ಯೆಹೋವನು ಅವನಿಗೆ ಹೀಗೆ ಹೇಳಿದನು: “ನಿನ್ನ ಪ್ರಾರ್ಥನೆಯು ನನಗೆ ಕೇಳಿಸಿತು. ನಿನ್ನ ಬಿನ್ನಹಗಳನ್ನು ಆಲಿಸಿದೆನು. ಈ ಆಲಯವನ್ನು ನೀನು ಕಟ್ಟಿಸಿದೆ. ನಾನು ಅದನ್ನು ಪವಿತ್ರಸ್ಥಳವನ್ನಾಗಿ ಮಾಡಿದೆ. ಆದುದರಿಂದ ನಾನಿಲ್ಲಿ ಸದಾಕಾಲ ಸನ್ಮಾನಿಸಲ್ಪಡುವೆನು. ನನ್ನ ದೃಷ್ಟಿಯೂ ಮನಸ್ಸೂ ಸದಾ ಅದರ ಮೇಲಿರುತ್ತದೆ.
ನಿನ್ನ ತಂದೆಯಾದ ದಾವೀದನು ಸೇವೆ ಮಾಡಿದಂತೆ ನೀನೂ ನನ್ನ ಸೇವೆಮಾಡಬೇಕು, ಅವನು ನ್ಯಾಯವಂತನಾಗಿದ್ದನು ಮತ್ತು ಯಥಾರ್ಥವಂತನಾಗಿದ್ದನು; ನೀನು ನನ್ನ ನಿಯಮಗಳಿಗೆ ವಿಧೇಯನಾಗಿರಬೇಕು ಮತ್ತು ನಾನು ನಿನಗೆ ಆಜ್ಞಾಪಿಸಿದವುಗಳನ್ನೆಲ್ಲ ಮಾಡಬೇಕು.
“ನೀನು ಅವುಗಳನ್ನೆಲ್ಲಾ ಕೈಕೊಂಡು ನಡೆದರೆ ಯಾವಾಗಲೂ ನಿನ್ನ ಕುಟುಂಬದ ಯಾವನಾದರೊಬ್ಬನು ಇಸ್ರೇಲಿನ ರಾಜನಾಗಿರುತ್ತಾನೆಂದು ನಾನು ನಿನಗೆ ವಾಗ್ದಾನ ಮಾಡುತ್ತೇನೆ. ನಿನ್ನ ತಂದೆಯಾದ ದಾವೀದನಿಗೆ ನಾನು ಈ ವಾಗ್ದಾನವನ್ನು ಮಾಡಿದ್ದೆನು. ಯಾವಾಗಲೂ ಅವನ ಸಂತತಿಯವರಲ್ಲಿ ಯಾವನಾದರೊಬ್ಬನು ಇಸ್ರೇಲನ್ನು ಆಳುತ್ತಾನೆಂದು ನಾನು ಅವನಿಗೆ ಹೇಳಿದ್ದೆನು.
ಈ ಆಲಯವನ್ನು ನಾಶಗೊಳಿಸುತ್ತೇನೆ. ಇದನ್ನು ನೋಡುವ ಪ್ರತಿಯೊಬ್ಬರೂ ವಿಸ್ಮಿತರಾಗುವರು. ‘ಈ ದೇಶಕ್ಕೂ ಈ ಆಲಯಕ್ಕೂ ಇಂತಹ ಭೀಕರ ಕಾರ್ಯವನ್ನು ಯೆಹೋವನು ಏಕೆ ಮಾಡಿದನು?’ ಎಂದು ಜನರು ಕೇಳುತ್ತಾರೆ.
ರಾಜನಾದ ಸೊಲೊಮೋನನು ಇಪ್ಪತ್ತು ವರ್ಷಗಳ ತರುವಾಯ ಗಲಿಲಾಯದ ಇಪ್ಪತ್ತು ಪಟ್ಟಣಗಳನ್ನು ತೂರಿನ ರಾಜನಾದ ಹೀರಾಮನಿಗೆ ಬಿಟ್ಟುಕೊಟ್ಟನು. ಆಲಯವನ್ನು ಮತ್ತು ಅರಮನೆಯನ್ನು ನಿರ್ಮಿಸಲು ಹೀರಾಮನು ಸಹಾಯ ಮಾಡಿದ್ದರಿಂದ ಸೊಲೊಮೋನನು ಹೀರಾಮನಿಗೆ ಈ ಪಟ್ಟಣಗಳನ್ನು ಕೊಟ್ಟನು. ಸೊಲೊಮೋನನು ಅಪೇಕ್ಷಿಸಿದ ದೇವದಾರು ಮರಗಳನ್ನು, ತುರಾಯಿ ಮರಗಳನ್ನು ಮತ್ತು ಬಂಗಾರವನ್ನು ಹೀರಾಮನು ಕೊಟ್ಟಿದ್ದನು.
ರಾಜನಾದ ಹೀರಾಮನು, “ಸಹೋದರನೇ, ನೀನು ನನಗೆ ಕೊಟ್ಟಿರುವ ಪಟ್ಟಣಗಳು ಏಕೆ ಹೀಗಿವೆ?” ಎಂದು ಕೇಳಿದನು. ರಾಜನಾದ ಹೀರಾಮನು ಆ ದೇಶಕ್ಕೆ ಕಾಬೂಲ್ ದೇಶವೆಂದು ಹೆಸರಿಟ್ಟನು. ಆ ಪ್ರದೇಶವನ್ನು ಇಂದಿಗೂ ಕಾಬೂಲ್ ಎಂದೇ ಕರೆಯುತ್ತಾರೆ.
ರಾಜನಾದ ಸೊಲೊಮೋನನು ತಾನು ನಿರ್ಮಿಸಿದ್ದ ಆಲಯದ ಮತ್ತು ಅರಮನೆಯ ಕೆಲಸಗಳನ್ನು ಮಾಡಲು ಗುಲಾಮರನ್ನು ಬಲಾತ್ಕರಿಸಿದನು. ರಾಜನಾದ ಸೊಲೊಮೋನನು ಇತರ ಅನೇಕ ಕಟ್ಟಡಗಳ ನಿರ್ಮಾಣಕ್ಕೆ ಬಿಟ್ಟಿಕೆಲಸದವರನ್ನು ಉಪಯೋಗಿಸಿಕೊಂಡನು. ಅವನು ಮಿಲ್ಲೋ ಕೋಟೆಯನ್ನು ನಿರ್ಮಿಸಿದನು; ಜೆರುಸಲೇಮಿನ ಸುತ್ತಲೂ ನಗರದ ಗೋಡೆಯನ್ನು ಕಟ್ಟಿಸಿದನು; ಅಲ್ಲದೆ ಅವನು ಹಾಚೋರ್, ಮೆಗಿದ್ದೋ ಮತ್ತು ಗೆಜೆರ್ ನಗರಗಳನ್ನು ಕಟ್ಟಿಸಿದನು.
ಹಿಂದೊಮ್ಮೆ, ಈಜಿಪ್ಟಿನ ರಾಜನು ಗೆಜೆರ್ ನಗರದ ವಿರುದ್ದ ಹೋರಾಟಮಾಡಿ, ಅದನ್ನು ಸುಟ್ಟುಹಾಕಿದ್ದನು. ಅವನು ಅಲ್ಲಿ ನೆಲೆಸಿದ್ದ ಕಾನಾನ್ಯ ಜನರನ್ನು ಕೊಂದು ಹಾಕಿದ್ದನು. ಸೊಲೊಮೋನನು ಫರೋಹನ ಮಗಳನ್ನು ಮದುವೆಯಾದನು. ಆದುದರಿಂದ ಫರೋಹನು ಆ ನಗರವನ್ನು ಸೊಲೊಮೋನನಿಗೆ ಮದುವೆಯ ಕೊಡುಗೆಯಾಗಿ ಕೊಟ್ಟನು.
ಧಾನ್ಯಗಳನ್ನು ಮತ್ತು ಇತರ ವಸ್ತುಗಳನ್ನು ಸಂಗ್ರಹಿಸುವ ಉಗ್ರಾಣನಗರಗಳನ್ನು ಸಹ ಕಟ್ಟಿಸಿದನು; ತನ್ನ ರಥಗಳಿಗೆ ಮತ್ತು ಕುದುರೆಗಳಿಗೆ ತಾಣವಾದ ಸ್ಥಳಗಳನ್ನೂ ಕಟ್ಟಿಸಿದನು; ತಾನು ಆಳುತ್ತಿದ್ದ ಜೆರುಸಲೇಮಿನಲ್ಲಿ, ಲೆಬನೋನಿನಲ್ಲಿ, ಮತ್ತಿತರ ಎಲ್ಲಾ ಸ್ಥಳಗಳಲ್ಲಿ ತಾನು ಅಪೇಕ್ಷಿಸಿದ ಕಟ್ಟಡಗಳನ್ನೆಲ್ಲ ಕಟ್ಟಿಸಿದನು.
ಸೊಲೊಮೋನನು ಇಸ್ರೇಲರಾದ ಯಾರನ್ನೂ ತನ್ನ ಗುಲಾಮರಾಗಲು ಬಲಾತ್ಕರಿಸಲಿಲ್ಲ. ಇಸ್ರೇಲಿನ ಜನರು ಸೈನಿಕರಾಗಿದ್ದರು; ಸರ್ಕಾರದ ನೌಕರರಾಗಿದ್ದರು; ಅಧಿಕಾರಿಗಳಾಗಿದ್ದರು; ಸೇನಾಪತಿಗಳಾಗಿದ್ದರು; ರಥಾಶ್ವಗಳಿಗೂ ಅಶ್ವಪೇದೆಗೂ ಮಹಾ ಸೇನಾಧಿಪತಿಗಳಾಗಿದ್ದರು.
ಸೊಲೊಮೋನನು ಪ್ರತಿವರ್ಷದಲ್ಲೂ ಮೂರು ಸಲ ಸರ್ವಾಂಗಹೋಮಗಳನ್ನು, ಸಮಾಧಾನಯಜ್ಞಗಳನ್ನು ಯಜ್ಞವೇದಿಕೆಯ ಮೇಲೆ ಅರ್ಪಿಸುತ್ತಿದ್ದನು. ಈ ಯಜ್ಞವೇದಿಕೆಯನ್ನು ಸೊಲೊಮೋನನು ಯೆಹೋವನಿಗಾಗಿ ನಿರ್ಮಿಸಿದನು. ರಾಜನಾದ ಸೊಲೊಮೋನನು ಯೆಹೋವನ ಮುಂದೆ ಸುಗಂಧ ಧೂಪವನ್ನು ಸುಡುತ್ತಿದ್ದನು. ಅವನು ಆಲಯಕ್ಕೆ ಬೇಕಾದ ವಸ್ತುಗಳನ್ನು ಕೊಡುತ್ತಿದ್ದನು.
ಸಮುದ್ರದ ಬಗ್ಗೆ ಹೆಚ್ಚಿಗೆ ತಿಳಿದಿರುವ ಕೆಲವು ಜನರು ರಾಜನಾದ ಹೀರಾಮನ ಹತ್ತಿರ ಇದ್ದರು. ಅವರು ಅನುಭವಸ್ತ ನಾವಿಕರಾಗಿದ್ದರು. ಸೊಲೊಮೋನನ ಹಡಗುಗಳಲ್ಲಿ ಅವನ ಜನರೊಡನೆ ಕೆಲಸಮಾಡಲು, ರಾಜನಾದ ಹೀರಾಮನು ತನ್ನ ನಿಪುಣರಾದ ಜನರನ್ನು ಕಳುಹಿಸಿದನು.