“ನಾನು ದೊಡ್ಡ ಆಪತ್ತಿನಲ್ಲಿದ್ದೆನು. ಸಹಾಯಕ್ಕಾಗಿ ನಾನು ಯೆಹೋವನಿಗೆ ಮೊರೆಯಿಟ್ಟೆನು. ಆತನು ನನಗೆ ಉತ್ತರ ದಯಪಾಲಿಸಿದನು. ನಾನು ಆಳವಾದ ಸಮಾಧಿಯೊಳಗಿದ್ದೆನು. ನಾನು ನಿನಗೆ ಮೊರೆಯಿಟ್ಟಾಗ, ಯೆಹೋವನೇ, ನೀನು ನನ್ನ ಸ್ವರವನ್ನು ಕೇಳಿದಿ.
“ನೀನು ನನ್ನನ್ನು ಸಮುದ್ರಕ್ಕೆ ಎಸೆದಿ. ನಿನ್ನ ಬಲವಾದ ತೆರೆಗಳು ನನ್ನ ಮೇಲೆ ಅಪ್ಪಳಿಸಿದವು. ನಾನು ಕೆಳಗೆ, ಕೆಳಗೆ ಆಳವಾದ ಸ್ಥಳಕ್ಕೆ ಹೋದೆನು. ನನ್ನ ಸುತ್ತಲೂ ಸಮುದ್ರ, ನೀರು ತುಂಬಿದ್ದವು.
“ಸಮುದ್ರದ ನೀರು ನನ್ನನ್ನು ಮುಚ್ಚಿಬಿಟ್ಟವು. ನೀರು ನನ್ನ ಬಾಯಿಯನ್ನು ಮುಚ್ಚಿತು. ಆಗ ನನಗೆ ಉಸಿರಾಡಲಾಗಲಿಲ್ಲ. ನಾನು ಮುಳುಗುತ್ತಾ ಮುಳುಗುತ್ತಾ ಸಮುದ್ರದ ಆಳಕ್ಕೆ ಹೋದೆನು. ಸಮುದ್ರ ಪಾಚಿಗಳು ನನ್ನ ತಲೆಯನ್ನು ಸುತ್ತುಹಾಕಿದವು.
ನಾನು ಸಮುದ್ರದ ತಳದಲ್ಲಿದ್ದೆನು. ಅಲ್ಲಿಂದ ಪರ್ವತಗಳು ಉಗಮವಾಗುತ್ತವೆ. ‘ನಾನು ಈ ಸೆರೆಮನೆಯಲ್ಲಿ ಎಂದೆಂದಿಗೂ ಬಂಧಿತನಾದೆನು’ ಎಂದು ನೆನಸಿದೆನು. ಆದರೆ ನನ್ನ ದೇವರಾದ ಯೆಹೋವನು ಸಮಾಧಿಯಿಂದ ನನ್ನನ್ನು ಹೊರತಂದನು. ಯೆಹೋವನೇ ನೀನು ಪುನಃ ನನಗೆ ಜೀವ ಕೊಟ್ಟೆ.
“ನನ್ನ ಆತ್ಮಕ್ಕೆ ಯಾವ ನಿರೀಕ್ಷೆಯೂ ಇರಲಿಲ್ಲ. ಆಗ ನಾನು ಯೆಹೋವನನ್ನು ಸ್ಮರಿಸಿದೆನು. ಯೆಹೋವನೇ, ನಾನು ನಿನಗೆ ಪ್ರಾರ್ಥಿಸಿದೆನು. ನೀನು ನಿನ್ನ ಪವಿತ್ರ ಆಲಯದಿಂದ ನನ್ನ ಪ್ರಾರ್ಥನೆಯನ್ನು ಕೇಳಿದಿ.
ರಕ್ಷಣೆಯು ಯೆಹೋವನಿಂದಲೇ ಉಂಟಾಗುವದು. ಯೆಹೋವನೇ, ನಾನು ನಿನಗೆ ಯಜ್ಞವನ್ನರ್ಪಿಸುವೆನು. ನಾನು ನಿನ್ನನ್ನು ಕೊಂಡಾಡಿ ಸ್ತೋತ್ರ ಸಲ್ಲಿಸುವೆನು. ನಾನು ನಿನಗೆ ವಿಶೇಷವಾದ ಹರಕೆಗಳನ್ನು ಹೊರುವೆನು. ನಾನು ಕೊಟ್ಟ ವಚನಗಳನ್ನು ಪಾಲಿಸುವೆನು.”