1
|
ಅಬ್ರಹಾಮನು ಮಮ್ರೆಯಲ್ಲಿದ್ದ ಓಕ್ ಮರಗಳ ತೋಪಿನ ಸಮೀಪದಲ್ಲಿ ವಾಸಿಸುತ್ತಿದ್ದಾಗ ಯೆಹೋವನು ಅವನಿಗೆ ಕಾಣಿಸಿಕೊಂಡನು. ಅಂದು ಬಿಸಿಲಿನ ತಾಪದಿಂದಾಗಿ ಅಬ್ರಹಾಮನು ತನ್ನ ಗುಡಾರದ ಬಾಗಿಲ ಬಳಿ ಕುಳಿತಿದ್ದನು. |
2
|
ಅಬ್ರಹಾಮನು ದೃಷ್ಟಿಸಿ ನೋಡಿದಾಗ ತನ್ನ ಮುಂದೆ ಮೂವರು ಪುರುಷರು ನಿಂತಿರುವುದನ್ನು ಕಂಡನು. ಕೂಡಲೇ ಅವರ ಬಳಿಗೆ ಓಡಿಹೋಗಿ ಅವರಿಗೆ ಸಾಷ್ಟಾಂಗನಮಸ್ಕಾರ ಮಾಡಿ ಅವರಿಗೆ, |
3
|
“ಸ್ವಾಮಿಗಳೇ, ನಿಮ್ಮ ಸೇವಕನಾದ ನನ್ನ ಜೊತೆಯಲ್ಲಿ ಸ್ವಲ್ಪ ಸಮಯವಿರಿ. |
4
|
ನಿಮ್ಮ ಕಾಲುಗಳನ್ನು ತೊಳೆದುಕೊಳ್ಳಲು ನೀರನ್ನು ತಂದುಕೊಡುವೆನು. ನೀವು ಮರದ ಕೆಳಗೆ ವಿಶ್ರಾಂತಿ ತೆಗೆದುಕೊಳ್ಳಿರಿ. |
5
|
ನಾನು ನಿಮಗೆ ಊಟವನ್ನು ತಂದುಕೊಡುವೆನು. ನೀವು ಬೇಕಾದಷ್ಟು ಊಟ ಮಾಡಿದ ನಂತರ ನಿಮ್ಮ ಪ್ರಯಾಣವನ್ನು ಮುಂದುವರಿಸಬಹುದು” ಎಂದು ಹೇಳಿದನು. ಆ ಮೂವರು ಪುರಷರು, “ಸರಿ, ನೀನು ಹೇಳಿದಂತೆಯೇ ಮಾಡು” ಅಂದರು. |
6
|
ಅಬ್ರಹಾಮನು ಗುಡಾರಕ್ಕೆ ಬೇಗನೆ ಹೋಗಿ ಸಾರಳಿಗೆ, “ಮೂರು ದೊಡ್ಡ ರೊಟ್ಟಿಗಳಿಗೆ ಬೇಕಾಗುವಷ್ಟು ಗೋಧಿ ಹಿಟ್ಟನ್ನು ಬೇಗನೆ ನಾದು” ಎಂದು ಹೇಳಿದನು. |
7
|
ಬಳಿಕ ಅವನು ತನ್ನ ಪಶುಗಳಿದ್ದಲ್ಲಿಗೆ ಓಡಿಹೋಗಿ ಉತ್ತಮವಾದ ಎಳೆಕರುವನ್ನು ತೆಗೆದು ಸೇವಕನಿಗೆ ಕೊಟ್ಟು, “ಬೇಗನೇ ಕರುವನ್ನು ಕೊಯ್ದು, ಊಟಕ್ಕೆ ಸಿದ್ಧಮಾಡು” ಎಂದು ಹೇಳಿದನು. |
8
|
ಅಬ್ರಹಾಮನು ಆ ಮೂವರಿಗೆ ಮಾಂಸದ ಅಡಿಗೆಯನ್ನು ಬಡಿಸಿದನು. ಇದಲ್ಲದೆ ಅವನು ಹಾಲನ್ನೂ ಬೆಣ್ಣೆಯನ್ನೂ ಕೊಟ್ಟನು. ಆ ಮೂವರು ಊಟ ಮಾಡುವಾಗ ಅಬ್ರಹಾಮನು ಅವರ ಸಮೀಪದಲ್ಲಿ ಮರದ ಕೆಳಗೆ ನಿಂತುಕೊಂಡಿದ್ದನು. |
9
|
ಆ ಪುರುಷರು ಅಬ್ರಹಾಮನಿಗೆ, “ನಿನ್ನ ಹೆಂಡತಿಯಾದ ಸಾರಳು ಎಲ್ಲಿ?” ಎಂದು ಕೇಳಿದರು. ಅಬ್ರಹಾಮನು ಅವರಿಗೆ, “ಆಕೆ ಗುಡಾರದಲ್ಲಿ ಇದ್ದಾಳೆ” ಅಂದನು. |
10
|
ಆಗ ಯೆಹೋವನು ಅವನಿಗೆ, “ನಾನು ಮತ್ತೆ ವಸಂತಕಾಲದಲ್ಲಿ ಬರುತ್ತೇನೆ. ಆ ಸಮಯದಲ್ಲಿ ನಿನ್ನ ಹೆಂಡತಿಯಾದ ಸಾರಳಿಗೆ ಒಬ್ಬ ಮಗನಿರುವನು” ಎಂದು ಹೇಳಿದನು. ಸಾರಳು ಗುಡಾರದಲ್ಲಿದ್ದುಕೊಂಡು ಇದನ್ನೆಲ್ಲಾ ಕೇಳಿಸಿಕೊಳ್ಳುತ್ತಿದ್ದಳು. ಅವಳಿಗೆ ಈ ಸಂಗತಿಯೂ ಕೇಳಿಸಿತು. |
11
|
ಅಬ್ರಹಾಮನೂ ಮತ್ತು ಸಾರಳೂ ತುಂಬ ವೃದ್ಧರಾಗಿದ್ದರು. ಸಾರಳಿಗೂ ಮಕ್ಕಳು ಹುಟ್ಟುವ ಕಾಲ ಆಗಿಹೋಗಿತ್ತು. |
12
|
ಆದ್ದರಿಂದ ಸಾರಳಿಗೆ ನಂಬಲಾಗಲಿಲ್ಲ. ಆಕೆ ತನ್ನೊಳಗೆ, “ಈಗಾಗಲೇ ನನಗೆ ವಯಸ್ಸಾಗಿದೆ; ನನ್ನ ಗಂಡನಿಗೂ ವಯಸ್ಸಾಗಿದೆ” ಅಂದುಕೊಂಡಳು. |
13
|
ಆಗ ಯೆಹೋವನು ಅಬ್ರಹಾಮನಿಗೆ, “ನಾನು ಹೇಳುವುದನ್ನು ಸಾರಳು ನಂಬುತ್ತಿಲ್ಲ. ಆಕೆಯು ನಗುತ್ತಾ ತನ್ನೊಳಗೆ, ‘ನನಗೆ ಮಕ್ಕಳಾಗದಷ್ಟು ವಯಸ್ಸಾಗಿದೆ’ ಎಂದು ಹೇಳಿದ್ದೇಕೆ? |
14
|
ಯೆಹೋವನಿಗೆ ಅಸಾಧ್ಯವಾದುದುಂಟೇ? ನಾನು ಮತ್ತೆ ವಸಂತಕಾಲದಲ್ಲಿ ಬರುವೆನು. ಆಗ ನಿನ್ನ ಹೆಂಡತಿಯಾದ ಸಾರಳಿಗೆ ಒಬ್ಬ ಮಗನಿದ್ದೇ ಇರುವನು” ಅಂದನು. |
15
|
ಆದರೆ ಸಾರಳು ಭಯಪಟ್ಟು, “ನಾನು ನಗಲಿಲ್ಲ” ಅಂದಳು. ಅದಕ್ಕೆ ಯೆಹೋವನು, “ಇಲ್ಲ, ನೀನು ನಕ್ಕಿದ್ದು ನಿಜ!” ಅಂದನು. |
16
|
ಆಮೇಲೆ ಆ ಪುರುಷರು ಹೋಗಲು ಎದ್ದುನಿಂತರು. ಅವರು ಸೊದೋಮಿನ ಕಡೆಗೆ ಕಣ್ಣೆತ್ತಿ ನೋಡಿ ಆ ಕಡೆಗೆ ನಡೆಯಲಾರಂಭಿಸಿದರು. ಅವರನ್ನು ಕಳುಹಿಸಿಕೊಡಲು ಅಬ್ರಹಾಮನು ಅವರ ಸಂಗಡ ಸ್ವಲ್ಪದೂರ ಹೋದನು. |
17
|
ಯೆಹೋವನು ತನ್ನೊಳಗೆ ಹೀಗೆಂದುಕೊಂಡನು: “ನಾನು ಈಗ ಮಾಡುವ ಕಾರ್ಯವನ್ನು ಅಬ್ರಹಾಮನಿಗೆ ತಿಳಿಸಲೇ? |
18
|
ಅಬ್ರಹಾಮನಿಂದ ಬಲಿಷ್ಠವಾದ ಮಹಾಜನಾಂಗ ಹುಟ್ಟುವುದು; ಅವನ ಮೂಲಕ ಈ ಲೋಕದ ಜನರೆಲ್ಲರೂ ಆಶೀರ್ವಾದ ಹೊಂದುವರು. |
19
|
ನಾನು ಅವನೊಡನೆ ವಿಶೇಷವಾದ ಒಡಂಬಡಿಕೆಯನ್ನು ಮಾಡಿಕೊಂಡಿದ್ದೇನೆ. ಅವನು ತನ್ನ ಮಕ್ಕಳಿಗೂ ಸಂತತಿಯವರಿಗೂ ನನಗೆ ವಿಧೇಯರಾಗುವಂತೆ ಮತ್ತು ನ್ಯಾಯನೀತಿಗಳಿಂದ ಜೀವಿಸುವಂತೆ ಆಜ್ಞಾಪಿಸಲೆಂದು ನಾನು ಅವನೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡೆನು. ಅವರು ಹೀಗೆ ಜೀವಿಸಿದರೆ, ನನ್ನ ವಾಗ್ದಾನಗಳನ್ನೆಲ್ಲಾ ನೆರವೇರಿಸುವೆನು.” |
20
|
ಇದಲ್ಲದೆ ಯೆಹೋವನು, “ಸೊದೋಮ್ ಮತ್ತು ಗೊಮೋರಗಳ ಜನರು ತುಂಬಾ ಕೆಟ್ಟವರೆಂದು ಅನೇಕ ಸಲ ಕೇಳಿದ್ದೇನೆ. |
21
|
ಆದ್ದರಿಂದ ನಾನು ಕೆಳಗಿಳಿದು ಅಲ್ಲಿಗೆ ಹೋಗಿ ನಾನು ಕೇಳಿದ್ದು ನಿಜವೇ ಎಂದು ಪರೀಕ್ಷಿಸುವೆನು” ಅಂದನು. |
22
|
ಆದ್ದರಿಂದ ಆ ಪುರುಷರು ಸೊದೋಮಿನ ಕಡೆಗೆ ನಡೆಯತೊಡಗಿದರು. ಆದರೆ ಅಬ್ರಹಾಮನು ಯೆಹೋವನ ಎದುರಿನಲ್ಲಿ ನಿಂತುಕೊಂಡಿದ್ದನು. |
23
|
ಅಬ್ರಹಾಮನು ಯೆಹೋವನ ಸಮೀಪಕ್ಕೆ ಬಂದು, “ಯೆಹೋವನೇ, ನೀನು ಕೆಟ್ಟವರನ್ನು ನಾಶಮಾಡುವಾಗ ನೀತಿವಂತರನ್ನು ಸಹ ನಾಶಮಾಡಬೇಕೆಂದಿರುವೆಯೋ? |
24
|
ಒಂದುವೇಳೆ ಆ ಪಟ್ಟಣದಲ್ಲಿ ಐವತ್ತು ಮಂದಿ ನೀತಿವಂತರಿದ್ದರೆ ಏನು ಮಾಡುವೆ? ನೀನು ಆ ಪಟ್ಟಣವನ್ನು ನಾಶಮಾಡುವಿಯೋ? ಖಂಡಿತವಾಗಿಯೂ ಇಲ್ಲ! ಅಲ್ಲಿ ಜೀವಿಸುತ್ತಿರುವ ಐವತ್ತು ಮಂದಿ ನೀತಿವಂತರಿಗಾಗಿ ನೀನು ಆ ಪಟ್ಟಣವನ್ನು ಉಳಿಸಿ ಕಾಪಾಡುವೆ. |
25
|
ಖಂಡಿತವಾಗಿಯೂ ನೀನು ಆ ಪಟ್ಟಣವನ್ನು ನಾಶಮಾಡುವುದಿಲ್ಲ. ಕೆಟ್ಟವರನ್ನು ಕೊಲ್ಲುವುದಕ್ಕಾಗಿ ನೀನು ಐವತ್ತು ಮಂದಿ ನೀತಿವಂತರನ್ನು ಕೊಲ್ಲುವುದಿಲ್ಲ. ಒಂದುವೇಳೆ ನೀನು ಕೊಂದರೆ, ಒಳ್ಳೆಯವರೂ ಕೆಟ್ಟವರೂ ಸರಿಸಮಾನರಾಗುವರು. ಅವರಿಬ್ಬರೂ ದಂಡನೆಗೆ ಗುರಿಯಾಗುವರು. ನೀನು ಲೋಕದವರಿಗೆಲ್ಲ ನ್ಯಾಯಾಧಿಪತಿ. ನೀನು ನ್ಯಾಯವಾದದ್ದನ್ನೇ ಮಾಡುವೆ ಎಂದು ನನಗೆ ಗೊತ್ತಿದೆ” ಎಂದು ಹೇಳಿದನು. |
26
|
ಆಮೇಲೆ ಯೆಹೋವನು, “ನಾನು ಸೊದೋಮಿನಲ್ಲಿ ಐವತ್ತು ಮಂದಿ ನೀತಿವಂತರನ್ನು ಕಂಡರೆ, ನಾನು ಇಡೀ ಪಟ್ಟಣವನ್ನೇ ಉಳಿಸಿ ಕಾಪಾಡುವೆನು” ಎಂದನು. |
27
|
ಆಗ ಅಬ್ರಹಾಮನು ಯೆಹೋವನಿಗೆ, “ನಿನಗೆ ನನ್ನನ್ನು ಹೋಲಿಸಿಕೊಂಡರೆ, ನಾನು ಕೇವಲ ಧೂಳು ಮತ್ತು ಬೂದಿ. ಆದರೆ ಈ ಪ್ರಶ್ನೆಯನ್ನೂ ಕೇಳಲು ನನಗೆ ಅವಕಾಶಕೊಡು. |
28
|
ಒಂದುವೇಳೆ ಐದು ಮಂದಿ ಕಡಿಮೆಯಾಗಿದ್ದು ನಲವತ್ತೈದು ಮಂದಿ ಮಾತ್ರ ನೀತಿವಂತರಿದ್ದರೆ ಆ ಪಟ್ಟಣವನ್ನು ನಾಶಮಾಡುವಿಯಾ?” ಎಂದು ಕೇಳಿದನು. ಅದಕ್ಕೆ ಯೆಹೋವನು ಅವನಿಗೆ, “ನಾನು ನಲವತ್ತೈದು ಮಂದಿ ನೀತಿವಂತರನ್ನು ಕಂಡರೂ ಆ ಪಟ್ಟಣವನ್ನು ನಾಶಮಾಡುವುದಿಲ್ಲ” ಎಂದು ಹೇಳಿದನು. |
29
|
ಮತ್ತೆ ಅಬ್ರಹಾಮನು ದೇವರಿಗೆ, “ಕೇವಲ ನಲವತ್ತು ಮಂದಿ ನೀತಿವಂತರನ್ನು ಕಂಡರೆ, ನೀನು ಆ ಪಟ್ಟಣವನ್ನು ನಾಶಮಾಡುವೆಯಾ?” ಎಂದು ಕೇಳಿದನು. ಯೆಹೋವನು ಅವನಿಗೆ, “ನಲವತ್ತು ಮಂದಿ ನೀತಿವಂತರನ್ನು ಕಂಡರೂ ನಾನು ಆ ಪಟ್ಟಣವನ್ನು ನಾಶಮಾಡುವುದಿಲ್ಲ” ಎಂದು ಹೇಳಿದನು. |
30
|
ಆಮೇಲೆ ಅಬ್ರಹಾಮನು, “ಯೆಹೋವನೇ, ನನ್ನ ಮೇಲೆ ಸಿಟ್ಟುಗೊಳ್ಳಬೇಡ. ಈ ಪ್ರಶ್ನೆಯನ್ನೂ ಕೇಳುವೆ: ಆ ಪಟ್ಟಣದಲ್ಲಿ ಕೇವಲ ಮೂವತ್ತು ಮಂದಿ ನೀತಿವಂತರಿದ್ದರೆ ನೀನು ಆ ಪಟ್ಟಣವನ್ನು ನಾಶಮಾಡುವೆಯಾ?” ಎಂದು ಕೇಳಿದನು. ಯೆಹೋವನು ಅವನಿಗೆ, “ಅಲ್ಲಿ ಮೂವತ್ತು ಮಂದಿ ನೀತಿವಂತರಿದ್ದರೂ ನಾನು ಆ ಪಟ್ಟಣವನ್ನು ನಾಶಮಾಡುವುದಿಲ್ಲ” ಅಂದನು. |
31
|
ಆಮೇಲೆ ಅಬ್ರಹಾಮನು, “ನನ್ನ ಯೆಹೋವನು ಏನೂ ತಿಳಿದುಕೊಳ್ಳದಿರಲಿ. ನಾನು ಮತ್ತೊಂದು ಪ್ರಶ್ನೆ ಕೇಳುವೆ. ಅಲ್ಲಿ ಇಪ್ಪತ್ತು ಮಂದಿ ನೀತಿವಂತರಿದ್ದರೆ ಏನು ಮಾಡುವೆ?” ಎಂದು ಕೇಳಿದನು. ಯೆಹೋವನು ಅವನಿಗೆ, “ಅಲ್ಲಿ ಇಪ್ಪತ್ತು ಮಂದಿ ನೀತಿವಂತರನ್ನು ಕಂಡರೆ ಆ ಪಟ್ಟಣವನ್ನು ನಾಶಮಾಡುವುದಿಲ್ಲ” ಎಂದು ಹೇಳಿದನು. |
32
|
ಆಮೇಲೆ ಅಬ್ರಹಾಮನು, “ಯೆಹೋವನೇ, ದಯಮಾಡಿ ನನ್ನ ಮೇಲೆ ಸಿಟ್ಟುಗೊಳ್ಳಬೇಡ. ಇದೊಂದು ಸಲ ಮಾತ್ರ ಪ್ರಶ್ನೆ ಕೇಳುವೆ. ಹತ್ತು ಮಂದಿ ನೀತಿವಂತರನ್ನು ಕಂಡರೆ ಏನು ಮಾಡುವೆ?” ಎಂದು ಕೇಳಿದನು. ಯೆಹೋವನು ಅವನಿಗೆ, “ನಾನು ಆ ಪಟ್ಟಣದಲ್ಲಿ ಹತ್ತು ಮಂದಿ ನೀತಿವಂತರನ್ನು ಕಂಡರೂ, ಅದನ್ನು ನಾಶಮಾಡುವುದಿಲ್ಲ” ಅಂದನು. |
33
|
ಯೆಹೋವನು ಅಬ್ರಹಾಮನೊಂದಿಗೆ ಮಾತಾಡುವುದನ್ನು ಮುಗಿಸಿದ ಮೇಲೆ ಅಲ್ಲಿಂದ ಹೊರಟುಹೋದನು. ಅಬ್ರಹಾಮನು ಸಹ ತನ್ನ ಮನೆಗೆ ಹಿಂತಿರುಗಿದನು. |
Genesis 18:15 Kannada Language Bible Words basic statistical display
COMING SOON ...