ದಾವೀದನು ತನ್ನ ಮನೆಗೆ ಹಿಂತಿರುಗಿದ ಬಳಿಕ ಪ್ರವಾದಿಯಾದ ನಾತಾನನಿಗೆ, “ನಾನು ದೇವದಾರು ಮರಗಳಿಂದ ಮಾಡಿದ ಮನೆಯಲ್ಲಿ ವಾಸಮಾಡುತ್ತಿರುವಾಗ ದೇವರ ಒಡಂಬಡಿಕೆಯ ಪೆಟ್ಟಿಗೆಯು ಗುಡಾರದೊಳಗೆ ಇಡಲ್ಪಟ್ಟಿದೆ. ದೇವರಿಗಾಗಿ ಒಂದು ಆಲಯವನ್ನು ಕಟ್ಟಬೇಕೆಂದಿರುವೆ” ಎಂದನು.
“ನನ್ನ ಸೇವಕನಾದ ದಾವೀದನಿಗೆ ಹೇಳು: ಸರ್ವಶಕ್ತನಾದ ದೇವರು ಹೀಗನ್ನುತ್ತಾನೆ: ‘ಕುರಿಗಳನ್ನು ಮೇಯಿಸುತ್ತಿದ್ದ ನಿನ್ನನ್ನು ನಾನು ಆರಿಸಿಕೊಂಡೆನು; ನನ್ನ ಜನರಾದ ಇಸ್ರೇಲರ ಮೇಲೆ ನಿನ್ನನ್ನು ಅರಸನನ್ನಾಗಿ ಮಾಡಿದೆನು.
ನೀನು ಹೋದಲ್ಲೆಲ್ಲಾ ನಿನ್ನೊಂದಿಗೆ ನಾನಿದ್ದೆನು; ನಿನ್ನ ಮುಂದೆ ಹೋಗಿ ನಿನ್ನ ವೈರಿಗಳನ್ನು ಸಾಯಿಸಿದೆನು. ಈಗ ನಾನು ನಿನ್ನನ್ನು ಲೋಕದಲ್ಲಿ ಎಲ್ಲರಿಗಿಂತಲೂ ಪ್ರಸಿದ್ಧಿ ಹೊಂದುವಂತೆ ಮಾಡುವೆನು.
ನಾನು ಈ ದೇಶವನ್ನು ನನ್ನ ಜನರಾದ ಇಸ್ರೇಲರಿಗೆ ಕೊಡುವೆನು; ಅವರು ಮರಗಳನ್ನು ನೆಟ್ಟು ಅದರ ನೆರಳಡಿಯಲ್ಲಿ ಸಮಾಧಾನದಿಂದ ವಾಸಿಸುವರು; ಅವರನ್ನು ಯಾರೂ ಬಾಧಿಸರು. ದುಷ್ಟರು ಮುಂಚಿನಂತೆ ಅವರಿಗೆ ಕೇಡುಮಾಡರು.
ನಾನು ಅವನಿಗೆ ತಂದೆಯಾಗಿರುವೆನು; ಅವನು ನನಗೆ ಮಗನಾಗಿರುವನು. ನಿನಗಿಂತ ಮುಂಚೆ ಸೌಲನು ರಾಜನಾಗಿದ್ದನು. ಆದರೆ ನಾನು ಅವನನ್ನು ತೆಗೆದು ಹಾಕಿದೆನು. ಆದರೆ ನನ್ನ ಕೃಪೆ ನಿನ್ನ ಮಗನಿಂದ ತೊಲಗಿ ಹೋಗುವದಿಲ್ಲ.
ಆಗ ದಾವೀದನು ಪವಿತ್ರಗುಡಾರಕ್ಕೆ ಹೋಗಿ ದೇವರ ಸನ್ನಿಧಿಯಲ್ಲಿ ಕುಳಿತುಕೊಂಡು, “ದೇವರಾದ ಯೆಹೋವನೇ, ನೀನು ನನ್ನನ್ನೂ ನನ್ನ ಕುಟುಂಬವನ್ನೂ ಎಷ್ಟೋ ಆಶೀರ್ವದಿಸಿರುವೆ. ನೀನು ಯಾಕೆ ಹೀಗೆ ಮಾಡಿದಿಯೊ ನನಗೆ ತಿಳಿಯುತ್ತಿಲ್ಲ.
ಇಸ್ರೇಲಿಗೆ ಸಮಾನವಾದ ಜನಾಂಗ ಭೂಲೋಕದಲ್ಲಿ ಎಲ್ಲಿದೆ? ನೀನು ಇಂಥ ಅದ್ಭುತಕಾರ್ಯಗಳನ್ನು ಮಾಡಿರುವುದು ಇಸ್ರೇಲ್ ಜನಾಂಗಕ್ಕಾಗಿಯೇ. ನೀನು ನಮ್ಮನ್ನು ಈಜಿಪ್ಟಿನಿಂದ ಹೊರತಂದು ಸ್ವತಂತ್ರರನ್ನಾಗಿ ಮಾಡಿದೆ. ಹೀಗೆ ನೀನು ನಿನ್ನ ಹೆಸರನ್ನು ಪ್ರಖ್ಯಾತಿಮಾಡಿದೆ. ನೀನು ನಿನ್ನ ಜನರ ಮುಂದೆ ಹೋಗುತ್ತಾ, ಅನ್ಯಜನರು ತಮ್ಮ ದೇಶವನ್ನು ಬಿಟ್ಟುಹೋಗುವಂತೆ ಮಾಡಿದೆ.
ನಿನ್ನ ವಾಗ್ದಾನವನ್ನು ನೆರವೇರಿಸು. ಆಗ ಜನರು, ‘ಸರ್ವಶಕ್ತನಾದ ಯೆಹೋವನು ಇಸ್ರೇಲರ ದೇವರೂ ರಕ್ಷಕನೂ ಆಗಿದ್ದಾನೆ’ ಎಂದು ಹೇಳುವರು. ನಾನು ನಿನ್ನ ಸೇವಕನಾಗಿದ್ದೇನೆ. ನನ್ನ ಕುಟುಂಬವು ಬಲಿಷ್ಠವಾಗಿದ್ದು ನಿನ್ನ ಸೇವೆಯನ್ನು ಮುಂದುವರಿಸುವಂತೆ ಕೃಪೆಯನ್ನು ಅನುಗ್ರಹಿಸು.
“ನನ್ನ ದೇವರೇ, ನಿನ್ನ ಸೇವಕನಾದ ನನ್ನೊಂದಿಗೆ ನೀನು ಮಾತನಾಡಿದೆ. ನೀನು ನನ್ನ ಕುಟುಂಬವನ್ನು ಸ್ಥಿರವಾಗಿ ಕಟ್ಟುವೆನೆಂದು ವಾಗ್ದಾನ ಮಾಡಿದೆ. ಆದುದರಿಂದ ನಾನು ಧೈರ್ಯದಿಂದ ನಿನ್ನ ಸಂಗಡ ಮಾತನಾಡುತ್ತಿದ್ದೇನೆ; ನಿನ್ನ ವಾಗ್ದಾನವನ್ನು ನೆರವೇರಿಸು ಎಂದು ಕೇಳಿಕೊಳ್ಳುತ್ತಿದ್ದೇನೆ.
ನನ್ನ ಸಂತತಿಯವರನ್ನು ಅಶೀರ್ವದಿಸಿ ನಿನ್ನ ಕರುಣೆಯನ್ನು ತೋರಿಸಿದೆ. ನನ್ನ ಸಂತತಿಯವರು ಸದಾಕಾಲ ನಿನ್ನ ಸೇವೆಮಾಡುತ್ತಾರೆಂದು ನೀನು ವಾಗ್ದಾನ ಮಾಡಿರುವೆ. ಯೆಹೋವನೇ, ನೀನಾಗಿಯೇ ನನ್ನ ಸಂತತಿಯವರನ್ನು ಆಶೀರ್ವದಿಸಿದ್ದರಿಂದ ನನ್ನ ಸಂತತಿಯವರು ಸದಾಕಾಲಕ್ಕೂ ಆಶೀರ್ವಾದ ಹೊಂದಿಕೊಳ್ಳುವರು!” ಎಂದು ಪ್ರಾರ್ಥಿಸಿದನು.