ಪೌಲನ ಕೈಗೆ ಸುತ್ತಿಕೊಂಡಿದ್ದ ಆ ಹಾವನ್ನು ಅಲ್ಲಿನ ಜನರು ನೋಡಿ, “ಇವನು ಕೊಲೆಗಾರನೇ ಸರಿ! ಇವನು ಸಮುದ್ರದಲ್ಲಿ ಸಾಯದಿದ್ದರೂ ಇವನು ಬದುಕುವುದು ನ್ಯಾಯಕ್ಕೆ ಇಷ್ಟವಿಲ್ಲ” ಎಂದು ಹೇಳಿದರು.
ಪೌಲನ ಮೈ ಊದಿಕೊಂಡು ಇದ್ದಕ್ಕಿದ್ದಂತೆ ಸತ್ತು ಬೀಳುತ್ತಾನೆ ಎಂದು ಅವರು ತಿಳಿದುಕೊಂಡಿದ್ದರು. ಅವರು ಪೌಲನನ್ನೇ ಬಹು ಹೊತ್ತಿನವರೆಗೆ ದಿಟ್ಟಿಸಿ ನೋಡುತ್ತಿದ್ದರೂ ಪೌಲನಿಗೆ ಯಾವ ಹಾನಿಯೂ ಆಗಲಿಲ್ಲ. ಆದ್ದರಿಂದ ಅವರು ತಮ್ಮ ಅಭಿಪ್ರಾಯವನ್ನು ಬದಲಿಸಿ, “ಇವನೊಬ್ಬ ದೇವರು!” ಎಂದು ಹೇಳಿದರು.
ಆ ಸ್ಥಳದ ಸುತ್ತಮುತ್ತ ಕೆಲವು ಹೊಲಗಳು ಇದ್ದವು. ಆ ದ್ವೀಪದ ಪ್ರಮುಖ ವ್ಯಕ್ತಿಯೊಬ್ಬನಿಗೆ ಆ ಹೊಲಗಳು ಸೇರಿದ್ದವು. ಅವನ ಹೆಸರು ಪೊಪ್ಲಿಯ. ಅವನು ನಮ್ಮನ್ನು ತನ್ನ ಮನೆಗೆ ಸ್ವಾಗತಿಸಿದನು. ಪೊಪ್ಲಿಯನು ಕನಿಕರ ತೋರಿದನು. ನಾವು ಅವನ ಮನೆಯಲ್ಲಿ ಮೂರು ದಿನವಿದ್ದೆವು.
ಪೊಪ್ಲಿಯನ ತಂದೆಯು ಬಹಳ ಅಸ್ವಸ್ಥನಾಗಿದ್ದನು. ಅವನಿಗೆ ಜ್ವರವಿತ್ತು ಮತ್ತು ರಕ್ತಭೇದಿಯಾಗುತ್ತಿತ್ತು. ಪೌಲನು ಅವನ ಬಳಿಗೆ ಹೋಗಿ ಅವನಿಗಾಗಿ ಪ್ರಾರ್ಥಿಸಿ ಅವನ ಮೇಲೆ ತನ್ನ ಕೈಗಳನ್ನಿಟ್ಟು ಗುಣಪಡಿಸಿದನು.
ನಾವು ಇಲ್ಲಿರುವುದು ರೋಮಿನಲ್ಲಿದ್ದ ವಿಶ್ವಾಸಿಗಳಿಗೆ ತಿಳಿಯಿತು. ಅವರು ನಮ್ಮನ್ನು ಭೇಟಿಯಾಗುವುದಕ್ಕಾಗಿ ಅಪಿಯಾ؆ ಮಾರುಕಟ್ಟೆಗೂ ಮತ್ತು ತ್ರಿಛತ್ರ؆ ಎಂಬ ಸ್ಥಳಕ್ಕೂ ಬಂದರು. ಈ ವಿಶ್ವಾಸಿಗಳನ್ನು ಕಂಡಾಗ ಪೌಲನು ಧೈರ್ಯಗೊಂಡು ದೇವರಿಗೆ ಸ್ತೋತ್ರ ಸಲ್ಲಿಸಿದನು.
ಮೂರು ದಿನಗಳಾದ ಮೇಲೆ ಪೌಲನು ಯೆಹೂದ್ಯರಲ್ಲಿ ಪ್ರಧಾನರಾಗಿದ್ದವರನ್ನು ಕರೆಯಿಸಿದನು. ಅವರು ಬಂದು ಒಟ್ಟಾಗಿ ಸೇರಿದಾಗ ಪೌಲನು ಅವರಿಗೆ, “ನನ್ನ ಯೆಹೂದ್ಯ ಸಹೋದರರೇ, ನಮ್ಮ ಜನರಿಗೂ ನಮ್ಮ ಪಿತೃಗಳ ಸಂಪ್ರದಾಯಗಳಿಗೂ ವಿರುದ್ಧವಾಗಿ ನಾನೇನೂ ಮಾಡಿಲ್ಲ. ಆದರೆ ನನ್ನನ್ನು ಜೆರುಸಲೇಮಿನಲ್ಲಿ ಬಂಧಿಸಿ ರೋಮಿನವರಿಗೆ ಒಪ್ಪಿಸಲಾಗಿದೆ.
ರೋಮಿನವರು ನನಗೆ ಅನೇಕ ಪ್ರಶ್ನೆಗಳನ್ನು ಕೇಳಿದರು. ಆದರೆ ನನ್ನನ್ನು ಮರಣದಂಡನೆಗೆ ಗುರಿಮಾಡುವಂಥ ಯಾವ ಅಪರಾಧವನ್ನೂ ಅವರು ನನ್ನಲ್ಲಿ ಕಾಣಲಿಲ್ಲ. ಆದ್ದರಿಂದ ಅವರು ನನ್ನನ್ನು ಬಿಡುಗಡೆ ಮಾಡಬೇಕೆಂದಿದ್ದರು.
ಆದರೆ ಅಲ್ಲಿದ್ದ ಯೆಹೂದ್ಯರು ಅದಕ್ಕೆ ಆಕ್ಷೇಪಿಸಿದರು. ಆದ್ದರಿಂದ ನನಗೆ ರೋಮಿನಲ್ಲಿ ಸೀಸರನ ಮುಂದೆ ವಿಚಾರಣೆಯಾಗಲಿ ಎಂದು ಕೇಳಿಕೊಳ್ಳಬೇಕಾಯಿತು. ಆದರೆ ನನ್ನ ಜನರು ಮಾಡಿದ್ದು ತಪ್ಪೆಂದು ನಾನು ನಿಮಗೆ ಹೇಳುತ್ತಿಲ್ಲ.
ಆದಕಾರಣವೇ ನಾನು ನಿಮ್ಮನ್ನು ನೋಡಲು ಮತ್ತು ನಿಮ್ಮ ಸಂಗಡ ಮಾತಾಡಲು ಬಯಸಿದೆ. ಇಸ್ರೇಲಿನ ನಿರೀಕ್ಷೆಯಲ್ಲಿ ನಾನು ನಂಬಿಕೆ ಇಟ್ಟಿರುವುದರಿಂದಲೇ ಈ ಸರಪಣಿಗಳಿಂದ ಬಂಧಿತನಾಗಿದ್ದೇನೆ” ಎಂದು ಹೇಳಿದನು.
ಪೌಲನು ಮತ್ತು ಯೆಹೂದ್ಯರು ಸಭೆಸೇರಲು ಒಂದು ದಿನವನ್ನು ಗೊತ್ತುಮಾಡಿದರು. ಅಂದು ಇನ್ನೂ ಅನೇಕ ಮಂದಿ ಯೆಹೂದ್ಯರು ಪೌಲನ ಮನೆಯಲ್ಲಿ ಸಭೆಸೇರಿದರು. ಪೌಲನು ಬೆಳಗ್ಗೆಯಿಂದ ಸಂಜೆಯವರೆಗೂ ಅವರೊಂದಿಗೆ ಮಾತಾಡಿದನು; ದೇವರ ರಾಜ್ಯದ ಬಗ್ಗೆ ಅವರಿಗೆ ವಿವರಿಸಿದನು. ಯೇಸುವಿನ ವಿಷಯವಾದ ಸಂಗತಿಗಳಲ್ಲಿ ನಂಬಿಕೆ ಇಡುವಂತೆ ಅವರನ್ನು ಒಪ್ಪಿಸಲು ಪ್ರಯತ್ನಿಸಿದನು. ಇದಕ್ಕಾಗಿ ಅವನು ಮೋಶೆಯ ಧರ್ಮಶಾಸ್ತ್ರವನ್ನೂ ಪ್ರವಾದಿಗಳ ಗ್ರಂಥಗಳನ್ನೂ ಬಳಸಿಕೊಂಡನು.
ಅವರು ವಾದಮಾಡಿ ಅಲ್ಲಿಂದ ಹೊರಡಲು ಸಿದ್ಧರಾದಾಗ ಪೌಲನು ಅವರಿಗೆ ಇಂತೆಂದನು: “ಪವಿತ್ರಾತ್ಮನು ಪ್ರವಾದಿಯಾದ ಯೆಶಾಯನ ಮೂಲಕ ಪಿತೃಗಳಿಗೆ ಸತ್ಯವನ್ನು ತಿಳಿಸಿದನು. ಆತನು ಹೀಗೆ ಹೇಳಿದ್ದಾನೆ:
ಹೌದು, ಈ ಜನರ ಹೃದಯಗಳು ಕಠಿಣವಾಗಿವೆ. ಈ ಜನರಿಗೆ ಕಿವಿಗಳಿದ್ದರೂ ಕೇಳುವುದಿಲ್ಲ. ಸತ್ಯವಿದ್ದರೂ ನೋಡಬಯಸರು. ಅಲ್ಲದಿದ್ದರೆ ಇವರು ಕಣ್ಣಾರೆ ಕಂಡು, ಕಿವಿಯಾರೆ ಕೇಳಿ, ಮನಸಾರೆ ಗ್ರಹಿಸಿಕೊಂಡು ನನ್ನತ್ತ ತಿರುಗಿಕೊಳ್ಳುತ್ತಿದ್ದರು; ನನ್ನಿಂದ ಗುಣಹೊಂದುತ್ತಿದ್ದರು.؆ ಯೆಶಾಯ 6:9-10