada Language Bible Words basic statistical display
COMING SOON ...