ಕಣ ತುಳಿಸುವ ಕೆಲಸವು ದ್ರಾಕ್ಷಿಯನ್ನು ಸಂಗ್ರಹಿಸುವ ಸಮಯದವರೆಗೂ ಮುಂದುವರಿಯುವುದು; ದ್ರಾಕ್ಷಿಯನ್ನು ಸಂಗ್ರಹಿಸುವ ಕೆಲಸವು ಬಿತ್ತನೆಯ ಕಾಲದವರೆಗೂ ಮುಂದುವರಿಯುವುದು. ಆಗ ನಿಮಗೆ ಆಹಾರವು ಸಮೃದ್ಧಿಯಾಗಿರುವುದು; ನೀವು ದೇಶದಲ್ಲಿ ಸುರಕ್ಷಿತವಾಗಿ ವಾಸಿಸುವಿರಿ.
ನಾನು ನಿಮ್ಮ ದೇಶಕ್ಕೆ ಸಮಾಧಾನವನ್ನು ಅನುಗ್ರಹಿಸುವೆನು. ನೀವು ನಿರ್ಭಯವಾಗಿ ಮಲಗಿಕೊಳ್ಳುವಿರಿ. ನಿಮ್ಮನ್ನು ಭಯಪಡಿಸಲು ಯಾರೂ ಬರುವುದಿಲ್ಲ. ದುಷ್ಟಮೃಗಗಳು ನಿಮ್ಮ ದೇಶದಲ್ಲಿರದಂತೆ ಮಾಡುವೆನು. ಸೈನ್ಯಗಳು ನಿಮ್ಮ ದೇಶದೊಳಕ್ಕೆ ಬರುವುದಿಲ್ಲ.
ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯದವರೆಗೆ ಉಳಿಯುವಂತೆ ನಿಮಗೆ ಬೇಕಾದಷ್ಟು ದವಸಧಾನ್ಯಗಳಿರುತ್ತದೆ. ನೀವು ಹೊಸ ಬೆಳೆಯನ್ನು ಕೊಯ್ಯುವಿರಿ. ಆದರೆ ಹೊಸ ಬೆಳೆಯನ್ನು ಸಂಗ್ರಹಿಸಬೇಕಾದರೆ ಹಳೆ ಬೆಳೆಯನ್ನು ಬಿಸಾಡಬೇಕಾಗುತ್ತದೆ.
ನಿಮ್ಮ ದೇವರಾಗಿರುವ ಯೆಹೋವನು ನಾನೇ! ನೀವು ಈಜಿಪ್ಟಿನಲ್ಲಿ ಗುಲಾಮರಾಗಿದ್ದಿರಿ. ಆದರೆ ನಾನು ನಿಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದೆನು. ನೀವು ಗುಲಾಮರಾಗಿ ಭಾರವಾದ ಹೊರೆಗಳನ್ನು ಹೊರುತ್ತಾ ಗೂನಾಗಿದ್ದಿರಿ. ಆದರೆ ನಿಮ್ಮ ಭುಜದ ಮೇಲಿದ್ದ್ದ ನೊಗವನ್ನು ನಾನು ಮುರಿದುಹಾಕಿ ನೀವು ಮತ್ತೆ ನೆಟ್ಟಗೆ ನಡೆಯುವಂತೆ ಮಾಡಿದೆನು.
ಆಗ ನಾನು ನಿಮ್ಮ ಮಧ್ಯೆ ಭಯಂಕರ ಸಂಗತಿಗಳು ನಡೆಯುವಂತೆ ಮಾಡುವೆನು. ನೀವು ವ್ಯಾಧಿಯಿಂದಲೂ ಜ್ವರದಿಂದಲೂ ನರಳುವಂತೆ ಮಾಡುವೆನು. ಅವು ನಿಮ್ಮ ಕಣ್ಣುಗಳನ್ನು ನಾಶಮಾಡಿ ನಿಮ್ಮ ಪ್ರಾಣವನ್ನು ತೆಗೆದುಬಿಡುತ್ತವೆ; ನೀವು ಬೀಜ ಬಿತ್ತಿದರೂ ಅದರ ಫಲವು ದೊರೆಯುವುದಿಲ್ಲ: ನಿಮ್ಮ ವೈರಿಗಳು ನಿಮ್ಮ ಬೆಳೆಗಳನ್ನು ತಿಂದುಬಿಡುವರು!
ನಾನು ನಿಮಗೆ ವಿಮುಖನಾಗಿರುವುದರಿಂದ ಆ ವೈರಿಗಳು ನಿಮ್ಮನ್ನು ಸೋಲಿಸುವರು. ಆ ವೈರಿಗಳು ನಿಮ್ಮನ್ನು ದ್ವೇಷಿಸುವರು ಮತ್ತು ನಿಮ್ಮನ್ನು ಆಳುವರು. ಯಾರೂ ನಿಮ್ಮನ್ನು ಬೆನ್ನಟ್ಟದಿದ್ದರೂ ಹೆದರಿಕೊಂಡು ಓಡುವಿರಿ.
“ನೀವು ಇನ್ನೂ ನನಗೆ ವಿರುದ್ಧವಾಗಿ ತಿರುಗಿ ಅವಿಧೇಯರಾದರೆ, ನಾನು ಇನ್ನೂ ಏಳರಷ್ಟು ಕಠಿಣವಾಗಿ ನಿಮ್ಮನ್ನು ಬಾಧಿಸುವೆನು. ನೀವು ಹೆಚ್ಚು ಪಾಪಮಾಡಿದಂತೆಲ್ಲಾ ಹೆಚ್ಚೆಚ್ಚಾಗಿ ಶಿಕ್ಷಿಸಲ್ಪಡುವಿರಿ.
ನಿಮಗೆ ವಿರುದ್ಧವಾಗಿ ನಾನು ಕ್ರೂರ ಮೃಗಗಳನ್ನು ಕಳುಹಿಸುವೆನು. ಅವುಗಳು ನಿಮ್ಮ ಮಕ್ಕಳನ್ನು ತಿಂದು ಬಿಡುವವು; ನಿಮ್ಮ ಪಶುಗಳನ್ನು ನಾಶಮಾಡುವವು. ಅವು ನಿಮ್ಮಲ್ಲಿ ಅನೇಕ ಜನರನ್ನು ಕೊಲ್ಲುವವು. ದಾರಿಗಳು ಜನಸಂಚಾರವಿಲ್ಲದೆ ಬರಿದಾಗಿರುವವು.
ನೀವು ನನ್ನ ಒಡಂಬಡಿಕೆಯನ್ನು ಮೀರಿದ್ದರಿಂದ ನಾನು ನಿಮ್ಮನ್ನು ದಂಡಿಸುವೆನು. ನಿಮಗೆ ವಿರೋಧವಾಗಿ ಸೈನ್ಯಗಳನ್ನು ಬರಮಾಡುವೆನು. ನೀವು ಭದ್ರತೆಗಾಗಿ ನಿಮ್ಮ ಪಟ್ಟಣಗಳೊಳಗೆ ಹೋಗುವಿರಿ. ಆದರೆ ವ್ಯಾಧಿಯು ನಿಮ್ಮಲ್ಲಿ ಹಬ್ಬುವಂತೆ ಮಾಡುವೆನು. ನಿಮ್ಮ ವೈರಿಗಳು ನಿಮ್ಮನ್ನು ಸೋಲಿಸುವರು.
ನಿಮಗೆ ರೊಟ್ಟಿ ದಯಪಾಲಿಸುವುದನ್ನು ನಾನು ನಿಲ್ಲಿಸಿದಾಗ, ಹತ್ತು ಮಂದಿ ಸ್ತ್ರೀಯರು ತಮ್ಮಲ್ಲಿರುವ ಎಲ್ಲಾ ರೊಟ್ಟಿಗಳನ್ನು ಒಂದೇ ಒಲೆಯಲ್ಲಿ ಸುಡುವರು. ಅವರು ಪ್ರತಿ ರೊಟ್ಟಿಯ ತುಂಡನ್ನು ತೂಕ ಮಾಡಿ ಹಂಚಿಕೊಳ್ಳುವರು. ನೀವು ತಿಂದರೂ ಹಸಿದವರಾಗಿಯೇ ಇರುವಿರಿ.
ನಾನು ನಿಮ್ಮ ಉನ್ನತವಾದ ಪೂಜಾ ಸ್ಥಳಗಳನ್ನು ನಾಶಮಾಡುವೆನು. ನಾನು ನಿಮ್ಮ ಧೂಪವೇದಿಕೆಗಳನ್ನು ಕಡಿದುಹಾಕುವೆನು. ನಿಮ್ಮ ವಿಗ್ರಹಗಳ ಮೇಲೆ ನಿಮ್ಮ ಹೆಣಗಳನ್ನು ಹಾಕುವೆನು. ನೀವು ನನಗೆ ಬಹಳ ಅಸಹ್ಯರಾಗಿರುವಿರಿ.
ಪ್ರತಿ ಏಳು ವರ್ಷದ ನಂತರ ಭೂಮಿಗೆ ವಿಶ್ರಾಂತಿ ಕೊಡಬೇಕೆಂದು ಧರ್ಮಶಾಸ್ತ್ರ ಹೇಳಿದಂತೆ, ನೀವು ವೈರಿಗಳ ದೇಶದಲ್ಲಿ ವಾಸಿಸಿದ ಕಾಲವೆಲ್ಲಾ ನೀವು ಭೂಮಿಗೆ ಕೊಡದೆ ಇದ್ದ ವಿಶ್ರಾಂತಿಯನ್ನು ಆ ಸಮಯದಲ್ಲಿ ಭೂಮಿಯು ಪಡೆದುಕೊಳ್ಳುವುದು.
ಜೀವಂತವಾಗಿ ಉಳಿದವರು ತಮ್ಮ ವೈರಿಗಳ ದೇಶದಲ್ಲಿ ಅಧೈರ್ಯಗೊಳ್ಳುವರು. ಅವರು ಪ್ರತಿಯೊಂದಕ್ಕೂ ದಿಗಿಲುಪಡುವರು. ಗಾಳಿಯಿಂದ ತೂರಿಹೋಗುವ ಎಲೆಯ ಶಬ್ದಕ್ಕೆ ಅವರು ಓಡಿಹೋಗುವರು. ಕತ್ತಿಯನ್ನು ಹಿಡಿದುಕೊಂಡು ಬೆನ್ನಟ್ಟುತ್ತಿದ್ದಾರೋ ಎಂಬಂತೆ ಅವರು ಓಡಿಹೋಗುವರು. ಯಾರೂ ಬೆನ್ನಟ್ಟದಿದ್ದಾಗಲೂ ಅವರು ಎಡವಿ ಬೀಳುವರು.
ಒಬ್ಬನು ಕತ್ತಿಯನ್ನು ಹಿಡಿದುಕೊಂಡು ಬೆನ್ನಟ್ಟುವಾಗ ಓಡಿಹೋಗುವಂತೆ ಅವರು ಓಡಿಹೋಗುವರು. ಯಾರೂ ಅವರನ್ನು ಬೆನ್ನಟ್ಟದಿದ್ದಾಗಲೂ ಅವರು ಒಬ್ಬರ ಮೇಲೊಬ್ಬರು ಬೀಳುವರು. “ನೀವು ನಿಮ್ಮ ವೈರಿಗಳ ವಿರುದ್ಧವಾಗಿ ನಿಲ್ಲುವಷ್ಟು ಶಕ್ತಿಯುಳ್ಳವರಾಗಿರುವುದಿಲ್ಲ.
“ಒಂದುವೇಳೆ ಜನರು ತಮ್ಮ ಪಾಪಗಳನ್ನೂ ತಮ್ಮ ಪೂರ್ವಿಕರ ಪಾಪಗಳನ್ನೂ ಅರಿಕೆ ಮಾಡಬಹುದು; ನನಗೆ ವಿರುದ್ಧವಾಗಿ ಪಾಪಮಾಡಿರುವುದಾಗಿಯೂ ನನಗೆ ವಿರೋಧವಾಗಿ ತಿರುಗಿರುವುದಾಗಿಯೂ ಅವರು ಒಪ್ಪಿಕೊಂಡು
ನಾನು ಅವರಿಗೆ ವಿಮುಖನಾಗಿ ಅವರನ್ನು ಶತ್ರುಗಳ ದೇಶಕ್ಕೆ ಕರೆದುಕೊಂಡು ಬಂದೆನೆಂದು ಅವರು ಅರಿತುಕೊಂಡು ತಮ್ಮನ್ನು ತಗ್ಗಿಸಿಕೊಂಡು ತಮ್ಮ ಪಾಪಕ್ಕೆ ಬರತಕ್ಕ ಶಿಕ್ಷೆಯನ್ನು ಸ್ವೀಕರಿಸಲು ಯೋಗ್ಯರೆಂದು ಹೇಳಿಕೊಂಡರೆ
“ದೇಶವು ಬರಿದಾಗಿದ್ದು ವಿಶ್ರಾಂತಿಯನ್ನು ಅನುಭವಿಸುವುದು. ಆಗ ಜೀವಂತವಾಗಿ ಉಳಿದವರು ತಮ್ಮ ಪಾಪಗಳಿಗೆ ಬರತಕ್ಕ ಶಿಕ್ಷೆಯನ್ನು ಅನುಭವಿಸುವರು. ನನ್ನ ನಿಯಮಗಳನ್ನು ದ್ವೇಷಿಸಿ ನನ್ನ ವಿಧಿಗಳಿಗೆ ಅವಿಧೇಯರಾದ್ದರಿಂದ ತಮಗೆ ಶಿಕ್ಷೆಯಾಯಿತೆಂದು ಅವರು ಅರಿತುಕೊಳ್ಳುವರು.
ಅವರು ನಿಜವಾಗಿ ಪಾಪಮಾಡಿದ್ದರೂ ಸಹಾಯಕ್ಕಾಗಿ ಅವರು ನನ್ನ ಬಳಿಗೆ ಬಂದರೆ ನಾನು ಅವರಿಗೆ ವಿಮುಖನಾಗುವುದಿಲ್ಲ. ಅವರು ತಮ್ಮ ಶತ್ರುಗಳ ದೇಶದಲ್ಲಿದ್ದರೂ ನಾನು ಅವರಿಗೆ ಕಿವಿಗೊಡುವೆನು. ಅವರನ್ನು ಸಂಪೂರ್ಣವಾಗಿ ನಾಶಮಾಡುವುದಿಲ್ಲ. ಅವರೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಮರೆಯುವುದಿಲ್ಲ. ಯಾಕೆಂದರೆ ನಾನೇ ಅವರ ದೇವರಾದ ಯೆಹೋವನು!
ಅವರಿಗೋಸ್ಕರ ಅವರ ಪೂರ್ವಿಕರ ಸಂಗಡ ಮಾಡಿಕೊಂಡ ಒಡಂಬಡಿಕೆಯನ್ನು ನೆನಪಿಗೆ ತಂದುಕೊಂಡು ಅವರಿಗೆ ಹಿತವನ್ನು ಮಾಡುವೆನು. ನಾನು ಅವರ ದೇವರಾಗಿರಬೇಕೆಂದು ಅವರ ಪೂರ್ವಿಕರನ್ನು ಈಜಿಪ್ಟ್ ದೇಶದಿಂದ ಹೊರಗೆ ಕರೆದುಕೊಂಡು ಬಂದೆನು. ಬೇರೆ ಜನಾಂಗಗಳವರು ಆ ಸಂಗತಿಗಳನ್ನು ನೋಡಿದರು. ನಾನೇ ಯೆಹೋವನು!”
ಯೆಹೋವನು ಇಸ್ರೇಲರಿಗೆ ಕೊಟ್ಟ ಕಟ್ಟಳೆಗಳು, ನಿಯಮಗಳು ಮತ್ತು ಉಪದೇಶಗಳು ಇವೇ. ಇದು ಯೆಹೋವನ ಮತ್ತು ಇಸ್ರೇಲರ ನಡುವೆ ಆದ ಒಡಂಬಡಿಕೆಯ ನಿಯಮಗಳಾಗಿವೆ. ಯೆಹೋವನು ಆ ನಿಯಮಗಳನ್ನು ಸೀನಾಯಿ ಬೆಟ್ಟದಲ್ಲಿ ಮೋಶೆಗೆ ಕೊಟ್ಟನು. ಮೋಶೆಯು ಅವುಗಳನ್ನು ಜನರಿಗೆ ಕೊಟ್ಟನು.