1
|
ಕೆಲವು ದಿನಗಳ ತರುವಾಯ, ಯೇಸು ಕಪೆರ್ನೌಮಿಗೆ ಹಿಂದಿರುಗಿ ಬಂದನು. ಯೇಸು ಮನೆಯಲ್ಲಿದ್ದಾನೆಂಬ ಸುದ್ದಿಯು ಹಬ್ಬಿತು. |
2
|
ಜನರು ಗುಂಪುಗುಂಪಾಗಿ ಯೇಸುವಿನ ಉಪದೇಶವನ್ನು ಕೇಳಲು ಒಟ್ಟುಗೂಡಿದರು. ಮನೆಯು ತುಂಬಿಹೋಯಿತು. ಅಲ್ಲಿ ನಿಲ್ಲಲು ಹೊರಗಡೆಯಲ್ಲಿಯೂ ಸ್ಥಳವಿರಲಿಲ್ಲ. ಯೇಸು ಉಪದೇಶಿಸುತ್ತಿದ್ದನು. |
3
|
ಕೆಲವು ಜನರು ಒಬ್ಬ ಪಾರ್ಶ್ವವಾಯು ರೋಗಿಯನ್ನು ಆತನ ಬಳಿಗೆ ತಂದರು. ಅವನನ್ನು ನಾಲ್ಕು ಮಂದಿ ಹೊತ್ತುಕೊಂಡಿದ್ದರು. |
4
|
ಮನೆಯು ಜನರಿಂದ ತುಂಬಿಹೋಗಿದ್ದುದರಿಂದ ಅವರು ಅವನನ್ನು ಯೇಸುವಿನ ಬಳಿಗೆ ತರಲಾಗಲಿಲ್ಲ. ಆದ್ದರಿಂದ ಅವರು ಯೇಸುವಿದ್ದ ಮನೆಯ ಮೇಲ್ಛಾವಣೆಯ ಮೇಲಕ್ಕೆ ಹೋಗಿ ಯೇಸುವಿದ್ದ ಸ್ಥಳದ ಮೇಲೆ ಹೆಂಚುಗಳನ್ನು ತೆಗೆದುಹಾಕಿದರು. ಹೀಗೆ ಅಲ್ಲಿ ಒಂದು ದ್ವಾರವನ್ನು ಮಾಡಿ ರೋಗಿಯನ್ನು ಹಾಸಿಗೆಯ ಸಮೇತ ಕೆಳಗಿಳಿಸಿದರು. |
5
|
ಈ ಜನರ ದೊಡ್ಡ ನಂಬಿಕೆಯನ್ನು ಕಂಡ ಯೇಸು ರೋಗಿಗೆ, “ಯುವಕನೇ, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು. |
6
|
ಕೆಲವು ಮಂದಿ ಧರ್ಮೋಪದೇಶಕರು ಅಲ್ಲಿ ಕುಳಿತಿದ್ದರು. ಯೇಸು ಹೇಳಿದ್ದನ್ನು ಕೇಳಿದ ಅವರು, |
7
|
“ಇವನು ಹೀಗೇಕೆ ಹೇಳುತ್ತಿದ್ದಾನೆ?ೆ ಇದು ದೇವದೂಷಣೆ! ದೇವರೊಬ್ಬನೇ ಪಾಪಗಳನ್ನು ಕ್ಷಮಿಸಲು ಸಾಧ್ಯ” ಎಂದು ತಮ್ಮ ಮನಸ್ಸಿನಲ್ಲಿ ಅಂದುಕೊಂಡರು. |
8
|
ಧರ್ಮೋಪದೇಶಕರ ಆಲೋಚನೆಯನ್ನು ತಕ್ಷಣವೇ ಗ್ರಹಿಸಿಕೊಂಡ ಯೇಸು ಅವರಿಗೆ, “ನೀವು ಹೀಗೇಕೆ ಆಲೋಚಿಸುತ್ತೀರಿ? |
9
|
ಯಾವುದು ಸುಲಭ? ‘ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ’ ಎಂದು ಹೇಳುವುದೋ? ಇಲ್ಲವೇ, ‘ಎದ್ದು ನಿನ್ನ ಹಾಸಿಗೆಯನ್ನು ತೆಗೆದುಕೊಂಡು ಹೋಗು’ ಎಂದು ಹೇಳುವುದೋ? |
10
|
ಆದರೆ ಮನುಷ್ಯಕುಮಾರನಿಗೆ ಭೂಲೋಕದಲ್ಲಿ ಪಾಪಗಳನ್ನು ಕ್ಷಮಿಸುವ ಅಧಿಕಾರವಿದೆ ಎಂಬುದು ನಿಮಗೆ ತಿಳಿಯಬೇಕು” ಎಂದು ಹೇಳಿದನು. ಬಳಿಕ ಯೇಸು ರೋಗಿಗೆ, |
11
|
“ನಾನು ನಿನಗೆ ಹೇಳುತ್ತಿದ್ದೇನೆ, ಎದ್ದು, ನಿನ್ನ ಹಾಸಿಗೆಯನ್ನು ತೆಗೆದುಕೊಂಡು ಮನೆಗೆ ಹೋಗು” ಎಂದನು. |
12
|
ಆ ಕೂಡಲೇ ರೋಗಿಯು ಎದ್ದುನಿಂತು, ತನ್ನ ಹಾಸಿಗೆಯನ್ನು ತೆಗೆದುಕೊಂಡು ಅಲ್ಲಿಂದ ಹೊರಗೆ ಹೋದನು. ಇದನ್ನು ಕಂಡ ಆ ಜನರೆಲ್ಲರೂ ಆಶ್ಚರ್ಯಚಕಿತರಾಗಿ, “ನಾವು ಹಿಂದೆಂದೂ ಇಂಥ ಸಂಗತಿಯನ್ನು ನೋಡಿಯೇ ಇಲ್ಲ” ಎಂದು ಹೇಳಿ ದೇವರನ್ನು ಕೊಂಡಾಡಿದರು. |
13
|
ಯೇಸು ಮತ್ತೆ ಸರೋವರಕ್ಕೆ ಹೋದನು. ಅನೇಕ ಜನರು ಆತನನ್ನು ಹಿಂಬಾಲಿಸಿ ಅಲ್ಲಿಗೆ ಹೋದದ್ದರಿಂದ ಆತನು ಅವರಿಗೆ ಉಪದೇಶಿಸಿದನು. |
14
|
ಯೇಸು ಸರೋವರದ ತೀರದಲ್ಲಿ ನಡೆದು ಹೋಗುತ್ತಿದ್ದಾಗ ಸುಂಕವಸೂಲಿ ಮಾಡುತ್ತಿದ್ದ ಅಲ್ಫಾಯನ ಮಗನಾದ ಲೇವಿಯನ್ನು ಕಂಡನು. ಲೇವಿಯು ಸುಂಕದಕಟ್ಟೆಯಲ್ಲಿ ಕುಳಿತಿದ್ದನು. ಯೇಸು ಅವನಿಗೆ, “ನನ್ನನ್ನು ಹಿಂಬಾಲಿಸು” ಎಂದು ಹೇಳಿದನು. ಆಗ ಅವನು ಎದ್ದು ಯೇಸುವನ್ನು ಹಿಂಬಾಲಿಸಿದನು. |
15
|
ಅಂದು ಸ್ವಲ್ಪ ಹೊತ್ತಾದ ಬಳಿಕ ಯೇಸು ಲೇವಿಯ ಮನೆಯಲ್ಲಿ ಊಟಮಾಡುತ್ತಿದ್ದನು. ಅಲ್ಲಿ ಅನೇಕ ಸುಂಕದ ಅಧಿಕಾರಿಗಳು ಮತ್ತು ಇತರ ಕೆಟ್ಟ ಜನರು ಸಹ ಯೇಸು ಮತ್ತು ಆತನ ಶಿಷ್ಯರ ಸಂಗಡ ಊಟಮಾಡುತ್ತಿದ್ದರು. ಈ ಜನರಲ್ಲಿ ಅನೇಕರು ಯೇಸುವಿನ ಹಿಂಬಾಲಕರಾಗಿದ್ದರು. |
16
|
ಈ ಸುಂಕದ ಅಧಿಕಾರಿಗಳೊಂದಿಗೆ ಮತ್ತು ಇತರ ಕೆಟ್ಟ ಜನರೊಂದಿಗೆ ಯೇಸು ಊಟಮಾಡುತ್ತಿರುವುದನ್ನು ಧರ್ಮೋಪದೇಶಕರು ಮತ್ತು ಫರಿಸಾಯರು ನೋಡಿ ಆತನ ಶಿಷ್ಯರಿಗೆ, “ಯೇಸು ಪಾಪಿಗಳೊಂದಿಗೆ ಮತ್ತು ಸುಂಕದ ಅಧಿಕಾರಿಗಳೊಂದಿಗೆ ಏಕೆ ಊಟ ಮಾಡುತ್ತಾನೆ?” ಎಂದು ಕೇಳಿದರು. |
17
|
ಬಳಿಕ ಯೇಸು ಅವರಿಗೆ, “ಆರೋಗ್ಯವಂತರಿಗೆ ವೈದ್ಯನ ಅಗತ್ಯವಿಲ್ಲ, ಆರೋಗ್ಯವಿಲ್ಲದವರಿಗೆ ವೈದ್ಯನ ಅಗತ್ಯವಿದೆ. ನಾನು ನೀತಿವಂತರನ್ನು ಕರೆಯಲು ಬರಲಿಲ್ಲ, ಪಾಪಿಗಳನ್ನು ಕರೆಯಲು ಬಂದೆನು” ಎಂದು ಹೇಳಿದನು. |
18
|
ಯೋಹಾನನ ಶಿಷ್ಯರು ಮತ್ತು ಫರಿಸಾಯರು ಉಪವಾಸ ಮಾಡುತ್ತಿದ್ದರು. ಕೆಲವು ಜನರು ಯೇಸುವಿನ ಬಳಿಗೆ ಬಂದು, “ಯೋಹಾನನ ಶಿಷ್ಯರು ಮತ್ತು ಫರಿಸಾಯರ ಹಿಂಬಾಲಕರು ಉಪವಾಸ ಮಾಡುತ್ತಾರೆ. ಆದರೆ ನಿನ್ನ ಶಿಷ್ಯರು ಏಕೆ ಉಪವಾಸ ಮಾಡುವುದಿಲ್ಲ?” ಎಂದು ಕೇಳಿದರು. |
19
|
ಯೇಸು, “ಮದುವೆಯಲ್ಲಿ ಮದುಮಗನು ತಮ್ಮ ಜೊತೆಯಲ್ಲಿ ಇರುವಾಗ ಅವನ ಗೆಳೆಯರು ವ್ಯಸನಪಡುವುದಿಲ್ಲ. ಉಪವಾಸ ಮಾಡುವುದಿಲ್ಲ. |
20
|
ಆದರೆ ಮದುಮಗನು ಅವರನ್ನು ಬಿಟ್ಟು ಹೋಗುವ ಕಾಲ ಬರುತ್ತದೆ. ಆಗ ಅವನ ಗೆಳೆಯರು ವ್ಯಸನ ಪಡುತ್ತಾರೆ, ಉಪವಾಸ ಮಾಡುತ್ತಾರೆ. |
21
|
ಒಬ್ಬ ವ್ಯಕ್ತಿಯು ತನ್ನ ಹಳೆಯ ಮೇಲಂಗಿಯ ಹರಕಿಗೆ ಹೊಸ ಬಟ್ಟೆಯನ್ನು ತೇಪೆ ಹಚ್ಚುವುದಿಲ್ಲ. ಒಂದುವೇಳೆ ಹಚ್ಚಿದರೆ, ಆ ತೇಪೆಯು ಹಿಂಜಿಕೊಂಡು ಆ ಹರಕನ್ನು ಮತ್ತಷ್ಟು ದೊಡ್ಡದನ್ನಾಗಿ ಮಾಡುತ್ತದೆ. |
22
|
ಹಾಗೆಯೇ, ಜನರು ಹೊಸ ದ್ರಾಕ್ಷಾರಸವನ್ನು ಹಳೆಯ ಬುದ್ದಲಿಗಳಲ್ಲಿ ಹಾಕಿಡುವುದಿಲ್ಲ. ಏಕೆಂದರೆ ಅದು ಬುದ್ದಲಿಗಳನ್ನು ಒಡೆದುಹಾಕುವುದರಿಂದ ದ್ರಾಕ್ಷಾರಸವೂ ಹಾಳಾಗುತ್ತದೆ. ಆದ್ದರಿಂದ ಜನರು ಯಾವಾಗಲೂ ಹೊಸ ದ್ರಾಕ್ಷಾರಸವನ್ನು ಹೊಸ ಬುದ್ದಲಿಗಳಲ್ಲಿ ಹಾಕಿಡುತ್ತಾರೆ” ಎಂದು ಉತ್ತರಕೊಟ್ಟನು. |
23
|
ಸಬ್ಬತ್ದಿನದಂದು, ಯೇಸು ತನ್ನ ಶಿಷ್ಯರೊಂದಿಗೆ ಕೆಲವು ಹೊಲಗಳ ಮೂಲಕ ಹಾದುಹೋಗುತ್ತಿದ್ದನು. ಶಿಷ್ಯರು ತಿನ್ನಲು ಕೆಲವು ಕಾಳಿನ ತೆನೆಗಳನ್ನು ಕಿತ್ತುಕೊಂಡರು. |
24
|
ಫರಿಸಾಯರು ಇದನ್ನು ಕಂಡು ಯೇಸುವಿಗೆ, “ನಿನ್ನ ಶಿಷ್ಯರು ಹೀಗೇಕೆ ಮಾಡುತ್ತಾರೆ? ಸಬ್ಬತ್ದಿನದಂದು ಹೀಗೆ ಮಾಡುವುದು ಯೆಹೊದ್ಯರ ನಿಯಮಗಳಿಗೆ ವಿರುದ್ಧವಲ್ಲವೆ?” ಎಂದು ಕೇಳಿದರು. |
25
|
ಯೇಸು ಅವರಿಗೆ, “ದಾವೀದನು ಮತ್ತು ಅವನ ಜನರು ಹಸಿದು ಆಹಾರವನ್ನು ಬಯಸಿದಾಗ ಅವನೇನು ಮಾಡಿದನೆಂಬುದನ್ನು ನೀವು ಓದಿದ್ದೀರಿ. |
26
|
ಅದು ಮಹಾಯಾಜಕನಾದ ಅಬಿಯಾತರನ ಕಾಲ. ದಾವೀದನು ದೇವಾಲಯಕ್ಕೆ ಹೋಗಿ, ದೇವರಿಗೆ ಅರ್ಪಿಸಿದ ರೊಟ್ಟಿಯನ್ನು ತಿಂದನು. ಯಾಜಕರು ಮಾತ್ರ ಆ ರೊಟ್ಟಿಯನ್ನು ತಿನ್ನತಕ್ಕದ್ದೆಂದು ಮೋಶೆಯ ಧರ್ಮಶಾಸ್ತ್ರ ಹೇಳುತ್ತದೆ. ದಾವೀದನು ತನ್ನೊಂದಿಗಿದ್ದ ಜನರಿಗೂ ಆ ರೊಟ್ಟಿಯನ್ನು ನೀಡಿದನು” ಎಂದು ಉತ್ತರಕೊಟ್ಟನು. |
27
|
ನಂತರ ಯೇಸು ಫರಿಸಾಯರಿಗೆ, “ಸಬ್ಬತ್ದಿನವನ್ನು ನಿರ್ಮಾಣ ಮಾಡಿರುವುದು ಜನರ ಸಹಾಯಕ್ಕಾಗಿ. ಆದರೆ ಜನರನ್ನು ಸೃಷ್ಟಿಸಿರುವುದು ಸಬ್ಬತ್ದಿನಕ್ಕೆ ಅವರು ಅಧೀನರಾಗಿರಲಿ ಎಂದಲ್ಲ. |
28
|
ಆದ್ದರಿಂದ ಮನುಷ್ಯಕುಮಾರನು ಸಬ್ಬತ್ದಿನಕ್ಕೂ ಉಳಿದೆಲ್ಲ ದಿನಗಳಿಗೂ ಪ್ರಭುವಾಗಿದ್ದಾನೆ” ಎಂದು ಹೇಳಿದನು. |
Mark 2:18 Kannada Language Bible Words basic statistical display
COMING SOON ...