ಚೀಯೋನಿನಲ್ಲಿ ಆರಾಮವಾಗಿರುವವರಿಗೂ ಸಮಾರ್ಯದ ಪರ್ವತಾಗ್ರಗಳಲ್ಲಿ ಸುರಕ್ಷಿತರಾಗಿರುವವರಿಗೂ ಕೆಡುಕು ಸಂಭವಿಸುವದು. ನೀವು ವಿಶೇಷವಾದ ದೇಶದ ವಿಶೇಷ ನಾಯಕರು. ಇಸ್ರೇಲಿನ ಮನೆತನವು ಸಲಹೆಗಾಗಿ ನಿಮ್ಮ ಹತ್ತಿರ ಬರುತ್ತದೆ.
ಹೋಗಿ ಕಲ್ನೆಯ ಕಡೆಗೆ ದಿಟ್ಟಿಸಿರಿ. ಅಲ್ಲಿಂದ ದೊಡ್ಡ ಪಟ್ಟಣವಾದ ಹಾಮಾತಿಗೆ ಹೋಗಿರಿ. ಫಿಲಿಷ್ಟಿಯರ ಗತ್ ಪಟ್ಟಣಕ್ಕೆ ಹೋಗಿರಿ. ಆ ಜನಾಂಗಗಳಿಗಿಂತ ನೀವು ಉತ್ತಮರೋ? ಇಲ್ಲ. ಅವರ ರಾಜ್ಯವು ನಿಮಗಿಂತ ವಿಸ್ತಾರವಾಗಿದೆ.
ಆದರೆ ಈಗ ನೀವು ಸುಖದ ಜೀವಿತದಲ್ಲಿ ಆನಂದಿಸುತ್ತಿದ್ದೀರಿ, ದಂತದ ಮಂಚದಲ್ಲಿ ಮಲಗುವಿರಿ; ಸುಖಾಸನಗಳ ಮೇಲೆ ಬಿದ್ದುಕೊಳ್ಳುವಿರಿ. ಹಿಂಡಿನಿಂದ ಎಳೇ ಕುರಿಮರಿಯನ್ನೂ ಹಟ್ಟಿಯಿಂದ ಎಳೇ ಕರುವನ್ನೂ ಭಕ್ಷಿಸುತ್ತೀರಿ.
ಈಗ ಆ ಜನರು ತಮ್ಮ ಸುಖಾಸನಗಳಲ್ಲಿ ಕಾಲನ್ನು ನೇರವಾಗಿ ಚಾಚಿಕೊಂಡು ಮಲಗಿದ್ದಾರೆ. ಆದರೆ ಅವರ ಸುಖದ ಸಮಯಗಳು ಅಂತ್ಯವಾಗುವವು. ಅವರು ಕೈದಿಗಳಂತೆ ಸೆರೆ ಹಿಡಿಯಲ್ಪಟ್ಟು ಪರದೇಶಕ್ಕೆ ಒಯ್ಯಲ್ಪಡುವರು. ಅವರಲ್ಲಿ ಕೆಲವರು ಸೆರೆಗೊಯ್ಯಲ್ಪಡುವವರಲ್ಲಿ ಮೊದಲಿಗರಾಗುವರು.
ನನ್ನ ಒಡೆಯನಾದ ಯೆಹೋವನು ತನ್ನ ಹೆಸರಿನ ಮೇಲೆ ಆಣೆಯಿಟ್ಟು ಈ ಮಾತುಗಳನ್ನು ನುಡಿದಿದ್ದಾನೆ. ಸರ್ವಶಕ್ತನಾದ ಯೆಹೋವನ ನುಡಿಗಳಿವು: “ಯಾಕೋಬನು ಹೆಚ್ಚಳ ಪಡುವಂಥವುಗಳನ್ನು ನಾನು ದ್ವೇಷಿಸುತ್ತೇನೆ. ಅವನ ಬಲವಾದ ಬುರುಜುಗಳನ್ನು ದ್ವೇಷಿಸುತ್ತೇನೆ. ಆದುದರಿಂದ ಶತ್ರುಗಳು ಬಂದು ಪಟ್ಟಣವನ್ನೂ ಪಟ್ಟಣದಲ್ಲಿರುವದೆಲ್ಲವನ್ನೂ ಸೂರೆಮಾಡುವಂತೆ ಮಾಡುವೆನು.”
ಒಬ್ಬ ವ್ಯಕ್ತಿಯು ಸತ್ತಾಗ ಅವನ ಸಂಬಂಧಿಕರಲ್ಲಿ ಒಬ್ಬನು ಬಂದು ಶವವನ್ನು ಸುಡಲು ತೆಗೆದುಕೊಂಡು ಹೋಗುವನು. ಸಂಬಂಧಿಕನು ಬಂದು ಎಲುಬುಗಳನ್ನು ಕೊಂಡೊಯ್ಯುವನು. ಮನೆಯೊಳಗೆ ಅವಿತುಕೊಂಡಿರುವವರನ್ನು ಕರೆಯುವನು. “ಇನ್ನೂ ಸತ್ತ ಹೆಣಗಳು ಒಳಗಿವೆಯೋ?” ಎಂದು ವಿಚಾರಿಸುವನು. ಒಳಗಿದ್ದವರು “ಇಲ್ಲ” ಎಂದು ಉತ್ತರಿಸುವರು. ಆಗ ಆ ಸಂಬಂಧಿಕನು ಅವರನ್ನು ತಡೆದು, “ಯೆಹೋವನ ನಾಮವನ್ನು ನಾವು ಉಚ್ಚರಿಸಬಾರದು” ಎಂದು ಹೇಳುವನು.
ಕುದುರೆಗಳು ಬಂಡೆಗಳ ಮೇಲೆ ಓಡುವವೋ? ಇಲ್ಲ! ಬಂಡೆಗಳನ್ನು ಊಳಲು ನಿಮ್ಮ ಹಸುಗಳನ್ನು ಉಪಯೋಗಿಸುವಿರೋ? ಇಲ್ಲ! ಆದರೆ ನೀವು ಎಲ್ಲವನ್ನು ತಿರುವು ಮುರುವು ಮಾಡುತ್ತೀರಿ. ಒಳ್ಳೇತನವನ್ನು ನೀವು ವಿಷವಾಗಿ ಮಾಡಿದ್ದೀರಿ. ನ್ಯಾಯವನ್ನು ಕಹಿಯಾದ ವಿಷವನ್ನಾಗಿ ಮಾಡಿದ್ದೀರಿ.
“ಆದರೆ ಇಸ್ರೇಲೇ, ನಿನಗೆ ವಿರುದ್ಧವಾಗಿ ಒಂದು ಜನಾಂಗವನ್ನು ಎಬ್ಬಿಸುವೆನು. ಆ ಜನಾಂಗವು ನಿನ್ನ ದೇಶದಲ್ಲಿ ಪೂರ್ತಿ ಸಂಕಟವನ್ನುಂಟು ಮಾಡುವದು; ಅದು ಲೆಬೋಹಮಾತಿನಿಂದ ಹಿಡಿದು ಅರಾಬಾ ಹಳ್ಳದ ತನಕ ಸಂಕಟವನ್ನುಂಟು ಮಾಡುವದು.” ಸರ್ವಶಕ್ತನಾದ ಯೆಹೋವನು ಇದನ್ನು ಹೇಳಿದ್ದಾನೆ.