1
|
ಅಪೊಸ್ತಲನಾದ ಪೌಲನು ಬರೆಯುವ ಪತ್ರ. ನನ್ನನ್ನು ಅಪೊಸ್ತಲನನ್ನಾಗಿ ಆರಿಸಿದವರು ಮನುಷ್ಯರಲ್ಲ. ನಾನು ಮನುಷ್ಯರಿಂದ ಕಳುಹಿಸಲ್ಪಟ್ಟವನಲ್ಲ. ನನ್ನನ್ನು ಅಪೊಸ್ತಲನನ್ನಾಗಿ ಮಾಡಿದವರು ಯಾರೆಂದರೆ, ಯೇಸು ಕ್ರಿಸ್ತನು ಮತ್ತು ತಂದೆಯಾದ ದೇವರು. ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದಾತನು ದೇವರೇ. |
2
|
ನಾನು ಮತ್ತು ನನ್ನೊಂದಿಗಿರುವ ಎಲ್ಲಾ ಸಹೋದರರು ಈ ಪತ್ರವನ್ನು ಗಲಾತ್ಯದಲ್ಲಿರುವ ಸಭೆಗಳವರಿಗೆ ಬರೆದಿದ್ದೇವೆ. |
3
|
ನಮ್ಮ ತಂದೆಯಾದ ದೇವರೂ ಪ್ರಭುವಾದ ಯೇಸು ಕ್ರಿಸ್ತನೂ ನಿಮಗೆ ಕೃಪೆ ತೋರಲಿ ಮತ್ತು ಶಾಂತಿಕೊಡಲಿ ಎಂದು ನಾವು ಪ್ರಾರ್ಥಿಸುತ್ತೇವೆ. |
4
|
ನಾವು ವಾಸಿಸುತ್ತಿರುವ ಈ ಕೆಟ್ಟ ಲೋಕದೊಳಗಿಂದ ನಮ್ಮನ್ನು ಬಿಡುಗಡೆ ಮಾಡಬೇಕೆಂದು ಯೇಸು ನಮ್ಮ ಪಾಪಗಳಿಗಾಗಿ ತನ್ನನ್ನೇ ಕೊಟ್ಟುಬಿಟ್ಟನು. ಇದು ತಂದೆಯಾದ ದೇವರ ಚಿತ್ತವಾಗಿತ್ತು. |
5
|
ಎಂದೆಂದಿಗೂ ದೇವರಿಗೆ ಮಹಿಮೆಯಾಗಲಿ. ಆಮೆನ್. |
6
|
ಸ್ವಲ್ಪಕಾಲದ ಹಿಂದೆ ತನ್ನನ್ನು ಹಿಂಬಾಲಿಸುವುದಕ್ಕಾಗಿ ನಿಮ್ಮನ್ನು ಕರೆದಾತನು ದೇವರೇ. ಆತನು ನಿಮ್ಮನ್ನು ಯೇಸು ಕ್ರಿಸ್ತನ ಮೂಲಕವಾಗಿ ಬಂದ ತನ್ನ ಕೃಪೆಯ ಮೂಲಕ ಕರೆದನು. ಆದರೆ ಈಗ ನಾನು ನಿಮ್ಮೆಲ್ಲರ ವಿಷಯದಲ್ಲಿ ಆಶ್ಚರ್ಯಗೊಂಡಿದ್ದೇನೆ. ನೀವು ಈಗಾಗಲೇ ವಿಮುಖರಾಗಿ ಬೇರೊಂದು ಸುವಾರ್ತೆಯನ್ನು ನಂಬಿಕೊಂಡಿದ್ದೀರಿ. |
7
|
ನಿಜವಾಗಿ ಹೇಳಬೇಕಾದರೆ, ಬೇರೊಂದು ಸತ್ಯಸುವಾರ್ತೆಯು ಇಲ್ಲವೇ ಇಲ್ಲ. ಆದರೆ ಕೆಲವು ಜನರು ನಿಮ್ಮನ್ನು ಗಲಿಬಿಲಿಗೊಳಿಸುತ್ತಿದ್ದಾರೆ. ಅವರು ಕ್ರಿಸ್ತನ ಸುವಾರ್ತೆಯನ್ನು ಬದಲಾಯಿಸಬೇಕೆಂದಿದ್ದಾರೆ. |
8
|
ನಾವು ನಿಮಗೆ ಸತ್ಯಸುವಾರ್ತೆಯನ್ನು ತಿಳಿಸಿದೆವು. ಆದ್ದರಿಂದ ನಾವೇ ಆಗಲಿ, ಪರಲೋಕದ ದೇವದೂತರೇ ಆಗಲಿ ಮತ್ತೊಂದು ಸುವಾರ್ತೆಯನ್ನು ತಿಳಿಸಿದರೆ ಶಾಪಗ್ರಸ್ತರಾಗಲಿ. |
9
|
ನಾನು ನಿಮಗೆ ಇದನ್ನು ಮೊದಲೇ ತಿಳಿಸಿದ್ದರೂ ಈಗ ಮತ್ತೆ ಹೇಳುತ್ತೇನೆ. ನೀವು ಈಗಾಗಲೇ ಸ್ವೀಕರಿಸಿಕೊಂಡಿರುವ ಸತ್ಯಸುವಾರ್ತೆಗೆ ವಿರುದ್ಧವಾದದ್ದನ್ನು ಯಾವನಾದರೂ ಸಾರಿದರೆ ಅವನು ಶಾಪಗ್ರಸ್ತನಾಗಲಿ. |
10
|
ಮನುಷ್ಯರು ನನ್ನನ್ನು ಸ್ವೀಕರಿಸಿಕೊಳ್ಳುವಂತೆ ಮಾಡುವುದಕ್ಕಾಗಿ ನಾನು ಪ್ರಯತ್ನಿಸುತ್ತಿದ್ದೇನೆಂದು ನೀವು ಭಾವಿಸುತ್ತೀರೋ? ಇಲ್ಲ! ನಾನು ದೇವರನ್ನೇ ಮೆಚ್ಚಿಸಲು ಪ್ರಯತ್ನಿಸುತ್ತಿದ್ದೇನೆ. ಮನುಷ್ಯರನ್ನು ಮೆಚ್ಚಿಸುವುದಕ್ಕಾಗಿ ನಾನು ಪ್ರಯತ್ನಿಸುತ್ತಿದ್ದೇನೋ? ನಾನು ಮನುಷ್ಯರನ್ನು ಮೆಚ್ಚಿಸಬೇಕೆಂದಿದ್ದರೆ ಯೇಸು ಕ್ರಿಸ್ತನ ಸೇವಕನಾಗುತ್ತಿರಲಿಲ್ಲ. |
11
|
ಸಹೋದರರೇ, ನಾವು ಸಾರಿದ ಸುವಾರ್ತೆ ಮನುಷ್ಯರಿಂದ ಬಂದದ್ದಲ್ಲವೆಂಬುದು ನಿಮಗೆ ತಿಳಿದಿರಲಿ. |
12
|
ನನಗೆ ಸುವಾರ್ತೆ ದೊರೆತದ್ದು ಮನುಷ್ಯರಿಂದಲ್ಲ. ಯಾವನೂ ನನಗೆ ಸುವಾರ್ತೆಯನ್ನು ಉಪದೇಶಿಸಲಿಲ್ಲ. ನಾನು ಜನರಿಗೆ ಉಪದೇಶಿಸಬೇಕಾದ ಸುವಾರ್ತೆಯನ್ನು ಯೇಸು ಕ್ರಿಸ್ತನೇ ನನಗೆ ಪ್ರಕಟಿಸಿದನು. |
13
|
ನನ್ನ ಹಿಂದಿನ ಜೀವಿತದ ಬಗ್ಗೆ ನೀವು ಕೇಳಿದ್ದೀರಿ. ನಾನು ಯೆಹೂದ್ಯಧರ್ಮಕ್ಕೆ ಸೇರಿದವನಾಗಿದ್ದೆನು. ದೇವರ ಸಭೆಯನ್ನು ಬಹಳವಾಗಿ ಹಿಂಸಿಸಿದೆನು. ಕ್ರೈಸ್ತ ಸಭೆಯನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದೆನು. |
14
|
ಯೆಹೂದ್ಯಧರ್ಮದ ನಾಯಕನಾಗಲು ನನ್ನ ಸಮವಯಸ್ಕರರಿಗಿಂತ ಎಷ್ಟೋ ಕಾರ್ಯಗಳನ್ನು ಮಾಡಿದೆನು. ನಮ್ಮ ಪೂರ್ವಿಕರ ಸಂಪ್ರದಾಯಗಳನ್ನು ಬೇರೆಲ್ಲರಿಗಿಂತಲೂ ಅತ್ಯಧಿಕ ನಿಷ್ಠೆಯಿಂದ ಅನುಸರಿಸಿದೆನು. |
15
|
ಆದರೆ ನಾನು ಹುಟ್ಟುವುದಕ್ಕಿಂತ ಮೊದಲೇ ನನ್ನ ವಿಷಯದಲ್ಲಿ ದೇವರಿಗೆ ವಿಶೇಷವಾದ ಯೋಜನೆಯಿತ್ತು. ಆದ್ದರಿಂದ ದೇವರು ತನ್ನ ಕೃಪೆಯಿಂದ ನನ್ನನ್ನು ಕರೆದನು. |
16
|
ಆತನ ಮಗನ ವಿಷಯವಾದ ಸುವಾರ್ತೆಯನ್ನು ನಾನು ಯೆಹೂದ್ಯರಲ್ಲದವರಿಗೆ ತಿಳಿಸಬೇಕೆಂಬುದು ದೇವರ ಚಿತ್ತವಾಗಿತ್ತು. ಆದ್ದರಿಂದ ದೇವರು ತನ್ನ ಮಗನನ್ನು ನನಗೆ ತೋರಿಸಿದನು. ಆತನು ನನ್ನನ್ನು ಕರೆದಾಗ ನಾನು ಯಾರಿಂದಲೂ ಸಲಹೆಯನ್ನಾಗಲಿ ಸಹಾಯವನ್ನಾಗಲಿ ತೆಗೆದುಕೊಳ್ಳಲಿಲ್ಲ. |
17
|
ಅಪೊಸ್ತಲರನ್ನು ನೋಡುವುದಕ್ಕಾಗಿ ಜೆರುಸಲೇಮಿಗೂ ಹೋಗಲಿಲ್ಲ. ಅವರು ನನಗಿಂತ ಮೊದಲೇ ಅಪೊಸ್ತಲರಾಗಿದ್ದರು. ಆದರೆ, ನಾನು ತಡಮಾಡದೆ ಅರೇಬಿಯಾಕ್ಕೆ ಹೋದೆನು. ಆ ಬಳಿಕ ದಮಸ್ಕ ಪಟ್ಟಣಕ್ಕೆ ಹಿಂತಿರುಗಿದೆನು. |
18
|
ಮೂರು ವರ್ಷಗಳ ನಂತರ ಪೇತ್ರನನ್ನು ಭೇಟಿಯಾಗಲು ಜೆರುಸಲೇಮಿಗೆ ಹೋದೆನು. ಅವನೊಂದಿಗೆ ಹದಿನೈದು ದಿನಗಳ ಕಾಲ ಇದ್ದೆನು. |
19
|
ಪ್ರಭುವಿನ (ಯೇಸು) ಸಹೋದರನಾದ ಯಾಕೋಬನನ್ನು ಹೊರತು ಬೇರೆ ಯಾವ ಅಪೊಸ್ತಲರನ್ನೂ ನಾನು ಭೇಟಿಯಾಗಲಿಲ್ಲ. |
20
|
ನಾನು ಬರೆಯುತ್ತಿರುವ ಈ ಸಂಗತಿಗಳು ಸುಳ್ಳಲ್ಲವೆಂದು ದೇವರಿಗೆ ಗೊತ್ತಿದೆ. |
21
|
ತರುವಾಯ ಸಿರಿಯ ಮತ್ತು ಕಿಲಿಕ್ಯ ಪ್ರಾಂತ್ಯಗಳಿಗೆ ಹೋದೆನು. |
22
|
ಕ್ರಿಸ್ತನಲ್ಲಿರುವ ಜುದೇಯದ ಸಭೆಗಳವರು ನನ್ನನ್ನು ಹಿಂದೆಂದೂ ಭೇಟಿಯಾಗಿರಲಿಲ್ಲ. |
23
|
“ಈ ಮನುಷ್ಯನು ನಮ್ಮನ್ನು ಹಿಂಸಿಸುತ್ತಿದ್ದನು. ಆದರೆ ಈಗ ಇವನು ತಾನು ಮೊದಲೊಮ್ಮೆ ನಾಶಮಾಡಲು ಪ್ರಯತ್ನಿಸಿದ ನಂಬಿಕೆಯ ಬಗ್ಗೆ ಜನರಿಗೆ ಹೇಳುತ್ತಿದ್ದಾನೆ” ಎಂಬುದನ್ನು ಮಾತ್ರ ಅವರು ಕೇಳಿದ್ದರು. |
24
|
ಅವರು ನನ್ನ ನಿಮಿತ್ತ ದೇವರನ್ನು ಕೊಂಡಾಡಿದರು. |
Galatians 1:11 Kannada Language Bible Words basic statistical display
COMING SOON ...