1
|
ದೇವರನ್ನು ಆರಾಧಿಸಲು ಹೋಗುವಾಗ ಎಚ್ಚರಿಕೆಯಿಂದಿರಿ. ಮೂಢರಂತೆ ಯಜ್ಞಗಳನ್ನು ಅರ್ಪಿಸುವುದಕ್ಕಿಂತ ದೇವರಿಗೆ ಕಿವಿಗೊಡುವುದೇ ಉತ್ತಮ. ಮೂಢರು ದುಷ್ಕೃತ್ಯಗಳನ್ನು ಮಾಡುತ್ತಲೇ ಇರುವರು; ಆದರೆ ಅವರಿಗೆ ಅದು ಗೊತ್ತೇ ಇಲ್ಲ. |
2
|
ದೇವರಿಗೆ ಹರಕೆ ಮಾಡುವಾಗ ಎಚ್ಚರಿಕೆಯಿಂದಿರಿ. ನೀವು ದೇವರೊಂದಿಗೆ ಮಾತಾಡುವಾಗ ಎಚ್ಚರಿಕೆಯಿಂದಿರಿ. ನಿಮ್ಮ ಮನೋದ್ವೇಗಗಳು ನಿಮ್ಮನ್ನು ಮಾತಿನಲ್ಲಿ ದುಡುಕಿಸದಂತೆ ನೋಡಿಕೊಳ್ಳಿ. ದೇವರು ಪರಲೋಕದಲ್ಲಿರುವುದರಿಂದ ಮತ್ತು ನೀವು ಈ ಲೋಕದಲ್ಲಿರುವುದರಿಂದ ನಿಮ್ಮ ಮಾತುಗಳು ಮಿತವಾಗಿರಲಿ. ಈ ನುಡಿ ಸತ್ಯವಾದದ್ದೇ: |
3
|
“ಅನೇಕ ಚಿಂತೆಗಳಿಂದ ದುಸ್ವಪ್ನಗಳಾಗುವಂತೆ ಮೂಢನು ಅನೇಕ ಮಾತುಗಳನ್ನಾಡುವನು.” |
4
|
ನೀವು ಹರಕೆ ಮಾಡಿಕೊಂಡರೆ ತಡಮಾಡದೆ ಅದನ್ನು ನೆರವೇರಿಸಿ. ಮೂಢರ ವಿಷಯದಲ್ಲಿ ದೇವರಿಗೆ ಸಂತೋಷವಿಲ್ಲ. ನೀವು ದೇವರಿಗೆ ಹರಕೆ ಮಾಡಿಕೊಂಡದ್ದನ್ನು ಸಲ್ಲಿಸಿರಿ. |
5
|
ಹರಕೆ ಮಾಡಿ ಸಲ್ಲಿಸದಿರುವುದಕ್ಕಿಂತ ಹರಕೆ ಮಾಡದಿರುವುದೇ ಉತ್ತಮ. |
6
|
ಆದ್ದರಿಂದ ನಿಮ್ಮ ಮಾತುಗಳು ನಿಮ್ಮನ್ನು ಪಾಪಕ್ಕೆ ನಡೆಸದಂತೆ ನೋಡಿಕೊಳ್ಳಿ. “ನಾನು ಅಜಾಗ್ರತೆಯಿಂದ ಹೇಳಿದೆ” ಎಂದು ಯಾಜಕನಿಗೆ ತಿಳಿಸಬೇಡಿ. ಇಲ್ಲವಾದರೆ, ದೇವರು ನಿಮ್ಮ ಮಾತುಗಳಿಗೆ ಕೋಪಗೊಂಡು ನೀವು ದುಡಿದಿರುವುದನ್ನೆಲ್ಲಾ ನಾಶಮಾಡಬಹುದು. |
7
|
ಉಪಯೋಗವಿಲ್ಲದ ನಿಮ್ಮ ಕನಸುಗಳಾಗಲಿ ಜಂಬದ ಮಾತುಗಳಾಗಲಿ ನಿಮ್ಮನ್ನು ಕೇಡಿಗೆ ನಡೆಸದಂತೆ ನೋಡಿಕೊಳ್ಳಿರಿ; ದೇವರಲ್ಲಿ ಭಯಭಕ್ತಿಯುಳ್ಳವರಾಗಿರಿ. |
8
|
ದೇಶದಲ್ಲಿ ಬಡವರಿಂದ ಬಲವಂತ ಸೇವೆಮಾಡಿಸುವುದನ್ನು ಕಂಡು ಅವರಿಗೆ ಅನ್ಯಾಯವಾಗಿದೆಯೆಂದೂ ಹಕ್ಕಿಗೆ ಚ್ಯುತಿಯಾಗಿದೆಯೆಂದೂ ಆಶ್ಚರ್ಯಪಡಬೇಡಿ. ಅವರಿಂದ ಬಲವಂತವಾಗಿ ದುಡಿಸುವ ಅಧಿಪತಿಗೆ ಬಲವಂತದಿಂದ ದುಡಿಸುವ ಮತ್ತೊಬ್ಬ ಅಧಿಪತಿಯಿರುವನು. ಈ ಇಬ್ಬರು ಅಧಿಪತಿಗಳಿಗೂ ಮತ್ತೊಬ್ಬ ಅಧಿಪತಿಯಿರುವನು. |
9
|
ರಾಜನು ಸಹ ಸೇವಕನಾಗಿದ್ದಾನೆ; ಅವನ ದೇಶವು ಅವನನ್ನು ಗಳಿಸಿಕೊಂಡಿದೆ. |
10
|
ಹಣದಾಸೆಯುಳ್ಳವನು ತನ್ನಲ್ಲಿ ಎಷ್ಟೇ ಹಣವಿದ್ದರೂ ತೃಪ್ತನಾಗಲಾರನು. ಐಶ್ವರ್ಯದಾಸೆಯುಳ್ಳವನು ಎಷ್ಟೇ ಸಂಪಾದಿಸಿದರೂ ತೃಪ್ತನಾಗುವುದಿಲ್ಲ. ಇದು ಸಹ ವ್ಯರ್ಥ. |
11
|
ಐಶ್ವರ್ಯ ಹೆಚ್ಚಿದಂತೆಲ್ಲಾ “ಅನುಭವಿಸುವವರ” ಸಂಖ್ಯೆಯೂ ಹೆಚ್ಚುವುದು. ಐಶ್ವರ್ಯವಂತನು ಅದನ್ನು ಕಣ್ಣಿಂದ ನೋಡಬಹುದಷ್ಟೇ ಹೊರತು ಬೇರೆ ಯಾವ ಲಾಭವೂ ಅವನಿಗಿಲ್ಲ. |
12
|
ದಿನವೆಲ್ಲಾ ಪ್ರಯಾಸಪಟ್ಟು ದುಡಿಯುವವನು ಸಮಾಧಾನದಿಂದ ಮಲಗಿಕೊಳ್ಳುವನು. ಅವನಿಗೆ ತಿನ್ನಲು ಸ್ವಲ್ಪವೇ ಇರಲಿ ಅಥವಾ ಹೆಚ್ಚೇ ಇರಲಿ, ಅದು ಮುಖ್ಯವಲ್ಲ. ಐಶ್ವರ್ಯವಂತನಿಗಾದರೊ ತನ್ನ ಸಂಪತ್ತಿನ ಕುರಿತು ಚಿಂತಿಸುತ್ತಾ ನಿದ್ರಿಸಲಾರನು. |
13
|
ಈ ಲೋಕದಲ್ಲಿ ದುರ್ಗತಿಯೊಂದನ್ನು ನೋಡಿದ್ದೇನೆ. ಒಬ್ಬನು ತನ್ನ ಭವಿಷ್ಯತ್ತಿಗಾಗಿ ಹಣವನ್ನು ಕೂಡಿಡುತ್ತಾನೆ. |
14
|
ಬಳಿಕ ಅವನು ಯಾವುದೊ ಕೇಡಿಗೆ ಗುರಿಯಾಗಿ ತನ್ನ ಹಣವನ್ನೆಲ್ಲಾ ಕಳೆದುಕೊಳ್ಳುವನು; ಕೊನೆಯಲ್ಲಿ ತನ್ನ ಮಗನಿಗೆ ಕೊಡಲು ಅವನಲ್ಲಿ ಏನೂ ಉಳಿದಿರುವುದಿಲ್ಲ. |
15
|
ಮನುಷ್ಯನು ತಾಯಿಯ ಗರ್ಭದಿಂದ ಬರಿದಾಗಿ ಈ ಲೋಕಕ್ಕೆ ಬರುವನು; ಸಾಯುವಾಗ ಅದೇ ರೀತಿ ಬರಿದಾಗಿ ಹೋಗುವನು; ತಾನು ಪ್ರಯಾಸಪಟ್ಟು ಸಂಪಾದಿಸಿದವುಗಳಲ್ಲಿ ಒಂದನ್ನೂ ಅವನು ತನ್ನೊಡನೆ ತೆಗೆದುಕೊಂಡು ಹೋಗಲಾರನು. |
16
|
ಅದು ಸಹ ತುಂಬ ದುಃಖಕರ. ಅವನು ಬಂದ ರೀತಿಯಲ್ಲಿಯೇ ಈ ಲೋಕವನ್ನು ಬಿಟ್ಟುಹೋಗುವನು. “ಗಾಳಿಯನ್ನು ಹಿಂದಟ್ಟುವುದರಿಂದ” ಅವನಿಗಾಗುವ ಪ್ರಯೋಜನವೇನು? |
17
|
ಅವನ ಜೀವಮಾನವೆಲ್ಲಾ ವ್ಯಸನದಿಂದಲೂ ದುಃಖದಿಂದಲೂ ಕೂಡಿದೆ. ನಿರಾಶೆಯೂ ಕಾಯಿಲೆಯೂ ಕೋಪವೂ ಅವನನ್ನು ಕಾಡುತ್ತಲೇ ಇರುತ್ತವೆ. |
18
|
ನಾನು ಕಂಡುಕೊಂಡದ್ದೇನಂದರೆ, ಒಬ್ಬನು ತನ್ನ ಅಲ್ಪಕಾಲದ ಜೀವಮಾನದಲ್ಲಿ ಅನ್ನಪಾನಗಳನ್ನು ತೆಗೆದುಕೊಂಡು ತನ್ನ ಪ್ರಯಾಸದಲ್ಲಿಯೂ ಸುಖವನ್ನನುಭವಿಸುವುದೇ ಅವನಿಗೆ ಮೇಲು. ಇದೇ ಅವನ ಪಾಲು. |
19
|
ದೇವರು ಒಬ್ಬನಿಗೆ ಐಶ್ವರ್ಯವನ್ನೂ ಆಸ್ತಿಯನ್ನೂ ಮತ್ತು ಅವುಗಳನ್ನು ಅನುಭವಿಸುವ ಭಾಗ್ಯವನ್ನೂ ಕೊಟ್ಟಿದ್ದರೆ ಅವನು ಅವುಗಳನ್ನು ಅನುಭವಿಸಲಿ. ಅವನು ತನಗಿರುವಂಥವುಗಳನ್ನು ಹೊಂದಿಕೊಂಡು ತನ್ನ ದುಡಿಮೆಯಲ್ಲಿ ಸಂತೋಷಿಸಲಿ. ಅದು ದೇವರ ಅನುಗ್ರಹವಷ್ಟೇ. |
20
|
ತನ್ನ ಜೀವಿತವು ಅಲ್ಪಕಾಲದ್ದೆಂದು ಅವನು ನೆನಪು ಮಾಡಿಕೊಳ್ಳಬೇಕು. ಯಾಕೆಂದರೆ ಅವನನ್ನು ಅವನಿಗೆ ಇಷ್ಟವಾದ ಕೆಲಸದಲ್ಲಿ ನಿರತನನ್ನಾಗಿ ಮಾಡಿರುವಾತನು ದೇವರೇ. |
Ecclesiastes 5:16 Kannada Language Bible Words basic statistical display
COMING SOON ...