ಅನೇಕ ದೇಶಗಳಿಂದ ಜನರು ಅಲ್ಲಿಗೆ ಹೋಗುವರು. “ಬನ್ನಿರಿ, ನಾವು ಯೆಹೋವನ ಪರ್ವತಕ್ಕೆ ಹೋಗೋಣ, ಯಾಕೋಬನ ದೇವರ ಆಲಯಕ್ಕೆ ನಾವು ಹೋಗೋಣ. ಆಗ ದೇವರು ನಮಗೆ ಜೀವಿತದ ಮಾರ್ಗವನ್ನು ಕಲಿಸುವನು. ಮತ್ತು ನಾವು ಆತನನ್ನು ಅನುಸರಿಸುವೆವು” ಎಂದು ಹೇಳುವರು. ದೇವರ ಉಪದೇಶವು, ಆತನ ಸಂದೇಶವು ಚೀಯೋನ್ ಬೆಟ್ಟದಲ್ಲಿರುವ ಜೆರುಸಲೇಮಿನಲ್ಲಿ ಪ್ರಾರಂಭವಾಗಿ ಪ್ರಪಂಚದಲ್ಲೆಲ್ಲಾ ಹಬ್ಬುತ್ತದೆ.
ಆಗ ಪ್ರಪಂಚದ ಎಲ್ಲಾ ಜನಾಂಗಗಳಿಗೆ ಯೆಹೋವನೇ ನ್ಯಾಯಾಧೀಶನು. ದೂರದೇಶದಲ್ಲಿರುವ ಅನೇಕ ಜನರ ಜಗಳಗಳನ್ನು ಆತನು ನಿಲ್ಲಿಸುವನು. ಆ ಜನರು ಯುದ್ಧದ ಆಯುಧಗಳನ್ನು ಉಪಯೋಗಿಸುವದನ್ನು ನಿಲ್ಲಿಸುವರು. ತಮ್ಮ ಖಡ್ಗಗಳಿಂದ ನೇಗಿಲ ಗುಳಗಳನ್ನು ತಯಾರಿಸುವರು. ಭರ್ಜಿಗಳಿಂದ ಕುಡುಗೋಲುಗಳನ್ನು ತಯಾರಿಸುವರು. ಜನರೊಳಗೆ ಪರಸ್ಪರ ಯುದ್ಧ ಮಾಡುವದನ್ನು ನಿಲ್ಲಿಸುವರು. ಯುದ್ಧಕ್ಕೆ ತರಬೇತಿ ಎಂದಿಗೂ ಮಾಡರು.
ಪ್ರತಿಯೊಬ್ಬನೂ ತನ್ನ ದ್ರಾಕ್ಷಾಲತೆಯ ನೆರಳಿನಲ್ಲಿ ಕುಳಿತುಕೊಳ್ಳುವನು. ಅವರು ಅಂಜೂರದ ಮರದಡಿಯಲ್ಲಿ ವಿಶ್ರಾಂತಿಯಲ್ಲಿರುವರು. ಯಾರೂ ಅವರನ್ನು ಭಯಗೊಳಿಸುವದಿಲ್ಲ. ಯಾಕೆಂದರೆ ಸರ್ವಶಕ್ತನಾದ ಯೆಹೋವನು ಹೀಗೆ ಆಗುವದೆಂದು ಹೇಳಿದ್ದಾನೆ.
“ಆ ‘ಕುಂಟು’ ನಗರದ ಜನರೇ ಅಳಿದುಳಿದ ಜನರಾಗುವರು. ಆ ಪಟ್ಟಣದ ಜನರನ್ನು ಬಲವಂತದಿಂದ ಓಡಿಸಲಾಯಿತು. ಆದರೆ ನಾನು ಅವರನ್ನು ಬಲಶಾಲಿಯಾದ ಜನಾಂಗವನ್ನಾಗಿ ಮಾಡುವೆನು.” ಯೆಹೋವನು ಅವರ ಅರಸನಾಗುವನು. ಆತನು ಚೀಯೋನ್ ಪರ್ವತದಿಂದ ನಿತ್ಯಕಾಲಕ್ಕೂ ಆಳುವನು.
ಹಿಂಡುಗಳ ಗೋಪುರವೇ, ನಿನ್ನ ಸಮಯವು ಬರುವದು. ಚೀಯೋನಿನ ಒಫೆಲ್ ಗುಡ್ಡವೇ, ನಿನಗೆ ತಿರುಗಿ ಅಧಿಕಾರ ದೊರಕುವುದು. ಹೌದು, ಮೊದಲಿನಂತೆಯೇ ಜೆರುಸಲೇಮಿನಲ್ಲೇ ರಾಜ್ಯವಿರುವುದು. ಬಾಬಿಲೋನಿಗೆ ಇಸ್ರೇಲರು ಯಾಕೆ ಹೋಗಬೇಕು?
ಯಾಕೆ ನೀನು ಗಟ್ಟಿಯಾಗಿ ಅರಚಿಕೊಳ್ಳುವೆ? ನೀನು ನಿನ್ನ ನಾಯಕನನ್ನು ಕಳೆದುಕೊಂಡೆಯಾ? ನಿನ್ನ ರಾಜನು ನಿನ್ನನ್ನು ಬಿಟ್ಟುಹೋದನೋ? ಈ ಕಾರಣದಿಂದ ನೀನು ಪ್ರಸವವೇದನೆಯನ್ನು ಅನುಭವಿಸುವ ಸ್ತ್ರೀಯಂತೆ ಶ್ರಮೆಯನ್ನು ಅನುಭವಿಸುತ್ತಿರುವೆಯೋ?
ಚೀಯೋನ್ ಕುಮಾರಿಯೇ, ಪ್ರಸವವೇದನೆಯಲ್ಲಿರುವ ಸ್ತ್ರೀಯಂತೆ ನೀನು ನೋವನ್ನು ಅನುಭವಿಸು. ನೀನು ಜೆರುಸಲೇಮ್ ಪಟ್ಟಣದಿಂದ ಹೊರಗೆ ಹೋಗಿ ಹೊಲದಲ್ಲಿ ವಾಸಿಸುವೆ. ನಾನು ಹೇಳುವುದೇನೆಂದರೆ, ನೀನು ಬಾಬಿಲೋನಿಗೆ ಹೋಗುವೆ, ಆದರೆ ಅಲ್ಲಿ ನೀನು ರಕ್ಷಿಸಲ್ಪಡುವೆ. ಯೆಹೋವನು ಅಲ್ಲಿಗೆ ಬಂದು ನಿನ್ನನ್ನು ರಕ್ಷಿಸುವನು. ನಿನ್ನ ವೈರಿಗಳಿಂದ ನಿನ್ನನ್ನು ಬಿಡುಗಡೆ ಮಾಡುವನು.
ಅವರು ತಮ್ಮ ಯೋಜನೆಯನ್ನು ಹಾಕುತ್ತಾರೆ. ಆದರೆ ಯೆಹೋವನ ಯೋಜನೆಯೇನೆಂದು ಅವರು ಅರಿಯರು. ಯೆಹೋವನು ತನ್ನ ಜನರನ್ನು ಒಂದು ವಿಶೇಷ ಉದ್ದೇಶಕ್ಕಾಗಿ ಇಲ್ಲಿಗೆ ತಂದಿದ್ದಾನೆ. ಆ ಜನರು ಕಣಕ್ಕೆ ಹಾಕಿದ ಸಿವುಡುಗಳಂತೆ ನಜ್ಜುಗುಜ್ಜಾಗುವರು.
“ಚೀಯೋನ್ ಕುಮಾರಿಯೇ ಎದ್ದೇಳು, ಆ ಜನರನ್ನು ಪುಡಿಮಾಡು! ನಾನು ನಿನ್ನನ್ನು ಬಲಶಾಲಿಯನ್ನಾಗಿ ಮಾಡುವೆನು. ಕಬ್ಬಿಣದ ಕೊಂಬುಗಳಿರುವಂತೆ, ತಾಮ್ರದ ಗೊರಸುಗಳಿರುವಂತೆ ನಿನ್ನನ್ನು ಮಾಡುವೆನು. ಎಷ್ಟೋ ಜನರನ್ನು ನೀನು ತುಂಡುತುಂಡು ಮಾಡುವೆ. ಅವರ ಐಶ್ವರ್ಯವನ್ನು ನೀನು ಯೆಹೋವನಿಗೆ ಕೊಡುವೆ. ಅವರ ನಿಕ್ಷೇಪಗಳನ್ನು ಇಡೀ ಭೂಮಿಗೆ ಒಡೆಯನಾಗಿರುವ ಯೆಹೋವನಿಗೆ ಅರ್ಪಿಸುವಿ.”