1
|
ಪಸ್ಕ ಮತ್ತು ಹುಳಿಯಿಲ್ಲದ ರೊಟ್ಟಿಯ ಹಬ್ಬಕ್ಕೆ ಕೇವಲ ಎರಡು ದಿನಗಳಿದ್ದವು. ಮಹಾಯಾಜಕರು ಹಾಗೂ ಧರ್ಮೋಪದೇಶಕರು ಯಾವುದಾದರೊಂದು ಸುಳ್ಳು ಅಪವಾದವನ್ನು ಕಂಡುಹಿಡಿದು ಯೇಸುವನ್ನು ಬಂಧಿಸಿ ಆತನನ್ನು ಕೊಲ್ಲಬೇಕೆಂದಿದ್ದರು. |
2
|
“ಆದರೆ ಹಬ್ಬದ ಸಮಯದಲ್ಲಿ ನಾವು ಯೇಸುವನ್ನು ಬಂಧಿಸಲು ಸಾಧ್ಯವಿಲ್ಲ. ಜನರು ಕೋಪಗೊಂಡು, ಗಲಭೆ ಎಬ್ಬಿಸುವ ಸಾಧ್ಯತೆಯಿದೆ” ಎಂದು ಅವರು ಮಾತಾಡಿಕೊಂಡರು. |
3
|
ಬೆಥಾನಿಯದಲ್ಲಿ ಯೇಸು ಕುಷ್ಠರೋಗಿ ಸಿಮೋನನ ಮನೆಯಲ್ಲಿ ಊಟ ಮಾಡುತ್ತಿದ್ದಾಗ ಸ್ತ್ರೀಯೊಬ್ಬಳು ಆತನ ಬಳಿಗೆ ಬಂದಳು. ಆಕೆಯ ಬಳಿ ಅತ್ಯಂತ ಬೆಲೆಬಾಳುವ ಪರಿಮಳದ್ರವ್ಯದ ಭರಣಿ ಇತ್ತು. ಈ ಪರಿಮಳದ್ರವ್ಯವನ್ನು ಶುದ್ಧವಾದ ನಾರ್ಡ್ ತೈಲದಿಂದ ಮಾಡಲಾಗಿತ್ತು. ಆ ಸ್ತ್ರೀಯು ಭರಣಿಯನ್ನು ತೆರೆದು, ಆ ತೈಲವನ್ನು ಯೇಸುವಿನ ತಲೆಯ ಮೇಲೆ ಸುರಿದಳು. |
4
|
ಅಲ್ಲಿದ್ದ ಕೆಲವು ಶಿಷ್ಯರು ಇದನ್ನು ನೋಡಿ ಕೋಪಗೊಂಡು ಆಕ್ಷೇಪಿಸಿದರು. “ಆ ಪರಿಮಳ ತೈಲವನ್ನು ಹಾಳುಮಾಡಿದ್ದೇಕೆ? |
5
|
ಅದು ಒಂದು ವರ್ಷದ ಸಂಪಾದನೆಗಿಂತ ಹೆಚ್ಚು ಬೆಲೆ ಬಾಳುತ್ತಿತ್ತು. ಅದನ್ನು ಮಾರಿ ಬಂದ ಹಣವನ್ನು ಬಡಜನರಿಗೆ ಕೊಡಬಹುದಾಗಿತ್ತು” ಎಂದು ಹೇಳಿ ಆ ಸ್ತ್ರೀಯನ್ನು ಕಟುವಾಗಿ ಟೀಕಿಸಿದರು. |
6
|
ಯೇಸು, “ಆಕೆಗೆ ತೊಂದರೆ ಕೊಡಬೇಡಿ. ನೀವು ಆಕೆಯನ್ನು ಕಾಡಿಸುವುದೇಕೆ? ಅವಳು ನನಗಾಗಿ ಬಹಳ ಒಳ್ಳೆಯದನ್ನು ಮಾಡಿದಳು. |
7
|
ನಿಮ್ಮೊಡನೆ ಬಡಜನರು ಯಾವಾಗಲೂ ಇರುತ್ತಾರೆ. ನಿಮಗೆ ಇಷ್ಟ ಬಂದ ಸಮಯದಲ್ಲಿ ನೀವು ಅವರಿಗೆ ಸಹಾಯ ಮಾಡಬಹುದು. ಆದರೆ ನಾನು ನಿಮ್ಮೊಂದಿಗೆ ಯಾವಾಗಲೂ ಇರುವುದಿಲ್ಲ. |
8
|
ಈಕೆ ನನಗಾಗಿ ತನ್ನಿಂದ ಸಾಧ್ಯವಾದ ಒಂದು ಕಾರ್ಯವನ್ನು ಮಾಡಿದಳು. ನಾನು ಸಾಯುವುದಕ್ಕಿಂತ ಮುಂಚೆ ನನ್ನನ್ನು ಸಮಾಧಿಗೆ ಸಿದ್ಧಮಾಡಲು ಆಕೆ ನನ್ನ ದೇಹದ ಮೇಲೆ ಪರಿಮಳ ತೈಲ ಸುರಿದಳು. |
9
|
ನಾನು ಸತ್ಯವನ್ನು ಹೇಳುತ್ತೇನೆ. ಪ್ರಪಂಚದಲ್ಲಿ ಸುವಾರ್ತೆ ಸಾರಲ್ಪಡುವಲ್ಲೆಲ್ಲಾ ಈಕೆ ಮಾಡಿದ ಈ ಕಾರ್ಯವನ್ನು ತಿಳಿಸುವುದರಿಂದ ಜನರು ಈಕೆಯನ್ನು ನೆನಪುಮಾಡಿಕೊಳ್ಳುವರು” ಎಂದು ಹೇಳಿದನು. |
10
|
ನಂತರ ಹನ್ನೆರಡು ಮಂದಿ ಅಪೊಸ್ತಲರಲ್ಲಿ ಒಬ್ಬನಾದ ಇಸ್ಕರಿಯೋತ ಯೂದನು ಯೇಸುವನ್ನು ಹಿಡಿದುಕೊಡಬೇಕೆಂಬ ದುರುದ್ದೇಶದಿಂದ ಮಹಾಯಾಜಕರೊಡನೆ ಮಾತಾಡಲು ಹೋದನು. |
11
|
ಮಹಾಯಾಜಕರು ಇದರ ಬಗ್ಗೆ ಬಹಳ ಸಂತೋಷಗೊಂಡು, ಹಣಕೊಡುವುದಾಗಿ ಯೂದನಿಗೆ ಮಾತುಕೊಟ್ಟರು. ಆದ್ದರಿಂದ ಅವರಿಗೆ ಯೇಸುವನ್ನು ಹಿಡಿದುಕೊಡಲು ಅತ್ಯಂತ ಉತ್ತಮವಾದ ಸಮಯಕ್ಕಾಗಿ ಯೂದನು ಕಾಯತ್ತಿದ್ದನು. |
12
|
ಅಂದು ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿನವಾಗಿತ್ತು. ಯೆಹೂದಿಗಳು ಯಾವಾಗಲೂ ಪಸ್ಕಹಬ್ಬದ ಕುರಿಮರಿಗಳನ್ನು ಯಜ್ಞಮಾಡುವ ಸಮಯ ಇದಾಗಿತ್ತು. ಯೇಸುವಿನ ಶಿಷ್ಯರು ಆತನ ಬಳಿಗೆ ಬಂದು, “ನಾವು ಪಸ್ಕಹಬ್ಬದ ಊಟವನ್ನು ನಿನಗಾಗಿ ಎಲ್ಲಿ ಸಿದ್ಧಪಡಿಸೋಣ?” ಎಂದು ಕೇಳಿದರು. |
13
|
ಯೇಸು ತನ್ನ ಶಿಷ್ಯರಲ್ಲಿ ಇಬ್ಬರನ್ನು ಕರೆದು, “ನೀವು ಪಟ್ಟಣದೊಳಕ್ಕೆ ಹೋದಾಗ, ಒಬ್ಬ ಮನುಷ್ಯನು ನೀರಿನ ಕೊಡವನ್ನು ಹೊತ್ತುಕೊಂಡು ನಿಮ್ಮ ಎದುರಿಗೆ ಬರುವನು. ಅವನನ್ನೇ ಹಿಂಬಾಲಿಸಿರಿ. |
14
|
ಅವನು ಒಂದು ಮನೆಯೊಳಗೆ ನಡೆದು ಹೋಗುತ್ತಾನೆ. ನೀವು ಆ ಮನೆಯ ಯಜಮಾನನಿಗೆ, ‘ನಮ್ಮ ಗುರುವು ತನ್ನ ಶಿಷ್ಯರ ಸಂಗಡ ಪಸ್ಕ ಹಬ್ಬದ ಊಟ ಮಾಡಲು ಒಂದು ಕೋಣೆಯನ್ನು ತೋರಿಸಬೇಕೆಂದು ಕೇಳುತ್ತಾನೆ’ ಎಂದು ಹೇಳಿ. |
15
|
ಆ ಯಜಮಾನನು ಮೇಲಂತಸ್ತಿನಲ್ಲಿ ಸಿದ್ಧವಾಗಿರುವ ಒಂದು ದೊಡ್ಡ ಕೋಣೆಯನ್ನು ತೋರಿಸುತ್ತಾನೆ. ಅಲ್ಲಿ ನಮಗಾಗಿ ಊಟವನ್ನು ಸಿದ್ಧಪಡಿಸಿರಿ” ಎಂದನು. |
16
|
ಆದ್ದರಿಂದ ಶಿಷ್ಯರು ಅಲ್ಲಿಂದ ಹೊರಟು, ಪಟ್ಟಣದೊಳಗೆ ಹೋದರು. ಯೇಸು ಹೇಳಿದ ರೀತಿಯಲ್ಲಿಯೇ ಪ್ರತಿಯೊಂದೂ ನಡೆಯಿತು. ಶಿಷ್ಯರು ಪಸ್ಕಹಬ್ಬದ ಊಟವನ್ನು ಸಿದ್ಧಪಡಿಸಿದರು. |
17
|
ಸಾಯಂಕಾಲದಲ್ಲಿ ಯೇಸು ಹನ್ನೆರಡು ಜನ ಅಪೊಸ್ತಲರೊಂದಿಗೆ ಆ ಮನೆಗೆ ಹೋದನು. |
18
|
ಅವರೆಲ್ಲರೂ ಊಟ ಮಾಡುತ್ತಿರುವಾಗ, ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನಿಮ್ಮಲ್ಲಿ ಒಬ್ಬನು ನನಗೆ ದ್ರೋಹ ಬಗೆಯುತ್ತಾನೆ. ಈಗ ಅವನು ನನ್ನೊಂದಿಗೆ ಊಟಮಾಡುತ್ತಿದ್ದಾನೆ” ಎಂದನು. |
19
|
ಇದನ್ನು ಕೇಳಿದಾಗ ಶಿಷ್ಯರಿಗೆ ಬಹಳ ದುಃಖವಾಯಿತು. ಪ್ರತಿಯೊಬ್ಬ ಶಿಷ್ಯನೂ ಯೇಸುವಿಗೆ, “ಖಂಡಿತವಾಗಿ ನಾನು ನಿನಗೆ ದ್ರೋಹಮಾಡುವುದಿಲ್ಲ” ಎಂದನು. |
20
|
ಯೇಸು, “ಈ ಹನ್ನೆರಡು ಜನರಲ್ಲಿ ಒಬ್ಬನು ನನಗೆ ದ್ರೋಹ ಬಗೆಯುತ್ತಾನೆ. ಅವನು ನನ್ನೊಡನೆ ಒಂದೇ ಬಟ್ಟಲಿನಲ್ಲಿ ತನ್ನ ರೊಟ್ಟಿಯನ್ನು ಅದ್ದುತ್ತಿದ್ದಾನೆ. |
21
|
ಮನುಷ್ಯಕುಮಾರನು ಹಿಂಸಿಸಲ್ಪಟ್ಟನು. ಪವಿತ್ರ ಗ್ರಂಥದಲ್ಲಿಯೂ ಅದನ್ನು ಬರೆಯಲಾಗಿದೆ. ಆದರೆ ಮನುಷ್ಯಕುಮಾರನನ್ನು ಕೊಲ್ಲಲು ಹಿಡಿದುಕೊಡುವ ವ್ಯಕ್ತಿಯ ಸ್ಥಿತಿ ಬಹಳ ಭೀಕರವಾಗಿರುತ್ತದೆ. ಅವನು ಹುಟ್ಟದೇ ಇದ್ದಿದ್ದರೆ ಅವನಿಗೆ ಒಳ್ಳೆಯದಾಗುತ್ತಿತ್ತು” ಎಂದನು. |
22
|
ಅವರು ಊಟಮಾಡುತ್ತಿರುವಾಗ, ಯೇಸು ರೊಟ್ಟಿಯನ್ನು ತೆಗೆದುಕೊಂಡು, ಅದಕ್ಕಾಗಿ ದೇವರಿಗೆ ಸ್ತೋತ್ರ ಸಲ್ಲಿಸಿ ಅದನ್ನು ಮುರಿದು, ತನ್ನ ಶಿಷ್ಯರಿಗೆ ಕೊಟ್ಟನು. ಯೇಸು ಅವರಿಗೆ, “ಈ ರೊಟ್ಟಿಯನ್ನು ತೆಗೆದುಕೊಂಡು ತಿನ್ನಿರಿ. ಈ ರೊಟ್ಟಿಯು ನನ್ನ ದೇಹ” ಎಂದನು. |
23
|
ನಂತರ ಯೇಸು ದ್ರಾಕ್ಷಾರಸದ ಪಾತ್ರೆಯನ್ನು ತೆಗೆದುಕೊಂಡು, ಅದಕ್ಕಾಗಿ ದೇವರಿಗೆ ಸ್ತೋತ್ರ ಸಲ್ಲಿಸಿ ಅದನ್ನು ತನ್ನ ಶಿಷ್ಯರಿಗೆ ಕೊಟ್ಟನು. ಶಿಷ್ಯರೆಲ್ಲರೂ ಅದರಲ್ಲಿ ಕುಡಿದರು. |
24
|
ಯೇಸು, “ಇದು ನನ್ನ ರಕ್ತ. ಒಡಂಬಡಿಕೆಯ ರಕ್ತ. ಇದು ಬಹು ಜನರಿಗೋಸ್ಕರ ಸುರಿಸಲ್ಪಡುವ ರಕ್ತ. |
25
|
ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನಾನು ದೇವರ ರಾಜ್ಯದಲ್ಲಿ ದ್ರಾಕ್ಷಾರಸವನ್ನು ಹೊಸದಾಗಿ ಕುಡಿಯುವ ದಿನದವರೆಗೆ ಇದನ್ನು ಕುಡಿಯುವುದೇ ಇಲ್ಲ” ಎಂದನು. |
26
|
ಆಗ ಶಿಷ್ಯರೆಲ್ಲರೂ ಒಂದು ಹಾಡನ್ನು ಹಾಡಿದರು. ನಂತರ ಅವರು ಆಲಿವ್ ಮರದ ಗುಡ್ಡಕ್ಕೆ ಹೋದರು. |
27
|
ನಂತರ ಯೇಸು ಶಿಷ್ಯರಿಗೆ, “ನೀವೆಲ್ಲರೂ ಭಯಗೊಂಡು ಹಿಂಜರಿಯುವಿರಿ. ‘ನಾನು ಕುರುಬನನ್ನು ಹೊಡೆಯುವೆನು; ಆಗ ಕುರಿಗಳು ಚದರಿಹೋಗುತ್ತವೆ’ ಎಂದು ಪವಿತ್ರಗ್ರಂಥದಲ್ಲಿ ಬರೆದಿದೆ. (ಜೆಕರ್ಯ 13:7) |
28
|
ಆದರೆ ನಾನು ಸತ್ತು ಪುನರುತ್ಥಾನ ಹೊಂದಿದ ಮೇಲೆ ನಿಮಗಿಂತ ಮುಂಚಿತವಾಗಿ ಗಲಿಲಾಯಕ್ಕೆ ಹೋಗುತ್ತೇನೆ” ಎಂದನು. |
29
|
ಪೇತ್ರನು, “ಉಳಿದ ಶಿಷ್ಯರೆಲ್ಲರು ಭಯಗೊಂಡು ಹಿಂಜರಿದರೂ ನಾನು ಹಿಂಜರಿಯುವುದಿಲ್ಲ” ಎಂದು ಉತ್ತರಿಸಿದನು. |
30
|
ಯೇಸು, “ನಾನು ಸತ್ಯವನ್ನು ಹೇಳುತ್ತೇನೆ. ಈ ರಾತ್ರಿ ಕೋಳಿ ಎರಡು ಸಾರಿ ಕೂಗುವುದಕ್ಕಿಂತ ಮುಂಚೆ ನೀನು ಮೂರು ಸಾರಿ, ನನ್ನನ್ನು ನೀನು ತಿಳಿದೇ ಇಲ್ಲವೆಂದು ಹೇಳುವೆ” ಎಂದು ಉತ್ತರಿಸಿದನು. |
31
|
ಆದರೆ ಪೇತ್ರನು ಖಚಿತವಾಗಿ, “ನಾನು ನಿನ್ನೊಂದಿಗೆ ಸಾಯಬೇಕಾದರೂ ಸರಿಯೇ, ನಿನ್ನನ್ನು ತಿಳಿದೇ ಇಲ್ಲವೆಂದು ನಾನೆಂದಿಗೂ ಹೇಳುವುದಿಲ್ಲ” ಎಂದು ಉತ್ತರಿಸಿದನು. ಉಳಿದ ಶಿಷ್ಯರು ಸಹ ಇದೇ ರೀತಿ ಹೇಳಿದರು. |
32
|
ಯೇಸು ಮತ್ತು ಆತನ ಶಿಷ್ಯರು ಗೆತ್ಸೆಮನೆ ಎಂಬ ಸ್ಥಳಕ್ಕೆ ಹೋದರು. ಯೇಸು ತನ್ನ ಶಿಷ್ಯರಿಗೆ, “ನಾನು ಪ್ರಾರ್ಥಿಸಿ ಬರುವ ತನಕ ಕುಳಿತಿರಿ” ಎಂದು ಹೇಳಿ |
33
|
ಪೇತ್ರನನ್ನು, ಯಾಕೋಬನನ್ನು ಮತ್ತು ಯೋಹಾನನನ್ನು ತನ್ನ ಜೊತೆ ಕರೆದುಕೊಂಡು ಹೋದನು. ನಂತರ ಯೇಸು ಬಹಳ ಗಲಿಬಿಲಿಗೊಂಡು, ದುಃಖದಿಂದ ತುಂಬಿದವನಾದನು. |
34
|
ಯೇಸು ಅವರಿಗೆ, “ನನ್ನ ಪ್ರಾಣವು ಸಾಯುವಷ್ಟು ದುಃಖದಿಂದ ತುಂಬಿಹೋಗಿದೆ. ಎಚ್ಚರವಾಗಿದ್ದು ಇಲ್ಲಿಯೇ ಕಾದುಕೊಂಡಿರಿ” ಎಂದನು. |
35
|
ಯೇಸು ಅವರಿಂದ ಸ್ವಲ್ಪದೂರ ನಡೆದುಹೋಗಿ ನೆಲದ ಮೇಲೆ ಬೋರಲಬಿದ್ದು, ಪ್ರಾರ್ಥಿಸುತ್ತಾ “ಸಾಧ್ಯವಾದರೆ, ಈ ಸಂಕಟದ ಗಳಿಗೆ ನನಗೆ ಬಾರದಿರಲಿ” ಎಂದು ಬೇಡಿಕೊಂಡನು. |
36
|
ಬಳಿಕ ಯೇಸು, “ಅಪ್ಪಾ ತಂದೆಯೇ! ನಿನಗೆ ಎಲ್ಲವೂ ಸಾಧ್ಯ. ಈ ಸಂಕಟದ ಪಾತ್ರೆಯನ್ನು ನನ್ನಿಂದ ತೊಲಗಿಸು. ಆದರೆ ನನ್ನ ಚಿತ್ತದಂತೆ ಮಾಡದೆ, ನಿನ್ನ ಚಿತ್ತದಂತೆಯೇ ಮಾಡು” ಎಂದು ಪ್ರಾರ್ಥಿಸಿದನು. |
37
|
ನಂತರ ಯೇಸು ತನ್ನ ಶಿಷ್ಯರ ಬಳಿಗೆ ಹಿಂತಿರುಗಿದಾಗ ಅವರು ನಿದ್ರಿಸುತ್ತಿರುವುದನ್ನು ಕಂಡು, ಪೇತ್ರನಿಗೆ, “ಸೀಮೋನನೇ, ಏಕೆ ನಿದ್ರೆ ಮಾಡುತ್ತಿರುವೆ? ನೀನು ನನ್ನೊಡನೆ ಒಂದು ಗಂಟೆ ಕಾಲ ಎಚ್ಚರವಾಗಿರಲು ಸಾಧ್ಯವಾಗಲಿಲ್ಲವೇ? |
38
|
ನೀನು ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸು. ಮನಸ್ಸೇನೊ ಸಿದ್ಧವಾಗಿದೆ, ಆದರೆ ದೇಹಕ್ಕೆ ಬಲ ಸಾಲದು” ಎಂದನು. |
39
|
ಪುನಃ ಯೇಸು ದೂರ ಹೋಗಿ, ಮೊದಲಿನಂತೆಯೇ ಪ್ರಾರ್ಥಿಸಿದನು. |
40
|
ನಂತರ ಯೇಸು ತನ್ನ ಶಿಷ್ಯರ ಬಳಿಗೆ ಹಿಂತಿರುಗಿ ಬಂದಾಗ ಅವರು ನಿದ್ರಿಸುತ್ತಿರುವುದನ್ನು ಕಂಡನು. ಅವರ ಕಣ್ಣುಗಳು ಬಹಳ ಆಯಾಸಗೊಂಡಿದ್ದವು. ಯೇಸುವಿಗೆ ಏನು ಹೇಳಬೇಕೆಂದು ಆ ಶಿಷ್ಯರಿಗೆ ತಿಳಿಯಲಿಲ್ಲ. |
41
|
ಯೇಸು ಮೂರನೆಯ ಸಾರಿ ಪ್ರಾರ್ಥಿಸಿದ ಮೇಲೆ, ತನ್ನ ಶಿಷ್ಯರ ಬಳಿಗೆ ಹಿಂತಿರುಗಿ, “ನೀವು ಇನ್ನೂ ನಿದ್ರಿಸುತ್ತಾ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೀರಾ? ಪಾಪಿಗಳ ಕೈಗೆ ಮನುಷ್ಯಕುಮಾರನನ್ನು ಒಪ್ಪಿಸುವ ಸಮಯ ಬಂದಿದೆ. |
42
|
ಮೇಲೇಳಿ! ನಾವು ಹೋಗಬೇಕು. ನನ್ನನ್ನು ಆ ಜನರಿಗೆ ಹಿಡಿದುಕೊಡುವವನು ಇಲ್ಲಿಗೆ ಬರುತ್ತಿದ್ದಾನೆ” ಎಂದನು. |
43
|
ಯೇಸು ಇನ್ನೂ ಮಾತಾಡುತ್ತಿರುವಾಗ, ಯೂದನು ಅಲ್ಲಿಗೆ ಬಂದನು. ಹನ್ನೆರಡು ಜನ ಅಪೊಸ್ತಲರಲ್ಲಿ ಯೂದನು ಒಬ್ಬನಾಗಿದ್ದನು. ಯೂದನೊಡನೆ ಕತ್ತಿ ಮತ್ತು ದೊಣ್ಣೆಗಳಿಂದ ಸುಸಜ್ಜಿತರಾಗಿದ್ದ ಅನೇಕ ಜನರಿದ್ದರು. ಮಹಾಯಾಜಕರು, ಧರ್ಮೋಪದೇಶಕರು ಮತ್ತು ಹಿರಿಯ ಯೆಹೂದ್ಯ ನಾಯಕರುಗಳು ಈ ಜನರನ್ನು ಕಳುಹಿಸಿದ್ದರು. |
44
|
ಯೇಸು ಯಾರೆಂಬುದನ್ನು ಜನರಿಗೆ ತೋರಿಸಲು ಯೂದನು ಒಂದು ಉಪಾಯ ಮಾಡಿದನು. ಯೂದನು ಅವರಿಗೆ, “ನಾನು ಯಾರಿಗೆ ಮುದ್ದಿಡುತ್ತೇನೋ ಅವನೇ ಯೇಸು. ಅವನನ್ನು ಸೆರೆಹಿಡಿದು ಎಚ್ಚರಿಕೆಯಿಂದ ಕಾಯುತ್ತಾ ಕರೆದುಕೊಂಡು ಹೋಗಿರಿ!” ಎಂದು ಹೇಳಿಕೊಟ್ಟಿದ್ದನು. |
45
|
ಆದ್ದರಿಂದ ಯೂದನು ಯೇಸುವಿನ ಬಳಿಗೆ ಹೋಗಿ, “ಗುರುವೇ!” ಎಂದು ಹೇಳಿ ಯೇಸುವಿಗೆ ಮುದ್ದಿಟ್ಟನು. |
46
|
ಆಗ ಆ ಜನರು ಯೇಸುವನ್ನು ಬಂಧಿಸಿದರು. |
47
|
ಯೇಸುವಿನ ಹತ್ತಿರ ನಿಂತಿದ್ದ ಶಿಷ್ಯರಲ್ಲಿ ಒಬ್ಬನು ತನ್ನ ಕತ್ತಿಯನ್ನು ಹೊರಗೆಳೆದು ಪ್ರಧಾನಯಾಜಕನ ಸೇವಕನಿಗೆ ಹೊಡೆದು, ಅವನ ಕಿವಿಯನ್ನು ಕತ್ತರಿಸಿ ಹಾಕಿದನು. |
48
|
ಆಗ ಯೇಸು, “ಒಬ್ಬ ಅಪರಾಧಿಯನ್ನು ಬಂಧಿಸುವಂತೆ ನೀವು ಕತ್ತಿಗಳನ್ನು ಮತ್ತು ದೊಣ್ಣೆಗಳನ್ನು ತೆಗೆದುಕೊಂಡು ಬರಬೇಕಿತ್ತೇ? |
49
|
ಪ್ರತಿದಿನ ದೇವಾಲಯದಲ್ಲಿ ನಾನು ಉಪದೇಶಿಸುತ್ತಾ ನಿಮ್ಮೊಡನೆ ಇದ್ದೆನು. ಅಲ್ಲಿ ನೀವು ನನ್ನನ್ನು ಬಂಧಿಸಲಿಲ್ಲ. ಆದರೆ ಈ ಎಲ್ಲಾ ಸಂಗತಿಗಳು ಪವಿತ್ರಗ್ರಂಥದಲ್ಲಿ ಬರೆದಿರುವಂತೆ ನಡೆದಿವೆ” ಎಂದನು. |
50
|
ಆಗ ಯೇಸುವಿನ ಶಿಷ್ಯರೆಲ್ಲರೂ ಆತನನ್ನು ಬಿಟ್ಟು ಓಡಿಹೋದರು. |
51
|
ಯೇಸುವಿನ ಶಿಷ್ಯನಾಗಿದ್ದ ಒಬ್ಬ ಯುವಕನು ಅಲ್ಲಿದ್ದನು. ಅವನು ನಾರುಬಟ್ಟೆಯನ್ನು ಧರಿಸಿದ್ದನು. ಜನರು ಅವನನ್ನು ಸಹ ಹಿಡಿದುಕೊಂಡರು. |
52
|
ಅವನು ತಾನು ಧರಿಸಿಕೊಂಡಿದ್ದ ನಾರುಬಟ್ಟೆಯನ್ನು ಅಲ್ಲಿಯೇ ಬಿಟ್ಟು ಬರೀಮೈಯಲ್ಲಿ ಓಡಿಹೋದನು. |
53
|
ಯೇಸುವನ್ನು ಬಂಧಿಸಿದ್ದ ಜನರು ಪ್ರಧಾನಯಾಜಕನ ಮನೆಗೆ ಆತನನ್ನು ಕರೆದುಕೊಂಡು ಹೋದರು. ಎಲ್ಲಾ ಮಹಾಯಾಜಕರುಗಳು, ಹಿರಿಯ ಯೆಹೂದ್ಯನಾಯಕರುಗಳು, ಹಾಗೂ ಧರ್ಮೋಪದೇಶಕರು ಅಲ್ಲಿ ಸೇರಿದ್ದರು. |
54
|
ಪೇತ್ರನು ಯೇಸುವನ್ನು ದೂರದಲ್ಲಿ ಹಿಂಬಾಲಿಸುತ್ತಾ ಪ್ರಧಾನಯಾಜಕನ ಮನೆಯ ಅಂಗಳದೊಳಕ್ಕೆ ಹೋಗಿ, ಕಾವಲುಗಾರರೊಡನೆ ಕುಳಿತುಕೊಂಡು ಬೆಂಕಿಯಿಂದ ಚಳಿಕಾಯಿಸಿಕೊಳ್ಳತೊಡಗಿದನು. |
55
|
ಮಹಾಯಾಜಕರು ಹಾಗೂ ಹಿರಿಯ ಸಭೆಯವರೆಲ್ಲರು ಆತನನ್ನು ಕೊಲ್ಲಲು ಬೇಕಾದ ಒಂದು ತಪ್ಪನ್ನು ಆತನಲ್ಲಿ ಕಂಡುಹಿಡಿಯುವುದಕ್ಕೆ ಪ್ರಯತ್ನಿಸಿದರು. ಆದರೆ ಯೇಸುವನ್ನು ಕೊಲ್ಲಲು ಸರಿಯಾದ ಯಾವುದೇ ಆಧಾರವನ್ನು ಕಂಡುಹಿಡಿಯಲು ಸಮಿತಿಗೆ ಸಾಧ್ಯವಾಗಲಿಲ್ಲ. |
56
|
ಅನೇಕ ಜನರು ಬಂದು, ಯೇಸುವಿನ ವಿರುದ್ಧ ಸುಳ್ಳು ಸಂಗತಿಗಳನ್ನು ಹೇಳಿದರು. ಆದರೆ ಅವರೆಲ್ಲರು ಒಂದಕ್ಕೊಂದು ಹೊಂದಾಣಿಕೆಯಾಗದಂತಹ ಬೇರೆಬೇರೆ ಸಂಗತಿಗಳನ್ನು ಹೇಳಿದರು. |
57
|
ನಂತರ ಕೆಲವು ಜನರು ನಿಂತುಕೊಂಡು, ಯೇಸುವಿನ ವಿರುದ್ಧ ಕೆಲವು ಅಪವಾದಗಳನ್ನು ಹೊರಿಸುತ್ತಾ, |
58
|
“ಈ ಮನುಷ್ಯನು, ‘ಕೈಯಿಂದ ಕಟ್ಟಿದ ಈ ದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಕೈಯಿಂದ ಕಟ್ಟಿಲ್ಲದ ಇನ್ನೊಂದು ದೇವಾಲಯವನ್ನು ಕಟ್ಟುತ್ತೇನೆ’ ಎಂದು ಹೇಳಿದ್ದನ್ನು ನಾವು ಕೇಳಿದೆವು” ಎಂದರು. |
59
|
ಆದರೂ ಜನರು ಹೇಳಿದ ಈ ಸಂಗತಿಗಳು ಹೊಂದಿಕೆಯಾಗಲಿಲ್ಲ. |
60
|
ಆಗ ಪ್ರಧಾನಯಾಜಕನು ಎಲ್ಲಾ ಜನರೆದುರಿಗೆ ಎದ್ದುನಿಂತು, ಯೇಸುವಿಗೆ, “ಈ ಜನರು ನಿನಗೆ ವಿರುದ್ಧವಾಗಿ ಹೊರಿಸುತ್ತಿರುವ ಈ ಆರೋಪಗಳ ಬಗ್ಗೆ ನೀನು ಏನಾದರೂ ಹೇಳಬೇಕೆಂದಿರುವೆಯೋ? ಜನರು ಹೇಳುತ್ತಿರುವುದು ನಿಜವೇ?” ಎಂದು ಕೇಳಿದನು. |
61
|
ಆದರೆ ಯೇಸು ಮೌನವಾಗಿದ್ದನು. ಯಾವ ಉತ್ತರವನ್ನೂ ಕೊಡಲಿಲ್ಲ. ಪ್ರಧಾನಯಾಜಕನು ಯೇಸುವಿಗೆ, “ಮಹಾದೇವರ ಮಗನಾದ ಕ್ರಿಸ್ತನು ನೀನೋ?” ಎಂಬ ಇನ್ನೊಂದು ಪ್ರಶ್ನೆಯನ್ನು ಕೇಳಿದನು. |
62
|
ಯೇಸು, “ಹೌದು, ನಾನೇ ದೇವರ ಮಗನು. ಮನುಷ್ಯಕುಮಾರನು ದೇವರ ಬಲಗಡೆಯಲ್ಲಿ ಕುಳಿತಿರುವುದನ್ನೂ ಆಕಾಶದ ಮೇಘಗಳ ಮೇಲೆ ಬರುವುದನ್ನೂ ನೀನು ಕಾಣುವೆ” ಎಂದು ಉತ್ತರಿಸಿದನು. |
63
|
ಪ್ರಧಾನಯಾಜಕನು ಬಹಳ ಕೋಪದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡು, “ನಮಗೆ ಇನ್ನೂ ಹೆಚ್ಚಿನ ಸಾಕ್ಷಿಗಳ ಅವಶ್ಯಕತೆಯಿಲ್ಲ. |
64
|
ಇವನು ದೇವರ ವಿರುದ್ಧವಾಗಿ ಹೇಳಿದ ಮಾತನ್ನು ನೀವೆಲ್ಲರೂ ಕೇಳಿದ್ದೀರಿ. ನಿಮ್ಮ ಅಭಿಪ್ರಾಯವೇನು?” ಎಂದು ಕೇಳಿದನು. ಯೇಸು ಅಪರಾಧಿಯೆಂತಲೂ ಆತನಿಗೆ ಮರಣದಂಡನೆ ಆಗಬೇಕೆಂತಲೂ ಜನರೆಲ್ಲರು ಹೇಳಿದರು. |
65
|
ಅಲ್ಲಿದ್ದ ಕೆಲವು ಜನರು ಯೇಸುವಿಗೆ ಉಗುಳಿ, ಆತನ ಮುಖವನ್ನು ಮುಚ್ಚಿ, ಮುಷ್ಠಿಯಿಂದ ಗುದ್ದಿ, “ನಮಗೆ ಪ್ರವಾದನೆ ಹೇಳು” ಎಂದರು. ನಂತರ ಕಾವಲುಗಾರರು ಯೇಸುವನ್ನು ದೂರ ಕರೆದುಕೊಂಡು ಹೋಗಿ, ಆತನನ್ನು ಹೊಡೆದರು. |
66
|
ಆ ಸಮಯದಲ್ಲಿ ಪೇತ್ರನು ಇನ್ನೂ ಅಂಗಳದಲ್ಲಿದ್ದನು. ಪ್ರಧಾನಯಾಜಕನ ದಾಸಿಯಾಗಿದ್ದ ಹುಡುಗಿಯೊಬ್ಬಳು ಪೇತ್ರನ ಬಳಿಗೆ ಬಂದಳು. |
67
|
ಪೇತ್ರನು ಬೆಂಕಿಯ ಹತ್ತಿರ ಚಳಿ ಕಾಯಿಸಿಕೊಳ್ಳುತ್ತಿರುವುದನ್ನು ಅವಳು ಕಂಡು, ಪೇತ್ರನನ್ನು ಹತ್ತಿರದಿಂದ ದಿಟ್ಟಿಸಿ ನೋಡಿ, “ನೀನು ನಜರೇತಿನವನಾದ ಯೇಸುವಿನ ಜೊತೆ ಇದ್ದವನಲ್ಲವೇ?” ಎಂದಳು. |
68
|
ಆದರೆ ಪೇತ್ರನು ಆಕೆಯ ಮಾತನ್ನು ನಿರಾಕರಿಸಿ, “ನೀನು ಏನು ಹೇಳುತ್ತಿರುವೆಯೋ ನನಗೆ ತಿಳಿಯದು” ಎಂದು ಹೇಳಿ ಎದ್ದು, ಅಂಗಳದ ಪ್ರವೇಶದ್ವಾರದ ಬಳಿಗೆ ಹೋದನು. |
69
|
ಪೇತ್ರನು ಅಲ್ಲಿರುವುದನ್ನು ಆ ದಾಸಿಯು ನೋಡಿ, ಅಲ್ಲಿ ನಿಂತಿದ್ದ ಜನರಿಗೆ, “ಈ ಮನುಷ್ಯನು ಯೇಸುವನ್ನು ಹಿಂಬಾಲಿಸಿದ ಜನರಲ್ಲಿ ಒಬ್ಬನು” ಎಂದು ಹೇಳಿದಳು. |
70
|
ಪುನಃ ಪೇತ್ರನು ಆಕೆಯ ಮಾತನ್ನು ನಿರಾಕರಿಸಿದನು. ಸ್ವಲ್ಪ ಸಮಯದ ನಂತರ, ಪೇತ್ರನ ಬಳಿ ನಿಂತಿದ್ದ ಕೆಲವು ಜನರು ಅವನಿಗೆ, “ಯೇಸುವನ್ನು ಹಿಂಬಾಲಿಸಿದ ಜನರಲ್ಲಿ ನೀನೂ ಒಬ್ಬನು ಎಂಬುದು ನಮಗೆ ತಿಳಿದಿದೆ. ನೀನು ಯೇಸುವಿನಂತೆ ಗಲಿಲಾಯದವನು” ಎಂದರು. |
71
|
ಆಗ ಪೇತ್ರನು ತನಗೆ ಶಾಪ ಹಾಕಿಕೊಳ್ಳುತ್ತಾ “ದೇವರ ಮೇಲೆ ಆಣೆಯಿಟ್ಟು ಹೇಳುತ್ತೇನೆ, ನೀವು ಹೇಳುತ್ತಿರುವ ಈ ಮನುಷ್ಯನನ್ನು ನಾನು ತಿಳಿದಿಲ್ಲ!” ಎಂದು ಬಲವಾಗಿ ಹೇಳಿದನು. |
72
|
ಪೇತ್ರನು ಇದನ್ನು ಹೇಳಿದ ಮೇಲೆ ಕೋಳಿ ಎರಡನೇ ಸಾರಿ ಕೂಗಿತು. “ಕೋಳಿ ಎರಡು ಸಾರಿ ಕೂಗುವುದಕ್ಕಿಂತ ಮುಂಚೆ, ನೀನು ನನ್ನನ್ನು ತಿಳಿದಿಲ್ಲವೆಂದು ಮೂರು ಸಾರಿ ಹೇಳುವೆ” ಎಂದು ಯೇಸು ತನಗೆ ಹೇಳಿದ್ದನ್ನು ಪೇತ್ರನು ಜ್ಞಾಪಿಸಿಕೊಂಡು ಬಹಳ ದುಃಖದಿಂದ ಗೋಳಾಡಿದನು. |
Mark 14:19 Kannada Language Bible Words basic statistical display
COMING SOON ...