ಸೆರೆಮನೆಯಲ್ಲಿರುವ ಜನರನ್ನು ಮರೆಯದಿರಿ. ನೀವೂ ಅವರ ಜೊತೆಯಲ್ಲಿ ಸೆರೆಮನೆಯಲ್ಲಿದ್ದೀರೋ ಎಂಬಂತೆ ನೆನಪುಮಾಡಿಕೊಳ್ಳಿ ಮತ್ತು ಸಂಕಟಕ್ಕೊಳಗಾಗಿರುವ ಜನರನ್ನು ಮರೆಯದಿರಿ. ನೀವೂ ಅವರ ಜೊತೆಯಲ್ಲಿ ಸಂಕಟಪಡುತ್ತಿರುವಿರೋ ಎಂಬಂತೆ ನೆನಪು ಮಾಡಿಕೊಳ್ಳಿ.
ಮದುವೆಯನ್ನು ಜನರೆಲ್ಲರೂ ಗೌರವಿಸಬೇಕು. ಗಂಡ ಹೆಂಡತಿಯರ ಸಂಬಂಧ ಪರಿಶುದ್ಧವಾಗಿರಬೇಕು. ಲೈಂಗಿಕ ಪಾಪಗಳನ್ನು ಮಾಡುವವರು ಮತ್ತು ವ್ಯಭಿಚಾರವನ್ನು ಮಾಡುವವರು ದೇವರ ತೀರ್ಪಿಗೆ ಒಳಗಾಗಿದ್ದಾರೆ.
ಹಣದ ಮೇಲೆ ನಿಮಗಿರುವ ವ್ಯಾಮೋಹವನ್ನು ದೂರತಳ್ಳಿರಿ. ನಿಮ್ಮಲ್ಲಿರುವ ವಸ್ತುಗಳಲ್ಲಿ ತೃಪ್ತಿಯಿಂದಿರಿ. ದೇವರು ಹೀಗೆ ಹೇಳಿದ್ದಾನೆ: “ನಾನು ನಿಮ್ಮನ್ನು ಎಂದೆಂದಿಗೂ ಕೈಬಿಡುವುದಿಲ್ಲ. ನಾನು ನಿಮ್ಮನ್ನು ಎಂದೆಂದಿಗೂ ತೊರೆದುಬಿಡುವುದಿಲ್ಲ. ಧರ್ಮೋಪದೇಶ 31:6
ನಿಮ್ಮ ಸಭಾನಾಯಕರನ್ನು ನೆನಪು ಮಾಡಿಕೊಳ್ಳಿ. ಅವರು ನಿಮಗೆ ದೇವರ ಸಂದೇಶವನ್ನು ಬೋಧಿಸಿದರು. ಅವರು ಹೇಗೆ ಜೀವಿಸಿದ್ದರು ಮತ್ತು ಹೇಗೆ ಸತ್ತರು ಎಂಬುದನ್ನು ನೆನಪಿಸಿಕೊಳ್ಳಿ. ಅವರ ನಂಬಿಕೆಯನ್ನು ಅನುಸರಿಸಿರಿ.
ನಿಮ್ಮನ್ನು ತಪ್ಪು ಮಾರ್ಗಕ್ಕೆ ಎಳೆಯುವಂತಹ ಅನ್ಯೋಪದೇಶಗಳ ಕಡೆಗೆ ಗಮನಕೊಡಬೇಡಿ. ನಿಮ್ಮ ಹೃದಯಗಳು ದೇವರ ಕೃಪೆಯಿಂದ ಬಲವಾಗಬೇಕೇ ಹೊರತು ಆಹಾರದ ನಿಯಮಗಳ ಪಾಲನೆಯಿಂದಲ್ಲ. ಆ ನಿಯಮಗಳ ಪಾಲನೆಯು ಜನರಿಗೆ ಸಹಾಯಕವಾಗುವುದಿಲ್ಲ.
ಪ್ರಧಾನಯಾಜಕನು ಪಶುಗಳ ರಕ್ತವನ್ನು ಮಹಾ ಪವಿತ್ರಸ್ಥಳದೊಳಕ್ಕೆ ತೆಗೆದುಕೊಂಡು ಹೋಗುತ್ತಾನೆ. ಅವನು ಪಾಪಗಳಿಗಾಗಿ ಆ ರಕ್ತವನ್ನು ಅರ್ಪಿಸುತ್ತಾನೆ. ಆದರೆ ಆ ಪಶುಗಳ ದೇಹಗಳು ಪಾಳೆಯದ ಆಚೆ ಸುಡಲ್ಪಡುತ್ತವೆ.
ನಿಮ್ಮ ಸಭಾನಾಯಕರಿಗೆ ವಿಧೇಯರಾಗಿರಿ ಮತ್ತು ಅವರ ಅಧಿಕಾರದ ಅಧೀನದಲ್ಲಿರಿ. ಅವರೇ ನಿಮಗೆ ಜವಾಬ್ದಾರರು. ಅವರು ನಿಮ್ಮ ಆತ್ಮಗಳನ್ನು ಕಾಯುವವರಾಗಿದ್ದಾರೆ. ಅವರು ಈ ಕಾರ್ಯವನ್ನು ವ್ಯಸನದಿಂದ ಮಾಡದೆ ಸಂತೋಷದಿಂದ ಮಾಡಲು ಸಾಧ್ಯವಾಗುವಂತೆ ಅವರಿಗೆ ವಿಧೇಯರಾಗಿರಿ. ಅವರ ಕಾರ್ಯವನ್ನು ಕಷ್ಟಕರವನ್ನಾಗಿ ಮಾಡುವುದರಿಂದ ನಿಮಗೇನೂ ಪ್ರಯೋಜನವಿಲ್ಲ.
ನನ್ನ ಸಹೋದರ ಸಹೋದರಿಯರೇ, ನಾನು ಹೇಳಿದ ಈ ಸಂಗತಿಗಳನ್ನು ನೀವು ತಾಳ್ಮೆಯಿಂದ ಆಲಿಸಬೇಕೆಂದು ನಿಮ್ಮಲ್ಲಿ ಬೇಡಿಕೊಳ್ಳುತ್ತೇನೆ. ನಿಮ್ಮನ್ನು ಬಲಪಡಿಸುವುದಕ್ಕಾಗಿ ಈ ಸಂಗತಿಗಳನ್ನು ಹೇಳಿದೆನು. ಈ ಪತ್ರವು ಬಹುದೀರ್ಘವಾದದ್ದೇನೂ ಅಲ್ಲ.