1
|
ಹಾಚೋರಿನ ಅರಸನಾದ ಯಾಬೀನನು ನಡೆದ ಎಲ್ಲ ಸಂಗತಿಗಳ ಬಗ್ಗೆ ಕೇಳಿದನು. ಅದಕ್ಕಾಗಿ ಅವನು ಅನೇಕ ಅರಸರ ಸೈನ್ಯಗಳನ್ನು ಒಟ್ಟಿಗೆ ಸೇರಿಸುವ ನಿರ್ಧಾರವನ್ನು ಮಾಡಿದನು. ಮಾದೋನಿನ ಅರಸನಾದ ಯೋಬಾಬನಿಗೆ, ಶಿಮ್ರೋನಿನ ಅರಸನಿಗೆ, ಅಕ್ಷಾಫಿನ ಅರಸನಿಗೆ ಯಾಬೀನನು ಸಂದೇಶವನ್ನು ಕಳುಹಿಸಿದನು. |
2
|
ಉತ್ತರದಿಕ್ಕಿನ ಪರ್ವತ ಪ್ರದೇಶಗಳಲ್ಲಿನ ಮತ್ತು ಅರಣ್ಯದಲ್ಲಿನ ಅರಸರಿಗೂ ಕಿನ್ನೆರೋತ್, ನೆಗೆವ್ ಮತ್ತು ಪಶ್ಚಿಮದ ಇಳಿಜಾರಿನ ಪ್ರದೇಶದ ಅರಸರಿಗೂ ಪಶ್ಚಿಮದಿಕ್ಕಿನ ನೆಫತ್ದೋರ್ ರಾಜನಿಗೂ ಯಾಬೀನನು ಸಂದೇಶವನ್ನು ಕಳುಹಿಸಿದನು. |
3
|
ಯಾಬೀನನು ಪೂರ್ವ ಮತ್ತು ಪಶ್ಚಿಮದಲ್ಲಿದ್ದ ಕಾನಾನಿನ ಅರಸರಿಗೂ ಅಮೋರಿಯರಿಗೂ ಹಿತ್ತಿಯರಿಗೂ ಪೆರಿಜ್ಜೀಯರಿಗೂ ಬೆಟ್ಟಪ್ರದೇಶದ ಯೆಬೂಸಿಯರಿಗೂ ಹೆರ್ಮೋನ್ ಪರ್ವತದ ಬುಡದಲ್ಲಿ ಮಿಚ್ಛಾದ ಹತ್ತಿರ ವಾಸವಾಗಿದ್ದ ಹಿವ್ವಿಯರಿಗೂ ಸಂದೇಶವನ್ನು ಕಳುಹಿಸಿದನು. |
4
|
ಹೀಗಾಗಿ ಈ ಎಲ್ಲ ಅರಸರ ಸೈನ್ಯಗಳು ಒಟ್ಟುಗೂಡಿದವು. ಈ ಮಹಾಸೈನ್ಯದಲ್ಲಿ ಅಸಂಖ್ಯಾತ ಯೋಧರಿದ್ದರು, ಕುದುರೆಗಳಿದ್ದವು ಮತ್ತು ರಥಗಳಿದ್ದವು. ಸಮುದ್ರತೀರದ ಮರಳು ಕಣಗಳಷ್ಟೇ ಅಸಂಖ್ಯಾತ ಯೋಧರು ಆ ಸೈನ್ಯದಲ್ಲಿರುವಂತೆ ಕಾಣುತ್ತಿತ್ತು. |
5
|
ಈ ಎಲ್ಲ ಅರಸರು ಮೇರೋಮ್ ಸಣ್ಣ ನದಿಯ ಹತ್ತಿರ ಒಟ್ಟುಗೂಡಿ ತಮ್ಮ ಸೈನ್ಯಗಳನ್ನು ಒಂದೇ ಪಾಳೆಯದಲ್ಲಿ ಸೇರಿಸಿದರು. ಅವರು ಇಸ್ರೇಲಿನ ವಿರುದ್ಧ ಯುದ್ಧ ಮಾಡಲು ಯೋಜನೆಗಳನ್ನು ಮಾಡಿದರು. |
6
|
ಆಗ ಯೆಹೋವನು ಯೆಹೋಶುವನಿಗೆ, “ಆ ಸೈನ್ಯಕ್ಕೆ ನೀನು ಹೆದರಬೇಡ; ನೀವು ಅವರನ್ನು ಸೋಲಿಸುವಂತೆ ನಾನು ಮಾಡುತ್ತೇನೆ. ನಾಳೆ ಇಷ್ಟು ಹೊತ್ತಿಗೆ ನೀವು ಅವರೆಲ್ಲರನ್ನು ಕೊಂದುಬಿಡುವಿರಿ. ನೀವು ಅವರ ಕುದುರೆಗಳ ಕಾಲುಗಳನ್ನು ಕತ್ತರಿಸುವಿರಿ; ಅವರ ರಥಗಳನ್ನು ಸುಟ್ಟುಹಾಕುವಿರಿ” ಎಂದನು. |
7
|
ಯೆಹೋಶುವನು ಮತ್ತು ಅವನ ಎಲ್ಲ ಸೈನಿಕರು ಶತ್ರುಗಳನ್ನು ಬೆರಗುಗೊಳಿಸಿದರು. ಮೇರೋಮ್ ನದಿಯ ಬಳಿಯಲ್ಲಿ ಅವರು ಶತ್ರುಗಳ ಮೇಲೆ ಧಾಳಿಮಾಡಿದರು. |
8
|
ಇಸ್ರೇಲರು ಶತ್ರುಗಳನ್ನು ಸೋಲಿಸುವಂತೆ ಯೆಹೋವನು ಮಾಡಿದನು. ಇಸ್ರೇಲರ ಸೈನ್ಯವು ಶತ್ರುಗಳನ್ನು ಸೋಲಿಸಿ ಅವರನ್ನು ದೊಡ್ಡ ಚೀದೋನ್ ಮತ್ತು ಮಿಸ್ರೆಪೋತ್ಮಯಿಮ್ವರೆಗೂ ಪೂರ್ವದಿಕ್ಕಿನಲ್ಲಿ ಮಿಚ್ಛೆಯ ಕಣಿವೆಯವರೆಗೂ ಬೆನ್ನಟ್ಟಿತು. ಶತ್ರುಗಳಲ್ಲಿ ಯಾರೂ ಉಳಿದುಕೊಳ್ಳದಂತೆ ಇಸ್ರೇಲರು ಯುದ್ಧಮಾಡಿದರು. |
9
|
ಯೆಹೋವನು ಹೇಳಿದಂತೆಯೇ ಯೆಹೋಶುವನು ಮಾಡಿದನು. ಯೆಹೋಶುವನು ಅವರ ಕುದುರೆಯ ಕಾಲುಗಳನ್ನು ಕತ್ತರಿಸಿದನು; ಅವರ ರಥಗಳನ್ನು ಸುಟ್ಟುಹಾಕಿದನು. |
10
|
ಯೆಹೋಶುವನು ಹಿಂದಿರುಗಿ ಹೋಗಿ ಹಾಚೋರನ್ನು ಸ್ವಾಧೀನಪಡಿಸಿಕೊಂಡನು. ಯೆಹೋಶುವನು ಹಾಚೋರಿನ ಅರಸನನ್ನು ಕೊಂದನು. (ಹಾಚೋರ್ ಇಸ್ರೇಲಿನ ವಿರುದ್ಧ ಹೋರಾಡಿದ ಎಲ್ಲ ರಾಜ್ಯಗಳಿಗೆ ಮುಂದಾಳಾಗಿತ್ತು.) |
11
|
ಇಸ್ರೇಲಿನ ಸೈನಿಕರು ಆ ಪಟ್ಟಣದಲ್ಲಿದ್ದವರನ್ನೆಲ್ಲಾ ಕೊಂದುಬಿಟ್ಟರು; ಒಬ್ಬರನ್ನೂ ಜೀವಂತವಾಗಿ ಅಲ್ಲಿ ಉಳಿಸಲಿಲ್ಲ. ಆಮೇಲೆ ಅವರು ಆ ಪಟ್ಟಣವನ್ನು ಸುಟ್ಟುಬಿಟ್ಟರು. |
12
|
ಯೆಹೋಶುವನು ಈ ಎಲ್ಲ ಪಟ್ಟಣಗಳನ್ನು ವಶಪಡಿಸಿಕೊಂಡನು; ಅವುಗಳ ಎಲ್ಲ ಅರಸರನ್ನು ಕೊಂದುಹಾಕಿದನು; ಈ ಪಟ್ಟಣಗಳಲ್ಲಿದ್ದ ಎಲ್ಲವನ್ನು ನಾಶಮಾಡಿದನು. ಯೆಹೋವನ ಸೇವಕನಾದ ಮೋಶೆಯು ಆಜ್ಞಾಪಿಸಿದಂತೆಯೇ ಅವನು ಮಾಡಿದನು. |
13
|
ಆದರೆ ಇಸ್ರೇಲಿನ ಸೈನಿಕರು ಬೆಟ್ಟಗಳ ಮೇಲೆ ಕಟ್ಟಲಾದ ಯಾವ ಪಟ್ಟಣವನ್ನೂ ಸುಡಲಿಲ್ಲ. ಬೆಟ್ಟಗಳ ಮೇಲೆ ಕಟ್ಟಿದ ಪಟ್ಟಣಗಳಲ್ಲಿ ಅವರು ಸುಟ್ಟ ಒಂದೇ ಒಂದು ಪಟ್ಟಣವೆಂದರೆ ಹಾಚೋರ್. ಈ ಪಟ್ಟಣವನ್ನು ಯೆಹೋಶುವನು ಸುಟ್ಟನು. |
14
|
ಆ ಪಟ್ಟಣಗಳಲ್ಲಿ ಸಿಕ್ಕಿದ ಎಲ್ಲ ಪದಾರ್ಥಗಳನ್ನು ಮತ್ತು ಎಲ್ಲ ಪಶುಗಳನ್ನು ಇಸ್ರೇಲರು ತಮಗಾಗಿ ಇಟ್ಟುಕೊಂಡರು. ಆದರೆ ಅಲ್ಲಿದ್ದ ಜನರನ್ನೆಲ್ಲ ಕೊಂದರು. ಅವರಲ್ಲಿ ಯಾರನ್ನೂ ಸಜೀವವಾಗಿ ಉಳಿಸಲಿಲ್ಲ. |
15
|
ಹೀಗೆ ಮಾಡಬೇಕೆಂದು ಯೆಹೋವನು ತನ್ನ ಸೇವಕನಾದ ಮೋಶೆಗೆ ಬಹುಕಾಲದ ಹಿಂದೆಯೇ ಹೇಳಿದ್ದನು. ಮೋಶೆಯು ಈ ಕಾರ್ಯವನ್ನು ಮಾಡಲು ಯೆಹೋಶುವನಿಗೆ ಆಜ್ಞಾಪಿಸಿದ್ದನು. ಹೀಗೆ ಯೆಹೋಶುವನು ದೇವರ ಆಜ್ಞೆಯನ್ನು ಪಾಲಿಸಿದನು. ಯೆಹೋವನು ಮೋಶೆಗೆ ಆಜ್ಞಾಪಿಸಿದ್ದೆಲ್ಲವನ್ನು ಯೆಹೋಶುವನು ಮಾಡಿದನು. |
16
|
ಹೀಗೆ ಯೆಹೋಶುವನು ಆ ದೇಶದ ಎಲ್ಲರನ್ನು ಸೋಲಿಸಿದನು. ಬೆಟ್ಟದ ಮೇಲಿನ ಪ್ರದೇಶ, ನೆಗೆವ್ ಪ್ರದೇಶ, ಗೋಷೆನಿನ ಎಲ್ಲ ಪ್ರದೇಶ, ಪಶ್ಚಿಮದ ಇಳಕಲಿನ ಪ್ರದೇಶ, ಜೋರ್ಡನಿನ ಕಣಿವೆ, ಇಸ್ರೇಲಿನ ಪರ್ವತ ಪ್ರದೇಶ ಮತ್ತು ಅವುಗಳ ಹತ್ತಿರದ ಎಲ್ಲ ಬೆಟ್ಟಗಳ ಪ್ರದೇಶ ಅವನ ಸ್ವಾಧೀನಕ್ಕೆ ಬಂದವು. |
17
|
ಸೇಯೀರಿನ ಹತ್ತಿರವಿರುವ ಹಾಲಾಕ್ ಬೆಟ್ಟದಿಂದ ಹೆರ್ಮೋನ್ ಬೆಟ್ಟದ ಬುಡದಲ್ಲಿ ಲೆಬನೋನ್ ಕಣಿವೆಯಲ್ಲಿರುವ ಬಾಲ್ಗಾದ್ ಪಟ್ಟಣದವರೆಗೂ ಇರುವ ಭೂಮಿಯು ಅವನ ಸ್ವಾಧೀನವಾಯಿತು. ಯೆಹೋಶುವನು ಆ ಪ್ರದೇಶದ ಎಲ್ಲ ಅರಸರನ್ನು ಸೆರೆಹಿಡಿದು ಕೊಂದುಹಾಕಿದನು. |
18
|
ಯೆಹೋಶುವನು ಆ ಅರಸರ ವಿರುದ್ಧ ಬಹುಕಾಲದವರೆಗೆ ಹೋರಾಡಿದನು. |
19
|
ಆ ಪ್ರದೇಶದಲ್ಲಿ ಕೇವಲ ಒಂದು ಪಟ್ಟಣ ಮಾತ್ರ ಇಸ್ರೇಲರೊಂದಿಗೆ ಶಾಂತಿ ಒಪ್ಪಂದ ಮಾಡಿಕೊಂಡಿತ್ತು. ಅದೇ ಹಿವ್ವಿಯರ ಗಿಬ್ಯೋನ್ ಪಟ್ಟಣ. ಉಳಿದೆಲ್ಲ ಪಟ್ಟಣಗಳು ಯುದ್ಧದಲ್ಲಿ ಸೋತುಹೋಗಿದ್ದವು. |
20
|
ತಾವು ಶಕ್ತಿಶಾಲಿಗಳೆಂಬ ಭಾವನೆಯನ್ನು ಯೆಹೋವನು ಆ ಜನರಲ್ಲಿ ಹುಟ್ಟಿಸಿ ಅವರನ್ನು ಇಸ್ರೇಲರ ಮೇಲೆ ಯುದ್ಧಕ್ಕೆ ಬರಮಾಡಿದನು. ಯುದ್ಧದಲ್ಲಿ ಕರುಣೆಯಿಲ್ಲದೆ ಅವರನ್ನು ಸಂಹರಿಸಬೇಕೆಂಬುದು ಯೆಹೋವನ ಯೋಜನೆಯಾಗಿತ್ತು. ಯೆಹೋವನು ಮೋಶೆಗೆ ಹೇಳಿದ ರೀತಿಯಲ್ಲಿ ಯೆಹೋಶುವನು ಆ ಪಟ್ಟಣಗಳನ್ನು ನಾಶಮಾಡಲು ಇದರಿಂದ ಸಾಧ್ಯವಾಯಿತು. |
21
|
ಆಗ ಅನಾಕ ವಂಶಸ್ಥರು ಹೆಬ್ರೋನ್, ದೆಬೀರ್, ಅನಾಬ್ ಮತ್ತು ಯೆಹೂದ ಬೆಟ್ಟಪ್ರದೇಶಗಳಲ್ಲಿ ವಾಸವಾಗಿದ್ದರು. ಯೆಹೋಶುವನು ಈ ಅನಾಕ ವಂಶಸ್ಥರೊಂದಿಗೆ ಯುದ್ಧ ಮಾಡಿದನು. ಯೆಹೋಶುವನು ಆ ಎಲ್ಲ ಜನರನ್ನು ಮತ್ತು ಊರುಗಳನ್ನು ನಾಶಪಡಿಸಿದನು. |
22
|
ಇಸ್ರೇಲಿನ ಪ್ರದೇಶದಲ್ಲಿ ಅನಾಕ ವಂಶಸ್ಥರಲ್ಲಿ ಯಾರೂ ಉಳಿಯಲಿಲ್ಲ. ಜೀವಸಹಿತ ಉಳಿದ ಅನಾಕ ವಂಶಸ್ಥರು ಕೇವಲ ಗಾಜಾ, ಗತೂರು, ಅಷ್ಡೋದ್ ಎಂಬಲ್ಲಿ ಮಾತ್ರ ಇದ್ದರು. |
23
|
ಬಹಳ ಹಿಂದೆಯೇ ಯೆಹೋವನು ಮೋಶೆಗೆ ಹೇಳಿದ ಪ್ರಕಾರ ಯೆಹೋಶುವನು ಇಸ್ರೇಲಿನ ಪ್ರದೇಶವನ್ನೆಲ್ಲ ಸ್ವಾಧೀನಪಡಿಸಿಕೊಂಡನು. ಯೆಹೋವನು ತಾನು ವಾಗ್ದಾನ ಮಾಡಿದಂತೆ ಆ ಪ್ರದೇಶವನ್ನು ಇಸ್ರೇಲರಿಗೆ ಕೊಟ್ಟುಬಿಟ್ಟನು. ಆಗ ಯೆಹೋಶುವನು ಆ ಪ್ರದೇಶವನ್ನು ಕುಲಗಳ ಪ್ರಕಾರ ಹಂಚಿಕೊಟ್ಟನು. ಆಗ ಯುದ್ಧವು ಮುಗಿಯಿತು, ಕೊನೆಗೆ ಆ ಪ್ರದೇಶದಲ್ಲಿ ಶಾಂತಿ ನೆಲೆಸಿತು. |
Joshua 11:22 Kannada Language Bible Words basic statistical display
COMING SOON ...