1
|
ಪ್ರತಿಯೊಂದಕ್ಕೂ ಸೂಕ್ತವಾದ ಸಮಯವಿದೆ. ಭೂಮಿಯ ಮೇಲೆ ನಡೆಯುವ ಪ್ರತಿಯೊಂದು ಕಾರ್ಯಕ್ಕೂ ಸೂಕ್ತ ಸಮಯವಿದೆ. |
2
|
ಹುಟ್ಟುವ ಸಮಯ, ಸಾಯುವ ಸಮಯ, ನೆಡುವ ಸಮಯ, ಸಸಿಗಳನ್ನು ಕೀಳುವ ಸಮಯ. |
3
|
ಕೊಲ್ಲುವ ಸಮಯ, ವಾಸಿಮಾಡುವ ಸಮಯ. ನಾಶ ಮಾಡುವ ಸಮಯ, ಕಟ್ಟುವ ಸಮಯ. |
4
|
ಅಳುವ ಸಮಯ, ನಗುವ ಸಮಯ, ಗೋಳಾಡುವ ಸಮಯ, ಕುಣಿದಾಡುವ ಸಮಯ. |
5
|
ಆಯುಧಗಳನ್ನು ಬಿಸಾಡುವ ಸಮಯ, ಆಯುಧಗಳನ್ನು ಎತ್ತಿಕೊಳ್ಳುವ ಸಮಯ, ಅಪ್ಪಿಕೊಳ್ಳುವ ಸಮಯ, ಅಪ್ಪಿಕೊಳ್ಳದಿರುವ ಸಮಯ. |
6
|
ಹುಡುಕುವ ಸಮಯ, ಹುಡುಕದಿರುವ ಸಮಯ, ವಸ್ತುಗಳನ್ನು ಇಟ್ಟುಕೊಳ್ಳುವ ಸಮಯ, ವಸ್ತುಗಳನ್ನು ಬಿಸಾಡುವ ಸಮಯ. |
7
|
ಬಟ್ಟೆಯನ್ನು ಹರಿಯುವ ಸಮಯ, ಬಟ್ಟೆಯನ್ನು ಹೊಲಿಯುವ ಸಮಯ, ಮೌನವಾಗಿರುವ ಸಮಯ, ಮಾತಾಡುವ ಸಮಯ. |
8
|
ಪ್ರೀತಿ ಮಾಡುವ ಸಮಯ, ದ್ವೇಷಿಸುವ ಸಮಯ, ಯುದ್ಧಮಾಡುವ ಸಮಯ, ಶಾಂತಿಯಿಂದಿರುವ ಸಮಯ. |
9
|
ದುಡಿಯುವವನಿಗೆ ಅವನ ಪ್ರಯಾಸದಿಂದ ಲಾಭವೇನು? |
10
|
ದೇವರು ಮನುಷ್ಯರಿಗೆ ಕೊಟ್ಟಿರುವ ಪ್ರಯಾಸದ ಕೆಲಸವನ್ನೆಲ್ಲಾ ನೋಡಿದ್ದೇನೆ. |
11
|
ಈ ಲೋಕವನ್ನು ಕುರಿತು ಆಲೋಚಿಸುವುದಕ್ಕೆ ದೇವರು ನನಗೆ ಜ್ಞಾನವನ್ನು ಕೊಟ್ಟಿದ್ದರೂ ದೇವರ ಕಾರ್ಯವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನಮಗೆ ಸಾಧ್ಯವೇ ಇಲ್ಲ. ದೇವರು ಪ್ರತಿಯೊಂದನ್ನೂ ತಕ್ಕ ಸಮಯದಲ್ಲಿ ಮಾಡುವನು. |
12
|
ಬದುಕಿರುವಷ್ಟು ಕಾಲ ಸಂತೋಷವಾಗಿದ್ದು ಸುಖಪಡುವುದಕ್ಕಿಂತ ಬೇರೆ ಯಾವ ಮೇಲೂ ಮನುಷ್ಯರಿಗೆ ಇಲ್ಲವೆಂದು ಕಲಿತುಕೊಂಡೆನು. |
13
|
ಪ್ರತಿಯೊಬ್ಬನು ಅನ್ನಪಾನಗಳನ್ನು ತೆಗೆದುಕೊಂಡು ತನ್ನ ಕೆಲಸವನ್ನು ಸಂತೋಷದಿಂದ ಮಾಡುವುದು ದೇವರಿಗೆ ಇಷ್ಟವಾಗಿದೆ. ಅವು ದೇವರ ವರವಾಗಿವೆ. |
14
|
ದೇವರ ಕಾರ್ಯಗಳೆಲ್ಲಾ ಶಾಶ್ವತವಾದದ್ದು. ಆತನ ಕಾರ್ಯಗಳಿಗೆ ಮನುಷ್ಯರು ಏನನ್ನೂ ಸೇರಿಸಲಾರರು; ಅವುಗಳಿಂದ ಏನನ್ನೂ ತೆಗೆಯಲಾರರು. ಮನುಷ್ಯರು ದೇವರಲ್ಲಿ ಭಯಭಕ್ತಿಯುಳ್ಳವರಾಗಿರಬೇಕೆಂಬುದೇ ಇದಕ್ಕೆ ಕಾರಣ. |
15
|
ಈಗ ಸಂಭವಿಸುವಂಥವುಗಳೂ ಮುಂದೆ ಸಂಭವಿಸುವಂಥವುಗಳೂ ಹಿಂದಿನ ಕಾಲದಲ್ಲಿ ಸಂಭವಿಸಲ್ಪಟ್ಟಿವೆ. ದೇವರು ಅದೇ ಕಾರ್ಯಗಳನ್ನು ಮತ್ತೆ ಮತ್ತೆ ಬರಮಾಡುವನು. |
16
|
ನಾನು ಈ ಲೋಕವನ್ನು ದೃಷ್ಟಿಸಿ ನೋಡಿದಾಗ, ನ್ಯಾಯಾಲಯಗಳಲ್ಲಿ ನೀತಿನ್ಯಾಯಗಳ ಬದಲಾಗಿ ದುಷ್ಟತನ ತುಂಬಿರುವುದನ್ನು ಕಂಡುಕೊಂಡೆನು. |
17
|
ಆಗ ನಾನು ಮನಸ್ಸಿನಲ್ಲಿ, “ದೇವರು ಪ್ರತಿಯೊಂದಕ್ಕೂ ಸಮಯವನ್ನು ಗೊತ್ತುಪಡಿಸಿದ್ದಾನೆ. ಜನರು ಮಾಡುವ ಪ್ರತಿಯೊಂದಕ್ಕೂ ನ್ಯಾಯತೀರಿಸಲು ಆತನು ಸಮಯವನ್ನು ಗೊತ್ತುಪಡಿಸಿದ್ದಾನೆ. ದೇವರು ನೀತಿವಂತರಿಗೂ ದುಷ್ಟರಿಗೂ ನ್ಯಾಯತೀರಿಸುವನು” ಎಂದುಕೊಂಡೆನು. |
18
|
ಅಲ್ಲದೆ ಮನಸ್ಸಿನಲ್ಲಿ ಹೀಗೆಂದುಕೊಂಡೆನು: “ಮನುಷ್ಯರು ಪ್ರಾಣಿಗಳಿಗಿಂತ ಮೇಲಾದವರಲ್ಲ ಎಂಬುದನ್ನು ನಾವು ತಿಳಿದುಕೊಳ್ಳಬೇಕೆಂಬುದು ದೇವರ ಇಷ್ಟವಾಗಿದೆ. |
19
|
ಮನುಷ್ಯನು ಪ್ರಾಣಿಗಿಂತಲೂ ಉತ್ತಮನಾಗಿರುವನೇ? ಇಲ್ಲ! ಏಕೆಂದರೆ ಪ್ರತಿಯೊಂದು ಉಪಯೋಗವಿಲ್ಲದ್ದು. ಪ್ರಾಣಿಗಳಿಗೂ ಮನುಷ್ಯರಿಗೂ ಒಂದೇ ಗತಿಯಾಗುವುದು; ಪ್ರಾಣಿಗಳೂ ಸಾಯುವವು, ಮನುಷ್ಯರೂ ಸಾಯುವರು. ಮನುಷ್ಯರಿಗೂ ಪ್ರಾಣಿಗಳಿಗೂ ಇರುವುದು ಒಂದೇ “ಉಸಿರು.” ಸತ್ತ ಪ್ರಾಣಿಗೂ ಸತ್ತ ಮನುಷ್ಯನಿಗೂ ವ್ಯತ್ಯಾಸವಿಲ್ಲ. |
20
|
ಮನುಷ್ಯರ ಮತ್ತು ಪ್ರಾಣಿಗಳ ದೇಹಗಳೆಲ್ಲ ಒಂದೇ ಸ್ಥಳಕ್ಕೆ ಹೋಗುತ್ತವೆ. ಮನುಷ್ಯರು ಮಣ್ಣಿನಿಂದ ಬಂದರು. ಕೊನೆಗೆ ಅವರು ಮಣ್ಣಿಗೇ ಹೋಗುವರು. ಪ್ರಾಣಿಗಳು ಮಣ್ಣಿನಿಂದ ಬಂದವು; ಕೊನೆಗೆ ಅವು ಮಣ್ಣಿಗೆ ಹೋಗುತ್ತವೆ. |
21
|
ಮನುಷ್ಯನ ಆತ್ಮಕ್ಕೆ ಏನು ಸಂಭವಿಸುವುದೋ ಯಾರಿಗೆ ಗೊತ್ತು? ಮನುಷ್ಯನ ಆತ್ಮವು ದೇವರ ಬಳಿಗೆ ಮೇಲಕ್ಕೆ ಹೋಗುವುದೋ ಪ್ರಾಣಿಯ ಆತ್ಮವು ಭೂಮಿಯೊಳಗೆ ಇಳಿಯುವುದೋ ಯಾರಿಗೆ ಗೊತ್ತು? |
22
|
ಆದ್ದರಿಂದ ಮನುಷ್ಯನಿಗೆ ತನ್ನ ಕಾರ್ಯದಲ್ಲಿ ಸಂತೋಷಪಡುವುದಕ್ಕಿಂತ ಬೇರೆ ಯಾವ ಮೇಲೂ ಇಲ್ಲ. ಇದೇ ಅವನ ಪಾಲು ಎಂದು ಗ್ರಹಿಸಿಕೊಂಡೆನು. ಅಲ್ಲದೆ ಮುಂದಿನ ಕಾಲವನ್ನು ಕುರಿತು ಮನುಷ್ಯನು ಚಿಂತಿಸಬಾರದು. ಯಾಕೆಂದರೆ ಅವನ ಜೀವಮಾನದ ನಂತರ ಸಂಭವಿಸುವಂಥವುಗಳನ್ನು ನೋಡಲು ಈ ಲೋಕಕ್ಕೆ ಅವನನ್ನು ಯಾರು ಬರಮಾಡುವರು?” |
Ecclesiastes 3:1 Kannada Language Bible Words basic statistical display
COMING SOON ...