ಇಸ್ರೇಲರು ಜೋರ್ಡನ್ ನದಿಯನ್ನು ದಾಟುವವರೆಗೆ ಯೆಹೋವನು ಆ ನದಿಯನ್ನು ಬತ್ತಿಸಿದನು. ಜೋರ್ಡನ್ ನದಿಯ ಪಶ್ಚಿಮ ದಿಕ್ಕಿನಲ್ಲಿರುವ ಅಮೋರಿಯರ ಅರಸರು ಮತ್ತು ಭೂಮಧ್ಯ ಸಾಗರದ ಹತ್ತಿರವಿರುವ ಕಾನಾನ್ಯರ ಅರಸರು ಈ ಸಂಗತಿಯನ್ನು ಕೇಳಿ ಭಯಗ್ರಸ್ತರಾದರು; ಇಸ್ರೇಲರ ವಿರುದ್ಧವಾಗಿ ಹೋರಾಡುವಷ್ಟು ಧೈರ್ಯವಿಲ್ಲದವರಾದರು.
ಆಗ ಯೆಹೋವನು ಯೆಹೋಶುವನಿಗೆ, “ನೀವು ಈಜಿಪ್ಟಿನಲ್ಲಿ ಗುಲಾಮರಾಗಿದ್ದಾಗ ಅವಮಾನಕ್ಕೆ ಗುರಿಯಾಗಿದ್ದಿರಿ. ಆದರೆ ಇಂದು ಆ ನಾಚಿಕೆಯನ್ನು ತೆಗೆದು ಹಾಕಿದ್ದೇನೆ” ಎಂದನು. ಆದ್ದರಿಂದ ಯೆಹೋಶುವನು ಆ ಸ್ಥಳಕ್ಕೆ “ಗಿಲ್ಗಾಲ್” ಎಂದು ಹೆಸರಿಟ್ಟನು. ಈಗಲೂ ಆ ಸ್ಥಳಕ್ಕೆ “ಗಿಲ್ಗಾಲ್” ಎಂಬ ಹೆಸರಿದೆ.
ಮೂರನೆಯ ದಿನ ಮುಂಜಾನೆ ಪರಲೋಕದಿಂದ ಬರುತ್ತಿದ್ದ ವಿಶಿಷ್ಟ ಆಹಾರವಾದ ಮನ್ನವು ನಿಂತುಹೋಯಿತು. ಜನರು ಕಾನಾನ್ ಪ್ರದೇಶದಲ್ಲಿ ಬೆಳೆದ ಆಹಾರವನ್ನು ತಿಂದ ದಿನದಿಂದ ಹೀಗಾಯಿತು. ಅಂದಿನಿಂದ ಇಸ್ರೇಲರು ಪರಲೋಕದ ವಿಶಿಷ್ಟವಾದ ಆಹಾರವನ್ನು ಪಡೆಯಲಿಲ್ಲ.
ಯೆಹೋಶುವನು ಜೆರಿಕೊವಿನ ಸಮೀಪದಲ್ಲಿದ್ದಾಗ ಕಣ್ಣೆತ್ತಿ ನೋಡಲು ಒಬ್ಬ ಮನುಷ್ಯನು ಅವನ ಎದುರಿಗೆ ನಿಂತಿರುವುದನ್ನು ಕಂಡನು. ಆ ಮನುಷ್ಯನ ಕೈಯಲ್ಲಿ ಒಂದು ಖಡ್ಗವಿತ್ತು. ಯೆಹೋಶುವನು ಆ ಮನುಷ್ಯನ ಹತ್ತಿರಹೋಗಿ, “ನೀನು ನಮ್ಮ ಜನರ ಸ್ನೇಹಿತನೋ ಅಥವಾ ನೀನು ನಮ್ಮ ಶತ್ರುಗಳಲ್ಲಿ ಒಬ್ಬನೋ?” ಎಂದು ಕೇಳಿದನು.
ಆ ಮನುಷ್ಯನು, “ನಾನು ಶತ್ರುವಲ್ಲ, ನಾನು ಯೆಹೋವನ ಸೇನಾಧಿಪತಿ. ನಾನು ಈಗಲೇ ನಿನ್ನಲ್ಲಿಗೆ ಬಂದಿದ್ದೇನೆ” ಎಂದು ಉತ್ತರಿಸಿದನು. ಆಗ ಯೆಹೋಶುವನು ನೆಲದವರೆಗೂ ತಲೆಬಾಗಿ ನಮಸ್ಕರಿಸಿ ಅವನಿಗೆ, “ನಾನು ನಿನ್ನ ಸೇವಕ. ನನ್ನ ಒಡೆಯನು ನನಗೆ ಯಾವುದಾದರೂ ಆಜ್ಞೆಯನ್ನು ವಿಧಿಸಬೇಕಾಗಿದೆಯೇ?” ಎಂದು ಕೇಳಿದನು.