Bible Languages

Indian Language Bible Word Collections

Bible Versions

Books

2 Kings Chapters

2 Kings 18 Verses

Bible Versions

Books

2 Kings Chapters

2 Kings 18 Verses

1 ಅಹಾಜನ ಮಗನಾದ ಹಿಜ್ಕೀಯನು ಯೆಹೂದದ ರಾಜನಾದನು. ಏಲನ ಮಗನಾದ ಹೋಶೇಯನು ಇಸ್ರೇಲಿನ ರಾಜನಾಗಿದ್ದ ಮೂರನೆಯ ವರ್ಷದಲ್ಲಿ ಹಿಜ್ಕೀಯನು ಆಳಲಾರಂಭಿಸಿದನು.
2 ಹಿಜ್ಕೀಯನು ಆಳಲಾರಂಭಿಸಿದಾಗ ಅವನಿಗೆ ಇಪ್ಪತ್ತೊಂಭತ್ತು ವರ್ಷ ವಯಸ್ಸಾಗಿತ್ತು. ಹಿಜ್ಕೀಯನು ಜೆರುಸಲೇಮಿನಲ್ಲಿ ಇಪ್ಪತ್ತೈದು ವರ್ಷ ಆಳಿದನು. ಜೆಕರ್ಯನ ಮಗಳಾದ ಅಬೀ ಎಂಬ ಹೆಸರಿನವಳು ಅವನ ತಾಯಿ.
3 ಹಿಜ್ಕೀಯನು ತನ್ನ ಪೂರ್ವಿಕನಾದ ದಾವೀದನಂತೆ, ಯೆಹೋವನು ಯೋಗ್ಯವೆಂದು ಹೇಳಿದ್ದನ್ನು ಮಾಡಿದನು.
4 ಹಿಜ್ಕೀಯನು ಉನ್ನತಸ್ಥಳಗಳನ್ನು ನಾಶಗೊಳಿಸಿದನು. ಅವನು ಸ್ಮಾರಕಕಲ್ಲುಗಳನ್ನು ಒಡೆದುಹಾಕಿದನು ಮತ್ತು ಅಶೇರ ಕಲ್ಲುಗಳನ್ನು ಕತ್ತರಿಸಿಹಾಕಿದನು. ಆ ಸಮಯದಲ್ಲಿ ಇಸ್ರೇಲರು ಮೋಶೆಯು ಮಾಡಿದ ತಾಮ್ರಸರ್ಪಕ್ಕೆ ಧೂಪವನ್ನು ಸುಡುತ್ತಿದ್ದರು. ಈ ತಾಮ್ರಸರ್ಪವನ್ನು ‘ನೆಹುಷ್ಟಾನ್’ ಎಂದು ಕರೆಯುತ್ತಿದ್ದರು. ಜನರು ಈ ಸರ್ಪವನ್ನು ಆರಾಧಿಸುತ್ತಿದ್ದುದರಿಂದ ಹಿಜ್ಕೀಯನು ಈ ತಾಮ್ರಸರ್ಪವನ್ನು ಒಡೆದು ಚೂರುಚೂರು ಮಾಡಿದನು.
5 ಹಿಜ್ಕೀಯನು ಇಸ್ರೇಲಿನ ದೇವರಾದ ಯೆಹೋವನಲ್ಲಿ ನಂಬಿಕೆಯಿಟ್ಟನು. ಯೆಹೂದದ ರಾಜರುಗಳಲ್ಲೆಲ್ಲಾ ಹಿಜ್ಕೀಯನಂಥವರು ಅವನ ಮುಂಚೆಯಾಗಲಿ ಅವನ ನಂತರವಾಗಲಿ ಇರಲಿಲ್ಲ.
6 ಹಿಜ್ಕೀಯನು ಯೆಹೋವನಿಗೆ ಬಹಳ ನಂಬಿಕೆಯುಳ್ಳವನಾಗಿದ್ದನು. ಅವನು ಯೆಹೋವನನ್ನು ಅನುಸರಿಸುವುದನ್ನು ನಿಲ್ಲಿಸಲೇ ಇಲ್ಲ. ಯೆಹೋವನು ಮೋಶೆಗೆ ನೀಡಿದ ಆಜ್ಞೆಗಳಿಗೆ ಅವನು ವಿಧೇಯನಾಗಿ ಅನುಸರಿಸಿದನು.
7 ಯೆಹೋವನು ಹಿಜ್ಕೀಯನೊಂದಿಗಿದ್ದನು. ಹಿಜ್ಕೀಯನು ತಾನು ಮಾಡಿದ್ದರಲ್ಲೆಲ್ಲಾ ಜಯಗಳಿಸಿದನು. ಹಿಜ್ಕೀಯನು ಅಶ್ಶೂರದ ರಾಜನೊಂದಿಗಿದ್ದ ಸಂಬಂಧವನ್ನು ಕಡಿದುಹಾಕಿದನು. ಅಶ್ಶೂರದ ರಾಜನ ಸೇವೆಯನ್ನು ಹಿಜ್ಕೀಯನು ನಿಲ್ಲಿಸಿದನು.
8 ಹಿಜ್ಕೀಯನು ಗಾಜಾ ಪ್ರಾಂತ್ಯದವರೆಗಿದ್ದ ಮತ್ತು ಅದರ ಸುತ್ತಲಿನ ಪ್ರದೇಶದಲ್ಲಿದ್ದ ಫಿಲಿಷ್ಟಿಯರನ್ನು ಸೋಲಿಸಿದನು. ಅವನು ಫಿಲಿಷ್ಟಿಯರ ಚಿಕ್ಕ ಊರಿನಿಂದಿಡಿದು ದೊಡ್ಡ ನಗರಗಳನ್ನೆಲ್ಲಾ ಸೋಲಿಸಿದನು.
9 ಅಶ್ಶೂರದ ರಾಜನಾದ ಶಲ್ಮನೆಸರನು ಸಮಾರ್ಯದ ವಿರುದ್ಧ ಹೋರಾಡಲು ಹೋದನು. ಅವನ ಸೈನ್ಯವು ನಗರವನ್ನು ಸುತ್ತುವರಿಯಿತು. ಹಿಜ್ಕೀಯನು ಯೆಹೂದದ ರಾಜನಾಗಿದ್ದ ನಾಲ್ಕನೆಯ ವರ್ಷದಲ್ಲಿ ಇದು ಸಂಭವಿಸಿತು. (ಅದು ಏಲನ ಮಗನಾದ ಹೋಶೇಯನು ಇಸ್ರೇಲಿನ ರಾಜನಾಗಿ ಆಳುತ್ತಿದ್ದ ಏಳನೆಯ ವರ್ಷದಲ್ಲಿ ಸಂಭವಿಸಿತು.)
10 ಮೂರು ವರ್ಷಗಳ ಕೊನೆಯಲ್ಲಿ ಶಲ್ಮನೆಸರನು ಸಮಾರ್ಯವನ್ನು ವಶಪಡಿಸಿಕೊಂಡನು. ಹಿಜ್ಕೀಯನು ಯೆಹೂದದ ರಾಜನಾಗಿದ್ದ ಆರನೆಯ ವರ್ಷದಲ್ಲಿ ಅವನು ಸಮಾರ್ಯವನ್ನು ವಶಪಡಿಸಿಕೊಂಡನು. (ಹೋಶೇಯನು ಇಸ್ರೇಲಿನ ರಾಜನಾಗಿ ಆಳುತ್ತಿದ್ದ ಒಂಭತ್ತನೆಯ ವರ್ಷದಲ್ಲಿ ಇದು ಸಂಭವಿಸಿತು.)
11 ಅಶ್ಶೂರದ ರಾಜನು ಇಸ್ರೇಲರನ್ನು, ಸೆರೆಯಾಳುಗಳನ್ನಾಗಿ ಅಶ್ಶೂರಿಗೆ ಒಯ್ದನು. ಅವನು ಅವರನ್ನು ಹಲಹು ಪ್ರಾಂತದಲ್ಲಿಯೂ ಹಾಬೋರ್ ಹೊಳೆಯಿರುವ ಗೋಜಾನ್ ಪ್ರಾಂತದಲ್ಲಿಯೂ ಮೇದ್ಯರ ನಗರಗಳಲ್ಲಿಯೂ ವಾಸಿಸುವಂತೆ ಮಾಡಿದನು.
12 ಇಸ್ರೇಲರು ತಮ್ಮ ದೇವರಾದ ಯೆಹೋವನಿಗೆ ಅವಿಧೇಯರಾದದ್ದೂ ಆತನ ಒಡಂಬಡಿಕೆಯನ್ನು ಉಲ್ಲಂಘಿಸಿದ್ದೂ ಆತನ ಸೇವಕನಾದ ಮೋಶೆಯ ಆಜ್ಞೆಗಳಿಗೆ ಅವಿಧೇಯರಾದದ್ದೂ ಇದಕ್ಕೆ ಕಾರಣ.
13 ಹಿಜ್ಕೀಯನು ರಾಜನಾಗಿದ್ದ ಹದಿನಾಲ್ಕನೆಯ ವರ್ಷದಲ್ಲಿ ಅಶ್ಶೂರದ ರಾಜನಾದ ಸನ್ಹೇರೀಬನು ಯೆಹೂದದ ಬಲಾಢ್ಯ ನಗರಗಳ ವಿರುದ್ಧವಾಗಿ ಹೋರಾಡಲು ಹೋದನು. ಸನ್ಹೇರೀಬನು ಆ ನಗರಗಳನ್ನೆಲ್ಲ ಸೋಲಿಸಿದನು.
14 ಆಗ ಯೆಹೂದದ ರಾಜನಾದ ಹಿಜ್ಕೀಯನು ಲಾಕೀಷಿನಲ್ಲಿದ್ದ ಅಶ್ಶೂರದ ರಾಜನಿಗೆ ಒಂದು ಸಂದೇಶವನ್ನು ಕಳುಹಿಸಿದನು. ಹಿಜ್ಕೀಯನು, “ನಾನು ತಪ್ಪು ಮಾಡಿದ್ದೇನೆ. ನನ್ನನ್ನು ಒಬ್ಬಂಟಿಗನನ್ನಾಗಿ ಬಿಡು. ನಂತರ ನೀನು ಅಪೇಕ್ಷಿಸಿದ್ದನ್ನೆಲ್ಲಾ ಕೊಡುತ್ತೇನೆ” ಎಂದು ಹೇಳಿದನು. ಆಗ ಅಶ್ಶೂರದ ರಾಜನು ಯೆಹೂದದ ರಾಜನಾದ ಹಿಜ್ಕೀಯನಿಗೆ ಸುಮಾರು ಹನ್ನೊಂದು ಟನ್ ಬೆಳ್ಳಿಯನ್ನು ಮತ್ತು ಒಂದು ಟನ್ ಚಿನ್ನವನ್ನು ಕೊಡುವಂತೆ ಹೇಳಿದನು.
15 ಹಿಜ್ಕೀಯನು ದೇವಾಲಯದಲ್ಲಿದ್ದ ಮತ್ತು ರಾಜನ ಭಂಡಾರದಲ್ಲಿದ್ದ ಬೆಳ್ಳಿಯನ್ನೆಲ್ಲ ನೀಡಿದನು.
16 ಈ ಸಮಯದಲ್ಲಿ, ಹಿಜ್ಕೀಯನು ಯೆಹೋವನ ಆಲಯದ ಬಾಗಿಲುಗಳಿಗೆ ಮತ್ತು ಕದಗಳಿಗೆ ಹೊದಿಸಿದ್ದ ಬಂಗಾರವನ್ನು ಕತ್ತರಿಸಿಹಾಕಿದನು. ರಾಜನಾದ ಹಿಜ್ಕೀಯನು ಈ ಬಾಗಿಲುಗಳ ಮತ್ತು ಕದಗಳ ಮೇಲೆ ಬಂಗಾರವನ್ನು ಹೊದಿಸಿದ್ದನು. ಹಿಜ್ಕೀಯನು ಈ ಬಂಗಾರವನ್ನು ಅಶ್ಶೂರದ ರಾಜನಿಗೆ ನೀಡಿದನು.
17 ಅಶ್ಶೂರದ ರಾಜ ಜೆರುಸಲೇಮಿನಲ್ಲಿದ್ದ ರಾಜನಾದ ಹಿಜ್ಕೀಯನ ಬಳಿಗೆ ತನ್ನ ಮೂವರು ಮಹಾಸೇನಾಧಿಪತಿಗಳಾದ ತರ್ತಾನ್, ರಬ್ಸಾರೀಸ್, ರಬ್ಷಾಕೆ ಎಂಬವರನ್ನು ಮಹಾಸೈನ್ಯದೊಂದಿಗೆ ಕಳುಹಿಸಿದನು. ಅವರು ಲಾಕೀಷಿನಿಂದ ಜೆರುಸಲೇಮಿಗೆ ಹೋದರು. ಅವರು ಮೇಲಿನ ಕೆರೆಯ ನೀರಿನ ಕೊಳವೆಯ ಬಳಿ ನಿಂತರು. (ಮೇಲಿನ ಕೆರೆಯು ರಸ್ತೆಯ ಮೇಲೆ ದೋಭಿಘಾಟ್ ಬಳಿಯಿತ್ತು.)
18 ಈ ಜನರು ರಾಜನನ್ನು ಕರೆದರು. ಹಿಲ್ಕೀಯನ ಮಗನೂ ರಾಜಗೃಹಾಧಿಪತಿಯೂ ಅದ ಎಲ್ಯಾಕೀಮ್, ಕಾರ್ಯದರ್ಶಿಯಾದ ಶೆಬ್ನ, ಆಸಾಫನ ಮಗನೂ ಮಂತ್ರಿಯೂ ಆಗಿದ್ದ ಯೋವ ಅವರನ್ನು ಭೇಟಿಮಾಡಲು ಹೊರಗೆ ಬಂದರು.
19 ಸೇನಾಧಿಪತಿಗಳಲ್ಲಿ ಒಬ್ಬನಾದ ರಬ್ಷಾಕೆಯು ಅವರಿಗೆ, “ಅಶ್ಶೂರದ ಮಹಾರಾಜನು ಹಿಜ್ಕೀಯನಿಗೆ ತಿಳಿಸುವುದೇನಂದರೆ: ನಿನ್ನ ನಂಬಿಕೆಗೆ ಆಧಾರವು ಎಲ್ಲಿದೆ?
20 ‘ಯುದ್ಧದಲ್ಲಿ ನನಗೆ ಸಹಾಯಮಾಡಲು ನನ್ನಲ್ಲಿ ಬೇಕಾದಷ್ಟು ವಿವೇಕವೂ ಬಲವೂ ಇದೆ’ ಎಂದು ನೀನು ಹೇಳುವೆ. ಆದರೆ ನೀನು ಯಾರನ್ನು ನಂಬಿಕೊಂಡು ನನಗೆ ವಿರುದ್ಧವಾಗಿ ದಂಗೆ ಎದ್ದಿರುವೆ?
21 ನೀನು ಮುರಿದುಬಿದ್ದಿರುವ ದಂಟನ್ನು ಊರುಗೋಲೆಂದು ನಂಬಿ ಭರವಸೆಯಿಟ್ಟಿರುವೆ! ಈಜಿಪ್ಟ್ ಊರುಗೋಲಾಗಿದೆ. ಒಬ್ಬ ಮನುಷ್ಯನು ಈ ಊರುಗೋಲಿನ ಮೇಲೆ ಭರವಸೆಯಿಟ್ಟರೆ ಅದು ಮುರಿದು ಬೀಳುತ್ತದೆ ಮತ್ತು ಅವನ ಕೈಯನ್ನೇ ಚುಚ್ಚಿ ಅವನಿಗೆ ನೋವನ್ನು ಉಂಟುಮಾಡುತ್ತದೆ! ಈಜಿಪ್ಟಿನ ರಾಜನು ತನ್ನನ್ನು ನಂಬಿದ ಜನರೆಲ್ಲರಿಗೂ ಇದೇ ರೀತಿಯಲ್ಲಿದ್ದಾನೆ.
22 ಬಹುಶಃ ನೀನು, “ನಾವು ನಮ್ಮ ದೇವರಾದ ಯೆಹೋವನಲ್ಲಿ ಭರವಸೆಯಿಟ್ಟಿದ್ದೇವೆ” ಎಂದು ಹೇಳುವೆ. ಆದರೆ ಹಿಜ್ಕೀಯನು ಯೆಹೋವನ ಉನ್ನತ ಸ್ಥಳಗಳನ್ನು ಮತ್ತು ಯಜ್ಞವೇದಿಕೆಯನ್ನು ನಾಶಪಡಿಸಿ ಯೆಹೂದಕ್ಕೆ ಮತ್ತು ಜೆರುಸಲೇಮಿಗೆ, “ನೀವು ಜೆರುಸಲೇಮಿನಲ್ಲಿರುವ ಯಜ್ಞವೇದಿಕೆಯ ಸನ್ನಿಧಿಯಲ್ಲಿ ಮಾತ್ರ ಆರಾಧಿಸಬೇಕು” ಎಂದು ಹೇಳಿದನೆಂಬುದು ನನಗೆ ತಿಳಿದಿದೆ.
23 ಈಗ ನಮ್ಮ ಒಡೆಯನಾದ ಅಶ್ಶೂರದ ರಾಜನೊಂದಿಗೆ ಈ ಒಡಂಬಡಿಕೆಯನ್ನು ಮಾಡಿಕೊ. ನಿನ್ನಲ್ಲಿ ಸವಾರಿಮಾಡಬಲ್ಲ ಸವಾರರು ಇದ್ದರೆ ನಿನಗೆ ಎರಡು ಸಾವಿರ ಕುದುರೆಗಳನ್ನು ಕೊಡುತ್ತೇನೆಂದು ನಾನು ಪ್ರಮಾಣ ಮಾಡುತ್ತೇನೆ.
24 ನನ್ನ ಒಡೆಯನ ಅಧಿಕಾರಿಗಳಲ್ಲಿ ಕನಿಷ್ಠನಾದ ಒಬ್ಬ ಅಧಿಕಾರಿಯನ್ನು ನೀನು ಸೋಲಿಸಲಾಗುವುದಿಲ್ಲ! ನಿನಗೆ ರಥಗಳನ್ನು ಮತ್ತು ಕುದುರೆಯ ಸವಾರರನ್ನು ಕೊಡಲು ನೀನು ಈಜಿಪ್ಟನ್ನು ಅವಲಂಬಿಸಿರುವೆ.
25 ನಾನು ಯೆಹೋವನ ಚಿತ್ತವಿಲ್ಲದೆ ಜೆರುಸಲೇಮನ್ನು ನಾಶಗೊಳಿಸಲು ಬಂದೆನೆಂದು ನೆನಸುತ್ತೀಯೋ? “ಈ ದೇಶದ ವಿರುದ್ಧವಾಗಿ ನುಗ್ಗಿ ನಾಶಗೊಳಿಸು” ಎಂದು ಯೆಹೋವನೇ ನನಗೆ ಆಜ್ಞಾಪಿಸಿದನು ಎಂದು ಹೇಳಿದನು.
26 ನಂತರ ಹಿಲ್ಕೀಯನ ಮಗನಾದ ಎಲ್ಯಾಕೀಮ್, ಶೆಬ್ನ ಮತ್ತು ಯೋವ ಎಂಬುವರು ಸೇನಾಧಿಪತಿಗೆ, “ದಯವಿಟ್ಟು ನಮ್ಮೊಂದಿಗೆ ಅರಾಮ್ಯರ ಭಾಷೆಯಲ್ಲಿ ಮಾತನಾಡು. ನಾವು ಆ ಭಾಷೆಯನ್ನು ಅರ್ಥಮಾಡಿಕೊಳ್ಳುತ್ತೇವೆ. ಗೋಡೆಯ ಮೇಲಿರುವ ಜನರಿಗೆ ನಮ್ಮ ಮಾತುಗಳು ಕೇಳುವುದರಿಂದ ಯೆಹೂದದ ಭಾಷೆಯಲ್ಲಿ ನಮ್ಮೊಂದಿಗೆ ಮಾತನಾಡಬೇಡ” ಎಂದು ಹೇಳಿದರು.
27 ಆದರೆ ರಬ್ಷಾಕೆಯು ಅವರಿಗೆ, “ನನ್ನ ಒಡೆಯನು ನನ್ನನ್ನು ಕಳುಹಿಸಿದ್ದು ನಾನು ನಿಮ್ಮೊಂದಿಗೆ ಮತ್ತು ನಿಮ್ಮ ರಾಜನೊಂದಿಗೆ ಮಾತ್ರ ಮಾತಾಡುವುದಕ್ಕಲ್ಲ. ಗೋಡೆಯ ಮೇಲೆ ಕುಳಿತಿರುವ ಇತರ ಜನರೊಂದಿಗೂ ನಾನು ಮಾತನಾಡುತ್ತೇನೆ! ಅವರು ನಿಮ್ಮೊಂದಿಗಿದ್ದರೆ ತಮ್ಮ ಮಲವನ್ನು ತಾವೇ ತಿನ್ನಬೇಕಾಗುತ್ತದೆ ಮತ್ತು ತಮ್ಮ ಮೂತ್ರವನ್ನು ತಾವೇ ಕುಡಿಯಬೇಕಾಗುತ್ತದೆ!” ಎಂದು ಹೇಳಿದನು.
28 ನಂತರ ಸೇನಾಧಿಪತಿಯು ಯೂದಾಯ ಭಾಷೆಯಲ್ಲಿ ಗಟ್ಟಿಯಾಗಿ, “ಅಶ್ಶೂರದ ಮಹಾರಾಜನ ಈ ಸಂದೇಶವನ್ನು ಕೇಳಿರಿ!
29 ನಿಮ್ಮನ್ನು ಮೂರ್ಖರನ್ನಾಗಿಸಲು ಹಿಜ್ಕೀಯನಿಗೆ ಅವಕಾಶ ಕೊಡಬೇಡಿ! ನನ್ನ ಶಕ್ತಿಯಿಂದ ಅವನು ನಿಮ್ಮನ್ನು ರಕ್ಷಿಸಲಾಗುವುದಿಲ್ಲ.
30 ಯೆಹೋವನನ್ನು ನೀವು ನಂಬುವಂತೆ ಮಾಡಲು ಹಿಜ್ಕೀಯನಿಗೆ ಅವಕಾಶ ನೀಡಬೇಡಿ! ‘ಯೆಹೋವನು ನಮ್ಮನ್ನು ರಕ್ಷಿಸುತ್ತಾನೆ! ಅಶ್ಶೂರದ ರಾಜನು ಈ ನಗರವನ್ನು ಸೋಲಿಸಲಾಗುವುದಿಲ್ಲ!’ ಎಂದು ಹಿಜ್ಕೀಯನು ಹೇಳುತ್ತಾನೆ.
31 ಆದರೆ ಹಿಜ್ಕೀಯನ ಮಾತುಗಳನ್ನು ಕೇಳಬೇಡಿ!” ಎಂದು ಹೇಳಿದನು. “ಅಶ್ಶೂರದ ರಾಜ ಹೀಗೆ ಹೇಳುತ್ತಾನೆ: ‘ನನ್ನೊಂದಿಗೆ ಶಾಂತಿ ಒಪ್ಪಂದ ಮಾಡಿಕೊಂಡು ನನ್ನ ಆಶ್ರಯಕ್ಕೆ ಬನ್ನಿರಿ. ನಂತರ ಪ್ರತಿಯೊಬ್ಬರೂ ತನ್ನ ಸ್ವಂತ ದ್ರಾಕ್ಷಿಯನ್ನು ತಿನ್ನಬಹುದು; ತನ್ನ ಸ್ವಂತ ಅಂಜೂರವನ್ನು ತಿನ್ನಬಹುದು; ತನ್ನ ಸ್ವಂತ ಬಾವಿಯಿಂದ ನೀರನ್ನು ಕುಡಿಯಬಹುದು.
32 ನಾನು ಬಂದು, ನಿಮ್ಮನ್ನು ಈ ದೇಶಕ್ಕೆ ಸಮಾನವಾದ ಬೇರೊಂದು ದೇಶಕ್ಕೆ ಕರೆದೊಯ್ಯುವವರೆಗೆ ನೀವು ಹೀಗೆ ಮಾಡಬಹುದು. ಆ ದೇಶವು ಧಾನ್ಯ, ದ್ರಾಕ್ಷಾರಸ, ಆಹಾರ, ದ್ರಾಕ್ಷಿತೋಟ, ಆಲೀವ್ ಮರ ಮತ್ತು ಜೇನುತುಪ್ಪ ಮುಂತಾದವುಗಳಿಂದ ಸಮೃದ್ಧಿಯಾಗಿದೆ. ನೀವು ಅಲ್ಲಿ ಸಾಯದೆ ಜೀವಿಸಬಹುದು. ಆದರೆ ಹಿಜ್ಕೀಯನ ಮಾತುಗಳನ್ನು ಕೇಳಬೇಡಿ! ಅವನು ನಿಮ್ಮ ಮನಸ್ಸನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾನೆ’ ‘ಯೆಹೋವನು ನಮ್ಮನ್ನು ರಕ್ಷಿಸುತ್ತಾನೆ’ ಎಂದು ಅವನು ಹೇಳುತ್ತಾನೆ.
33 ಬೇರೆ ಜನಾಂಗಗಳ ದೇವರುಗಳು ಅವರ ದೇಶಗಳನ್ನು ಅಶ್ಶೂರದ ರಾಜನಿಗೆ ಸಿಗದಂತೆ ರಕ್ಷಿಸಿದನೇ? ಇಲ್ಲ!
34 ಹಮಾತ್ ಮತ್ತು ಅರ್ಪಾದ್ ದೇವರುಗಳು ಎಲ್ಲಿವೆ? ಸೆಫರ್ವಯಿಮ್, ಹೇನ, ಇವ್ವಾದ ದೇವರುಗಳು ಎಲ್ಲಿವೆ? ಸಮಾರ್ಯವನ್ನು ನನ್ನ ಕೈಗೆ ಸಿಗದಂತೆ ಅವು ರಕ್ಷಿಸಿದವೇ? ಇಲ್ಲ!
35 ಬೇರೆ ಜನಾಂಗಗಳ ದೇವತೆಗಳು ಯಾವುದಾದರೂ ತಮ್ಮ ದೇಶವನ್ನು ನನ್ನಿಂದ ರಕ್ಷಿಸುತ್ತವೆಯೇ? ಇಲ್ಲ! ಜೆರುಸಲೇಮನ್ನು ಯೆಹೋವನು ನನ್ನಿಂದ ರಕ್ಷಿಸುತ್ತಾನೆಯೇ ಇಲ್ಲ!”
36 ಆದರೆ ಜನರೆಲ್ಲರೂ ಸುಮ್ಮನಿದ್ದರು, ರಾಜನಾದ ಹಿಜ್ಕೀಯನು ಜನರಿಗೆ ಆಜ್ಞಾಪಿಸಿದ್ದರಿಂದ ಅವರು ಸೇನಾಧಿಪತಿಯೊಂದಿಗೆ ಒಂದು ಮಾತನ್ನೂ ಆಡಲಿಲ್ಲ. “ಅವನಿಗೆ ಏನನ್ನೂ ಹೇಳಬೇಡಿ” ಎಂದು ಹಿಜ್ಕೀಯನು ಹೇಳಿದ್ದನು.
37 ಹಿಲ್ಕೀಯನ ಮಗನೂ ರಾಜಗೃಹಾಧಿಪತಿಯೂ ಅದ ಎಲ್ಯಾಕೀಮ್, ಕಾರ್ಯದರ್ಶಿಯಾದ ಶೆಬ್ನ ಮತ್ತು ಆಸಾಫನ ಮಗನೂ ಮಂತ್ರಿಯೂ ಆಗಿದ್ದ ಯೋವ ಹಿಜ್ಕೀಯನ ಬಳಿಗೆ ಬಂದರು. ಅವರು ದುಃಖದಿಂದ ತಮ್ಮ ಬಟ್ಟೆಗಳನ್ನು ಹರಿದುಕೊಂಡಿದ್ದರು. ಅಶ್ಶೂರದ ಸೇನಾಧಿಪತಿಯಾದ ರಬ್ಷಾಕೆಯು ಹೇಳಿದ ಸಂಗತಿಗಳನ್ನು ಅವರು ಹಿಜ್ಕೀಯನಿಗೆ ತಿಳಿಸಿದರು.

2-Kings 18:12 Kannada Language Bible Words basic statistical display

COMING SOON ...

×

Alert

×