1
|
ಜ್ಞಾನಿಯಾದ ಮಗನು ತನ್ನ ತಂದೆಯ ಮಾತುಗಳನ್ನು ಎಚ್ಚರಿಕೆಯಿಂದ ಕೇಳುತ್ತಾನೆ. ಆದರೆ ದುರಾಭಿಮಾನಿಯು ಕೇಳುವುದಿಲ್ಲ. |
2
|
ಒಳ್ಳೆಯವರು ತಮ್ಮ ಮಾತುಗಳಿಗೆ ಪ್ರತಿಫಲ ಹೊಂದುವರು. ಕೆಡುಕರು ಯಾವಾಗಲೂ ಕೆಟ್ಟದ್ದನ್ನು ಮಾಡಬಯಸುತ್ತಾರೆ. |
3
|
ಎಚ್ಚರಿಕೆಯಿಂದ ಮಾತಾಡುವವನು ತನ್ನ ಜೀವವನ್ನು ಕಾಪಾಡಿಕೊಳ್ಳುವನು. ಯೋಚಿಸದೆ ಮಾತಾಡುವವನು ನಾಶವಾಗುವನು. |
4
|
ಸೋಮಾರಿಯ ಆಸೆಗಳೆಲ್ಲಾ ವ್ಯರ್ಥ. ಅವನೆಂದಿಗೂ ಅವುಗಳನ್ನು ಪಡೆಯಲಾರ. ಕಷ್ಟಪಟ್ಟು ದುಡಿಯುವವರು ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳುವರು. |
5
|
ಶಿಷ್ಟರು ಸುಳ್ಳನ್ನು ದ್ವೇಷಿಸುತ್ತಾರೆ. ದುಷ್ಟರು ನಾಚಿಕೆಕರವಾದ ಕೆಲಸ ಮಾಡುವರು. |
6
|
ನೀತಿಯು ಯಥಾರ್ಥವಂತನನ್ನು ಕಾಪಾಡುವುದು. ಕೆಡುಕತನವು ಪಾಪವನ್ನು ಪ್ರೀತಿಸುವವನನ್ನು ಸೋಲಿಸುವುದು. |
7
|
ಕೆಲವರು ಐಶ್ವರ್ಯವಂತರಂತೆ ನಟಿಸುತ್ತಾರೆ, ಆದರೆ ಅವರಲ್ಲೇನೂ ಇರುವುದಿಲ್ಲ. ಕೆಲವರು ಬಡವರಂತೆ ವರ್ತಿಸುತ್ತಾರೆ. ಆದರೆ ಅವರು ನಿಜವಾಗಿಯೂ ಐಶ್ವರ್ಯವಂತರು. |
8
|
ಐಶ್ವರ್ಯವಂತರು ತಮ್ಮ ಜೀವವನ್ನು ಕಾಪಾಡಿಕೊಳ್ಳಲು ಈಡುಕೊಡಬೇಕಾಗುವುದು. ಆದರೆ ಬಡವನಿಗೆ ಅಂಥಾ ಯಾವ ಬೆದರಿಕೆಗಳೂ ಇರುವುದಿಲ್ಲ. |
9
|
ಶಿಷ್ಟನು ಪ್ರಕಾಶಮಾನವಾದ ಬೆಳಕಿನಂತಿರುವನು. ದುಷ್ಟನಾದರೊ ನಂದಿಹೋಗುತ್ತಿರುವ ಬೆಳಕಿನಂತಿರುವನು. |
10
|
ದುರಾಭಿಮಾನವು ಕೇವಲ ಜಗಳಕ್ಕೆ ಕಾರಣ. ಬುದ್ಧಿವಾದವನ್ನು ಕೇಳುವವರು ವಿವೇಕಿಗಳಾಗಿದ್ದಾರೆ. |
11
|
ಮೋಸದಿಂದ ಸಂಪಾದಿಸಿದ ಹಣವು ಕ್ಷಯಿಸಿ ಹೋಗುವುದು. ದುಡಿದು ಸಂಪಾದಿಸಿದ ಹಣ ಹೆಚ್ಚುತ್ತಾ ಹೋಗುವುದು. |
12
|
ನಿರೀಕ್ಷೆಯು ನೆರವೇರದಿದ್ದರೆ ಹೃದಯವು ವ್ಯಸನವಾಗಿರುವುದು. ಬಯಸಿದ್ದು ನೆರವೇರಿದರೆ ಆನಂದವು ತುಂಬಿಕೊಳ್ಳುವುದು. |
13
|
ಬುದ್ಧಿಮಾತನ್ನು ಕೇಳದವನು ತನಗೆ ತೊಂದರೆಯನ್ನು ಬರಮಾಡಿಕೊಳ್ಳುವನು. ಬುದ್ಧಿವಾದವನ್ನು ಗೌರವಿಸುವವನು ಪ್ರತಿಫಲವನ್ನು ಹೊಂದುವನು. |
14
|
ಜ್ಞಾನಿಯ ಉಪದೇಶಗಳು ಜೀವದ ಬುಗ್ಗೆಯಾಗಿವೆ; ಮರಣಕರವಾದ ಬಲೆಗಳಿಗೆ ಸಿಕ್ಕಿಕೊಳ್ಳದಂತೆ ಅವು ಸಹಾಯಮಾಡುತ್ತವೆ. |
15
|
ಜನರು ಜಾಣನನ್ನು ಗೌರವಿಸುತ್ತಾರೆ. ಆದರೆ ನಂಬಿಕೆಗೆ ಯೋಗ್ಯನಲ್ಲದವನು ತೊಂದರೆಗೆ ಒಳಗಾಗುವನು. |
16
|
ಜ್ಞಾನಿಯು ವಿವೇಚಿಸಿ ಕಾರ್ಯಮಾಡುವನು; ಮೂಢನಾದರೋ ತನ್ನ ಕಾರ್ಯಗಳಿಂದಲೇ ತನ್ನ ಮೂಢತನವನ್ನು ತೋರಿಸಿಕೊಳ್ಳುತ್ತಾನೆ. |
17
|
ಅಪನಂಬಿಗಸ್ತನಾದ ರಾಯಭಾರಿಯ ಸುತ್ತಲೂ ಕೇಡುಗಳಿವೆ. ನಂಬಿಗಸ್ತನಾದ ರಾಯಭಾರಿಗೆ ಸಮಾಧಾನವಿರುವುದು. |
18
|
ಶಿಕ್ಷೆಯನ್ನು ಕಡೆಗಣಿಸುವವನು ಬಡವನಾಗುವನು; ಅವಮಾನ ಹೊಂದುವನು. ತಿದ್ದುಪಡಿಯನ್ನು ಸ್ವೀಕರಿಸಿಕೊಳ್ಳುವವನು ಗೌರವವನ್ನೂ ಐಶ್ವರ್ಯವನ್ನೂ ಪಡೆದುಕೊಳ್ಳುವನು. |
19
|
ಒಬ್ಬನು ತಾನು ಅಪೇಕ್ಷಿಸಿದ್ದನ್ನು ಪಡೆದುಕೊಂಡರೆ, ಅದರ ಮೇಲೆ ಅವನಿಗೆ ಬಹಳ ಇಷ್ಟವಿರುವುದು. ಮೂಢರು ಕೇಡಿಗೆ ವಿಮುಖರಾಗಲು ಅಸಹ್ಯಪಡುತ್ತಾರೆ. |
20
|
ಜ್ಞಾನಿಗಳೊಂದಿಗೆ ಸ್ನೇಹದಿಂದಿರಿ. ಆಗ ನೀವೂ ಜ್ಞಾನಿಗಳಾಗುವಿರಿ. ಆದರೆ ನೀವು ಜ್ಞಾನಹೀನರನ್ನು ನಿಮ್ಮ ಸ್ನೇಹಿತರನ್ನಾಗಿ ಆಯ್ದುಕೊಂಡರೆ, ನಿಮಗೆ ತೊಂದರೆ ಉಂಟಾಗುವುದು. |
21
|
ಪಾಪಿಗಳು ಹೋದಲ್ಲೆಲ್ಲಾ ಕೇಡು ಅವರನ್ನು ಹಿಂಬಾಲಿಸುವುದು. ಆದರೆ ಸಜ್ಜನರಿಗೆ ಒಳ್ಳೆಯವುಗಳೇ ಆಗುತ್ತವೆ. |
22
|
ಒಳ್ಳೆಯವನಲ್ಲಿ ತನ್ನ ಮಕ್ಕಳಿಗೂ ಮೊಮ್ಮಕ್ಕಳಿಗೂ ಕೊಡಲು ಐಶ್ವರ್ಯವಿರುವುದು. ಕಟ್ಟಕಡೆಯಲ್ಲಿ, ಕೆಡುಕರು ಹೊಂದಿರುವದೆಲ್ಲಾ ಒಳ್ಳೆಯವರ ಪಾಲಾಗುವುದು. |
23
|
ಬಡವನ ಭೂಮಿಯು ಯಥೇಚ್ಛವಾಗಿ ಫಲಿಸಬಹುದು. ಆದರೆ ಅನ್ಯಾಯವು ಅದನ್ನು ಕೊಚ್ಚಿಕೊಂಡು ಹೋಗುವುದು. |
24
|
ಮಕ್ಕಳು ತಪ್ಪು ಮಾಡಿದಾಗ ಶಿಕ್ಷಿಸದ ತಂದೆಯು ಅವರಿಗೆ ಶತ್ರುವಿನಂತಿದ್ದಾನೆ. ಮಕ್ಕಳು ತಪ್ಪು ಮಾಡಿದಾಗ ಶಿಕ್ಷಿಸುವ ತಂದೆಯು ಅವರಿಗೆ ಮಿತ್ರನಂತಿದ್ದಾನೆ. |
25
|
ಶಿಷ್ಟನು ತೃಪ್ತಿಯಾಗುವಷ್ಟು ತಿನ್ನುವನು. ಆದರೆ ದುಷ್ಟನು ಹಸಿವೆಯಿಂದಿರುವನು. |
Proverbs 13:1 Kannada Language Bible Words basic statistical display
COMING SOON ...